ಗುಂಡ್ಲುಪೇಟೆ ವ್ಯಾಪ್ತಿಯ ಕೆರೆಗಳಲ್ಲಿ ಜೀವ ಕಳೆ: ರೈತರಿಗೆ ಖುಷಿಯೋ ಖುಷಿ
ಚಾಮರಾಜನಗರ, ಜನವರಿ 02: ಚಾಮರಾಜನಗರ ತಾಲೂಕಿನ ಬಹುತೇಕ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಹಲವು ಸಮಯಗಳಿಂದ ನಡೆಯುತ್ತಿದ್ದು, ನೀರಿಲ್ಲದೆ ಬರಡಾಗಿದ್ದ ಹಲವು ಕೆರೆಗಳು ಇದೀಗ ನೀರು ತುಂಬಿಕೊಂಡು ನಳನಳಿಸುತ್ತಿವೆ. ಕೆರೆಗಳು ತುಂಬುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಗಳ ರೈತರ ಮೊಗದಲ್ಲಿ ಮಂದಹಾಸ ಮಿನುಗತೊಡಗಿದೆ.
ಬರದಿಂದಾಗಿ ಎರಡು ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಲವು ಕೆರೆಗಳು ಒಣಗಿ ಹೋಗಿದ್ದವು. ರೈತರು ಕೃಷಿ ಮಾಡುವುದಿರಲಿ, ಜನ ಜಾನುವಾರುಗಳಿಗೆ ನೀರಿಲ್ಲದೆ ಪರದಾಡುವಂತಾಗಿತ್ತು. ಕೆರೆಗಳಲ್ಲಿ ಗಿಡಗಂಟಿಗಳು, ಮುಳ್ಳುಗಿಡಗಳು ಬೆಳೆದರೆ, ಸುತ್ತಮುತ್ತಲ ಗ್ರಾಮಗಳ ಜಮೀನಿನಲ್ಲಿದ್ದ ಕೊಳವೆ ಬಾವಿಗಳು ಅಂತರ್ಜಲವಿಲ್ಲದೆ ಬತ್ತಿ ಹೋಗಿದ್ದವು. ಜತೆಗೆ ಇಲ್ಲಿನ ಕೃಷಿಕರು ಬರದಿಂದಾಗಿ ಬೆಳೆ ಬೆಳೆಯಲಾಗದೆ ಕೆಲಸ ಹುಡುಕಿಕೊಂಡು ಕೇರಳಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈಚೆಗೆ ಈ ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ಹಲವು ಕೆರೆಗಳು ಮಳೆ ನೀರಿನಿಂದ ತುಂಬಿದ್ದರೆ, ಮತ್ತೆ ಕೆಲವು ಕೆರೆಗಳಿಗೆ ನದಿಯಿಂದ ನೀರನ್ನು ಹರಿಸುವ ಮೂಲಕ ತುಂಬಿಸಲಾಗುತ್ತಿದೆ. ಅದರಂತೆ ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆ ಕೆರೆಗೆ ನೀರು ಕಪಿಲ ನದಿಯಿಂದ ಹರಿದು ಬರುತ್ತಿದ್ದು, ಕೆರೆ ಕೋಡಿ ಬಿದ್ದಿದೆ. ಕೆರೆಯು ತುಂಬಿ ಕಟ್ಟೆಯ ಮೇಲೆ ಹರಿದು ಹೋಗುತ್ತಿರುವ ದೃಶ್ಯ ಮನಮೋಹಕವಾಗಿದೆ. ಕೃಷಿಕರೂ ಕೃಷಿ ಮಾಡಲು ಮುಂದಾಗಿದ್ದಾರೆ. ಸುತ್ತಮುತ್ತಲ ಜಮೀನಿನ ಕೊಳವೆ ಬಾವಿ ಹೊಂದಿರುವ ರೈತರು ಅಂತರ್ಜಲ ಹೆಚ್ಚಾಗಲಿದೆ, ಜಾನುವಾರುಗಳಿಗೆ ಕುಡಿಯಲು ನೀರು ಬಂದಿದೆ ಎಂಬ ಖುಷಿಯಲ್ಲಿದ್ದಾರೆ.

ಇದೀಗ ಹುತ್ತೂರಿನಿಂದ ವಡ್ಡಗೆರೆ ಕೆರೆಗೆ ನದಿ ನೀರು ಹರಿದು ಬರುತ್ತಿದೆ. ಕಳೆದ ಹದಿನೈದು ದಿನಗಳಿಂದ ನೀರು ಹರಿದು ಬರುತ್ತಿದ್ದು ವಡ್ಡಗೆರೆ ಕೆರೆ ತುಂಬಿರುವುದರಿಂದ ಇಲ್ಲಿಂದ ನೀರು ಸಮೀಪದ ಕರಕಲ ಮಾದಹಳ್ಳಿ ಕೆರೆಗೂ ಹರಿದು ಹೋಗುತ್ತಿದೆ. ಮುಂದೆ ದಾರಿಬೇಗೂರು ಹಾಗೂ ಯರಿಯೂರು ಕೆರೆಗಳಿಗೆ ಈ ನೀರು ಹರಿಯಲಿದೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ಈ ವ್ಯಾಪ್ತಿಯ ಬಹುತೇಕ ಕೆರೆಗಳು ಭರ್ತಿಯಾಗಲಿದ್ದು, ಕೆರೆ ವ್ಯಾಪ್ತಿಯಲ್ಲಿರುವ ಗ್ರಾಮಸ್ಥರು ಮತ್ತು ರೈತರು ನೆಮ್ಮದಿಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ.

ಇದೆಲ್ಲದರ ನಡುವೆ ವಡ್ಡಗೆರೆ ಕೆರೆಯತ್ತ ಮಾತ್ರ ಜನ ಹೆಚ್ಚಿನ ಸಂಖ್ಯೆಯಲ್ಲಿಯೇ ಬರತೊಡಗಿದ್ದಾರೆ. ಕೆರೆಯಲ್ಲಿ ನೀರು ನೋಡಿ ಅದೆಷ್ಟೋ ವರ್ಷಗಳಾಗಿತ್ತು. ಇದೀಗ ಕೆರೆ ತುಂಬಿ ಕೋಡಿ ಬಿದ್ದಿರುವುದನ್ನು ನೋಡುವುದೇ ಸ್ಥಳೀಯರಿಗೆ ಮಹದಾನಂದವಾಗಿದೆ.












Click it and Unblock the Notifications