ಕೊಳ್ಳೇಗಾಲದಲ್ಲಿ ಕೋಳಿ ಕಾಳಗ: ಒಬ್ಬ ಸಿಕ್ಕಿಬಿದ್ದ, 11 ಮಂದಿ ಎಸ್ಕೇಪ್
ಚಾಮರಾಜನಗರ, ಜನವರಿ 21: ಕೋಳಿ ಕಾಳಗದ ಮೂಲಕ ಜೂಜಾಡುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು ಎರಡು ಕೋಳಿ ಹಾಗೂ ಪಣಕ್ಕಿಟ್ಟಿದ್ದ ಹಣದೊಂದಿಗೆ ಒಬ್ಬನನ್ನು ಬಂಧಿಸಿರುವ ಘಟನೆ ಕೊಳ್ಳೇಗಾಲದ ಹೂಗ್ಯಂ ಗ್ರಾಮದಲ್ಲಿ ನಡೆದಿದೆ.
ದಾಳಿ ವೇಳೆ ಹನ್ನೊಂದು ಮಂದಿ ಪರಾರಿಯಾಗಿದ್ದಾರೆ. ಹೂಗ್ಯಂ ಗ್ರಾಮದ ಹಳ್ಳದ ಬಳಿಯಲ್ಲಿ ಹಣವನ್ನು ಪಣವಿಟ್ಟು 12 ಮಂದಿ ಕೋಳಿ ಕಾಳಗ ನಡೆಸುತ್ತಿದ್ದಾರೆ ಎಂಬ ಮಾಹಿತಿ ಡಿವೈಎಸ್ಪಿ ಸ್ನೇಹಾ ಅವರಿಗೆ ತಲುಪಿತ್ತು.
ವಿಕ್ಷಣಾದಳದ ತಂಡದೊಂದಿಗೆ ದಾಳಿ ನಡೆಸಲು ಸಿದ್ಧತೆ ನಡೆಸಿಕೊಂಡು ಹೂಗ್ಯಂ ಗ್ರಾಮಕ್ಕೆ ತೆರಳಿದ್ದರು. ಅಲ್ಲಿನ ಹಳ್ಳದ ಬಳಿಯ ನಿರ್ಜನ ಪ್ರದೇಶದಲ್ಲಿ ಬಂಧಿತ ಆರೋಪಿ ಹೂಗ್ಯಂ ಗ್ರಾಮದ ವೆಂಕಟೇಶ್ ಸೇರಿದಂತೆ ಅದೇ ಗ್ರಾಮದ ಅಂಕರಾಜು, ಆಟೋ ಶಿವು, ಪಳನಿ,
ನಾಗರಾಜು, ರಾಮಪುರ ಟ್ರ್ಯಾಕ್ಟರ್ ಮುರುಗ, ಪೂಜಾರಿ ಗೋವಿಂದದೊಡ್ಡಿ ಗ್ರಾಮದ ಗೋವಿಂದ, ಅಂಗಡಿ ಶಿವಸ್ವಾಮಿ, ಪಳನಿಮೇಡು ಗ್ರಾಮದ ಗೋವಿಂದ, ಕುಡ್ಲೂರು ಬಸವರಾಜು, ಗೆಜ್ಜಲ್ನಾಥ ಬಸವ ಅಲಿಯಾಸ್ ಕಡಕ ಎಂಬುವರು ಕೋಳಿ ಕಾಳಗ ನಡೆಸುವ ಮೂಲಕ ಜೂಜಾಟ ಆಡುತ್ತಿದ್ದರು.
ಡಿವೈಎಸ್ಪಿ ಸ್ನೇಹಾ ಅವರು ಮುಖ್ಯಪೇದೆ ಅರಸು, ಕಾನ್ ಸ್ಟೇಬಲ್ ಗಳಾದ ಸಿದ್ದರಾಜೇಗೌಡ, ಮುರುಗೇಶ್, ಮಲ್ಲೇಶ್, ವೆಂಕಟೇಶ್ ಅವರೊಂದಿಗೆ ದಾಳಿ ನಡೆಸುತ್ತಿದ್ದಂತೆಯೇ ಸ್ಥಳದಿಂದ ಪರಾರಿಯಾಗಿದ್ದರು.
ಹೂಗ್ಯಂ ಗ್ರಾಮದ ವೆಂಕಟೇಶ್ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ಬಂಧಿಸಿ, ಸ್ಥಳದಲ್ಲಿ ಕೋಳಿ ಕಾಳಗಕ್ಕೆ ಬಳಸುತ್ತಿದ್ದ ಎರಡು ಹುಂಜ, 1610 ರುಪಾಯಿ, ಹೀರೋ ಹೊಂಡ ಸ್ಲೆಂಡರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.