ಕೊಡಗಿನ ಜಲಪ್ರಳಯಕ್ಕೆ ಕೊಳ್ಳೇಗಾಲದ ಊರುಗಳು ನೀರುಪಾಲು!

ಮೈಸೂರು, ಆಗಸ್ಟ್ 19: ಕೊಡಗು ಜಿಲ್ಲೆಯ ಮಡಿಕೇರಿ ವ್ಯಾಪ್ತಿಯಲ್ಲಿ ಮಳೆ ಧಾರಾಕಾರವಾಗಿ ಸುರಿದು, ಬೆಟ್ಟ- ಗುಡ್ಡಗಳು ಕುಸಿಯುತ್ತಿವೆ. ಕಾವೇರಿ ರೌದ್ರತೆಯನ್ನು ತಾಳಿ, ಕೆಆರ್ ಎಸ್ ಜಲಾಶಯವನ್ನು ತಲುಪುತ್ತಿದ್ದು, ಪರಿಣಾಮ ಲಕ್ಷಾಂತರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಮಂಡ್ಯ ಮತ್ತು ಚಾಮರಾಜನಗರದ ಕೆಲವು ಭಾಗಗಳಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನ ಸಂಕಷ್ಟಕ್ಕೀಡಾಗಿದ್ದಾರೆ.

ಈಗಾಗಲೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಮಳವಳ್ಳಿ ಪ್ರದೇಶಗಳ ಬಹುತೇಕ ಕಡೆ ಮನೆಗಳು, ಕಟ್ಟಡಗಳು, ದೇವಾಲಯ, ಕೃಷಿ ಭೂಮಿ ಕಾವೇರಿಯ ಪಾಲಾಗಿದ್ದು, ಹಲವು ಮಂದಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬರುವಂತಾಗಿದೆ.

ಅದರಲ್ಲೂ ತೀರಾ ಹಿಂದುಳಿದ ಜಿಲ್ಲೆ ಹಾಗೂ ಬರದಲ್ಲಿ ಬೇಯುತ್ತಿದ್ದ ಚಾಮರಾಜನಗರದ ಕೊಳ್ಳೇಗಾಲ ವ್ಯಾಪ್ತಿಯಲ್ಲಿ ಜನ ತಮ್ಮ ಊರು ನೀರಿನಲ್ಲಿ ಮುಳುಗಡೆ ಆಗಿರುವುದರಿಂದ ಜೀವ ಉಳಿದರೆ ಸಾಕೆಂಬ ಸ್ಥಿತಿಗೆ ಬಂದು ತಲುಪಿದ್ದಾರೆ.

ಒಂದು ಕಡೆಯಿಂದ ಕಬಿನಿ ಮತ್ತೊಂದು ಕಡೆಯಿಂದ ಕಾವೇರಿ ಎರಡೂ ನದಿಗಳು ಸಂಗಮವಾಗಿ ಇತ್ತ ಹರಿದು ಬರುತ್ತಿರುವುದರಿಂದಾಗಿ ಊರಿಗೆ ಊರೇ ಮುಳುಗುವಂತಾಗಿದೆ. ನೀರು ಒಮ್ಮೆಲೆ ಹರಿದು ಬಂದ ಕಾರಣ ಇದುವರೆಗೆ ಪ್ರವಾಹದ ಭಯವಿಲ್ಲದೆ ನೆಮ್ಮದಿಯಾಗಿದ್ದ ಜನ ಇದೀಗ ತಮಗೆ ಒದಗಿ ಬಂದ ದುಃಸ್ಥಿತಿಗೆ ಮಮ್ಮಲ ಮರುಗುತ್ತಿದ್ದಾರೆ.

ಕೊಳ್ಳೇಗಾಲದ ಹತ್ತಾರು ಗ್ರಾಮಗಳು ಜಲಾವೃತ

ಕೊಳ್ಳೇಗಾಲದ ಹತ್ತಾರು ಗ್ರಾಮಗಳು ಜಲಾವೃತ

ಈಗ ಕಾವೇರಿ ನದಿಯಲ್ಲಿ ಸುಮಾರು ಎರಡು ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಕೃಷಿ ಜಮೀನು, ನದಿ ಪಾತ್ರಗಳ ಮನೆಗಳಿಗೆ ನುಗ್ಗಿದ ನೀರು ಸದ್ಯದ ಮಟ್ಟಿಗೆ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಕೊಳ್ಳೇಗಾಲ ತಾಲೂಕಿನ ಕಾವೇರಿ ನದಿ ದಡದಲ್ಲಿರುವ ಗ್ರಾಮಗಳಾದ ದಾಸನಪುರ, ಕಾವೇರಿ ಪುರ, ಮುಳ್ಳೂರು, ಹಂಪಾಪುರ, ಹಳೇ ಹಂಪಾಪುರ, ಹರಳೆ ಸೇರಿದಂತೆ ಹಲವು ಗ್ರಾಮಗಳು ಜಲಾವೃತಗೊಂಡಿವೆ.

ತೆಪ್ಪದ ಮೂಲಕ ಜನರ ರಕ್ಷಣೆ

ತೆಪ್ಪದ ಮೂಲಕ ಜನರ ರಕ್ಷಣೆ

ಇಲ್ಲಿ ಸಿಲುಕಿಕೊಂಡಿದ್ದ ಜನರನ್ನು ತೆಪ್ಪದ ಮೂಲಕ ರಕ್ಷಿಸಿ, ಕೊಳ್ಳೇಗಾಲದ ಗಂಜಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಸದ್ಯ ಜನರೇನೋ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಜಾನುವಾರು ಮತ್ತು ಮೇಕೆ, ಕುರಿಗಳು, ಕೋಳಿ, ನಾಯಿಗಳು ಏನಾದವೋ ಎಂಬ ಚಿಂತೆ ಸಂತ್ರಸ್ತರನ್ನು ಕಾಡತೊಡಗಿದೆ.

ಸಂತ್ರಸ್ತರ ಯೋಗಕ್ಷೇಮ ವಿಚಾರಣೆ

ಸಂತ್ರಸ್ತರ ಯೋಗಕ್ಷೇಮ ವಿಚಾರಣೆ

ಜಿಲ್ಲಾಡಳಿತವು ಪ್ರವಾಹ ಪ್ರದೇಶಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಸಚಿವರಾದ ಪುಟ್ಟರಂಗಶೆಟ್ಟಿ, ಎನ್.ಮಹೇಶ್, ಸಂಸದ ಧ್ರುವನಾರಾಯಣ್ ಸೇರಿದಂತೆ ಅಧಿಕಾರಿಗಳು ತೆರಳಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದ್ದಲ್ಲದೆ, ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ.

ಮನೆ ಬಿಟ್ಟು ಬರಲು ಒಪ್ಪದ ವೃದ್ಧ ದಂಪತಿ

ಮನೆ ಬಿಟ್ಟು ಬರಲು ಒಪ್ಪದ ವೃದ್ಧ ದಂಪತಿ

ಆದರೆ, ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಜನ ಮಾತ್ರ ನೆಮ್ಮದಿಯಾಗಿಲ್ಲ. ಅವರ ಕಣ್ಣೀರು ನಿಲ್ಲುತ್ತಿಲ್ಲ. ಎಲ್ಲವೂ ಇದ್ದು ಈಗ ಕಳೆದುಕೊಂಡು ಬದುಕಬೇಕಾಯಿತಲ್ಲ ಎಂಬ ನೋವು ಅವರನ್ನು ಕಾಡುತ್ತಿದೆ. ಈ ಎಲ್ಲದರ ಮಧ್ಯೆ ದಾಸನಪುರ ಎಂಬ ಗ್ರಾಮವನ್ನು ಕಾವೇರಿ ನೀರು ಸುತ್ತುವರೆದಿದ್ದು, ಈ ವೇಳೆ ಗ್ರಾಮದ ಜನ ರಾತ್ರೋ ರಾತ್ರಿ ಮನೆಯನ್ನು ತೊರೆದು ಗಂಜಿ ಕೇಂದ್ರಕ್ಕೆ ಬಂದಿದ್ದಾರೆ. ಅಲ್ಲಿದ್ದ ನಂಜುಂಡನಾಯ್ಕ ಮತ್ತು ವೆಂಕಟಮ್ಮ ಎಂಬ ದಂಪತಿ ಮಾತ್ರ ತಾವು ಮನೆ ಬಿಟ್ಟು ಬರುವುದಿಲ್ಲ. ಇದು ಪೂರ್ವಜರು ಬಾಳಿದ ಮನೆ. ನಾವು ಸತ್ತರೂ ಇಲ್ಲಿಯೇ ಸಾಯುತ್ತೇವೆ. ಆದರೆ ಯಾವ ಕಾರಣಕ್ಕೂ ಗಂಜಿ ಕೇಂದ್ರಕ್ಕೆ ಬರಲ್ಲ ಎಂದು ಹಠ ಹಿಡಿದು ಕೂತಿದ್ದಾರೆ ಎನ್ನಲಾಗಿದೆ.

ಮುಳುಗಿದ ವೆಸ್ಲೀ ಸೇತುವೆ

ಮುಳುಗಿದ ವೆಸ್ಲೀ ಸೇತುವೆ

ಈಗಾಗಲೇ ಭಾಗಶಃ ಕುಸಿದು ಬಿದ್ದಿರುವ ಎರಡು ಶತಮಾನ ಕಂಡಿರುವ ಶಿವನಸಮುದ್ರ ಬಳಿಯ ವೆಸ್ಲೀ ಸೇತುವೆ ನೀರಿನಲ್ಲಿ ಮುಳುಗಡೆಯಾಗಿದ್ದು, ಸೇತುವೆಯ ಅಳಿದುಳಿದ ಭಾಗ ನೀರಿನಲ್ಲಿ ಕೊಚ್ಚಿ ಹೋದರೂ ಅಚ್ಚರಿ ಪಡಬೇಕಾಗಿಲ್ಲ. ಬಹಳಷ್ಟು ವರ್ಷಗಳ ಬಳಿಕ ಭಾರೀ ಪ್ರವಾಹ ಬಂದಿದ್ದು, ಕೊಡಗಿನಿಂದ ಆರಂಭವಾಗಿ ಕೊಳ್ಳೇಗಾಲದ ತನಕ ಕಾವೇರಿ ನದಿ ಪಾತ್ರದ ಜನರ ನೆಮ್ಮದಿ ಕಳೆದುಕೊಂಡು, ಭಯದಲ್ಲೇ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ಯಾವಾಗ ಶಾಂತಳಾಗುತ್ತಾಳೋ, ಪ್ರವಾಹ ಯಾವಾಗ ಅಂತ್ಯ ಕಾಣುತ್ತದೆಯೋ ಎಂದು ಎಲ್ಲರೂ ಕಾಯುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+