ವರ್ಚಸ್ಸು ಉಳಿಸಿಕೊಂಡ ಮಹೇಶ್... 7 ಅನರ್ಹರಲ್ಲಿ 6 ಮಂದಿ ಜಯಭೇರಿ
ಚಾಮರಾಜನಗರ, ಅಕ್ಟೋಬರ್ 31: ಶಾಸಕ ಎನ್.ಮಹೇಶ್ ಜೊತೆಗೆ ಗುರುತಿಸಿಕೊಂಡು ಅನರ್ಹಗೊಂಡಿದ್ದ 7 ಮಂದಿ ನಗರಸಭೆ ಸದಸ್ಯರಲ್ಲಿ 6 ಮಂದಿ ಜಯಭೇರಿ ಬಾರಿಸಿದ್ದು ಕ್ಷೇತ್ರದಲ್ಲಿ ಶಾಸಕರ ಪ್ರತಿಷ್ಠೆಗೆ ಜಯಮಾಲೆ ಸಿಕ್ಕಿದೆ.
ಇದೀಗ 2,6,7,13,21,25 ಹಾಗೂ 26ನೇ ವಾರ್ಡ್ಗಳಿಗೆ ನಡೆದಿದ್ದ ಉಪಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು 7 ಮಂದಿ ಅನರ್ಹರಲ್ಲಿ 6 ಮಂದಿ ಗೆಲ್ಲುವ ಮೂಲಕ ಶಾಸಕ ಎನ್.ಮಹೇಶ್ ಕ್ಷೇತ್ರದಲ್ಲಿ ಹಿಡಿತ ಬಿಗಿಗೊಳಿಸಿದ್ದು ವಿರೋಧಿ ಗುಂಪುಗಳಿಗೆ ತಕ್ಕ ತಿರುಗೇಟು ಕೊಟ್ಟಿದ್ದಾರೆ.
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: 17 ವಾರ್ಡ್ಗಳಲ್ಲಿ ಬಿಜೆಪಿಗೆ ಗೆಲುವು
2 ನೇ ವಾರ್ಡ್ನಲ್ಲಿ ನಾಗಲಕ್ಷ್ಮಿ ಕಾಂಗ್ರೆಸ್ ಅಭ್ಯರ್ಥಿ ಭಾಗ್ಯ ವಿರುದ್ಧ ಸೋಲು ಕಂಡಿದ್ದು, ಬಿಟ್ಟರೇ ಉಳಿದ 6ಕ್ಷೇತ್ರಗಳಲ್ಲಿ ಕಮಲಕಲಿಗಳೇ ಜಯ ಸಾಧಿಸಿದ್ದಾರೆ. 21 ವಾರ್ಡ್- ಪ್ರಕಾಶ್, 6ನೇ ವಾರ್ಡಿನ ಮಾನಸ, 25 ನೇ ವಾರ್ಡಿನ ರಾಮಕೃಷ್ಣ, 7ನೇ ವಾರ್ಡ್ನ ನಾಸಿರ್ ಷರೀಫ್, 13 ನೇ ವಾರ್ಡಿನ ಪವಿತ್ರಾ ಹಾಗೂ 26ನೇ ವಾರ್ಡಿನ ನಾಗಸುಂದ್ರಮ್ಮ ವಿಜಯ ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಒಂದು ಸ್ಥಾನಕ್ಕಷ್ಟೇ ಸೀಮಿತಗೊಂಡರೆ, ಈ ಹಿಂದೆ ಈ 7 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದ ಬಿಎಸ್ಪಿ ಭಾರಿ ಮುಖಭಂಗ ಅನುಭವಿಸಿದೆ.
ಬಿಎಸ್ಪಿಯಿಂದ ಉಚ್ಚಾಟನೆಗೊಂಡಿದ್ದ ಎನ್.ಮಹೇಶ್ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ವೇಳೆ ಬಿಎಸ್ಪಿಯ 7 ಮಂದಿ ಬಿಎಸ್ಪಿ ಸದಸ್ಯರು ಕೂಡ ಬಿಜೆಪಿ ಸೇರಿದ್ದರು. ಬಿಎಸ್ಪಿಯಿಂದ ಆಯ್ಕೆಯಾಗಿದ್ದ ಇವರೆಲ್ಲರೂ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ವೇಳೆ ಪಕ್ಷದ ವಿಪ್ ಉಲ್ಲಂಘಿಸಿ ಸದಸ್ಯತ್ವ ಅನರ್ಹಗೊಂಡಿದ್ದರು. ಅನರ್ಹಗೊಂಡ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಎಲ್ಲಾ 7 ಮಂದಿಗೂ ಬಿಜೆಪಿ ಟಿಕೆಟ್ ಕೊಡಿಸಿ 6 ಮಂದಿಯನ್ನು ಗೆಲಿಸುವಲ್ಲಿ ಶಾಸಕ ಎನ್ ಮಹೇಶ್ ಯಶಸ್ವಿಯಾಗಿದ್ದು, ಕ್ಷೇತ್ರದಲ್ಲಿ ತಮ್ಮ ವರ್ಚಸ್ಸನ್ನು ಉಳಿಸಿಕೊಂಡಿದ್ದಾರೆ.
31 ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಕಾಂಗ್ರೆಸ್ 11 ಸ್ಥಾನ ಹೊಂದಿದೆ. ಪ್ರಸ್ತುತ ನಾಲ್ವರು ಪಕ್ಷೇತರ ಬೆಂಬಲದೊಂದಿದೆ ಬಹುಮತ ಪಡೆದು ಅಧ್ಯಕ್ಷ ಸ್ಥಾನ ಪಡೆದುಕೊಂಡಿತ್ತು. ಇದೀಗ ಬಿಜೆಪಿಯ 7 ಸದಸ್ಯರು ಹಾಗೂ ಪ್ರಸ್ತುತ ಗೆದ್ದಿರುವ 6 ಸದಸ್ಯರು ಸೇರಿ ಒಟ್ಟು 13 ಸ್ಥಾನಗಳನ್ನು ಪಡೆದುಕೊಂಡಿದೆ. ಅಧಿಕಾರಕ್ಕೆ ಏರಲು ಇನ್ನೂ ನಾಲ್ವರ ಬೆಂಬಲ ಬೇಕಿದೆ ಕಾಂಗ್ರೆಸ್ ಉಪಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದಿದ್ದು 12 ಸ್ಥಾನವನ್ನು ಪಡೆದುಕೊಂಡಿದೆ. ಇಬ್ಬರು ಬಿಎಸ್ಪಿ ಹಾಗೂ ನಾಲ್ವರು ಪಕ್ಷೇತರಿದ್ದಾರೆ. ಈ ಸದಸ್ಯರು ಯಾರಿಗೆ ಬೆಂಬಲ ನೀಡುತ್ತಾರೋ ಅವರಿಗೆ ಅಧಿಕಾರ ಸಿಗಲಿದೆ.