ಕೊಡಗಿನ ಪುಂಡಾನೆಯನ್ನು ಬಂಡೀಪುರ ಸೇರಿಸಿದ ಅರಣ್ಯ ಇಲಾಖೆ
ಗುಂಡ್ಲುಪೇಟೆ, ಜುಲೈ 18: ಕೊಡಗಿನ ಕುಶಾಲನಗರ ಸಮೀಪದ ಆನೆಕಾಡಿನ ರಕ್ಷಿತಾರಣ್ಯದಲ್ಲಿ ಪುಂಡಾಟ ನಡೆಸಿದ್ದ ಒಂಟಿ ಕೊಂಬಿನ ಆನೆಯನ್ನು ಸೆರೆ ಹಿಡಿದ ಅರಣ್ಯ ಇಲಾಖೆಯು ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ತಂದು ಬಿಟ್ಟಿದೆ.
ಕೊಡಗಿನಲ್ಲಿ ಕೃಷಿಕರಿಗೆ ಸಂಕಷ್ಟ ತಂದೊಡ್ಡುತ್ತಿರುವ ಕಾಡಾನೆಗಳು
ಕುಶಾಲನಗರ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟ ಮಾಡಿದ್ದಲ್ಲದೆ ಅನೇಕರ ಜೀವಕ್ಕೂ ಕುತ್ತು ತಂದಿದ್ದ ಈ ಒಂಟಿ ಕೊಂಬಿನ ಆನೆಯನ್ನು ಹಿಡಿಯಲು ಮಡಿಕೇರಿ ವಿಭಾಗದ ಡಿಎಫ್ ಓ ಸೂರ್ಯಸೇನ್, ಮರಿಯ ಕಸ್ತೂರಿರಾಜ್, ಎಸಿಎಫ್ ಚಿಣ್ಣಪ್ಪ ನೇತೃತ್ವದಲ್ಲಿ 8 ಸಾಕಾನೆಗಳನ್ನು ಬಳಸಿ ಎರಡು ದಿನಗಳ ಕಾಲ ಕಾರ್ಯಾಚರಣೆ ನಡೆಸಲಾಗಿತ್ತು.
ಅರಣ್ಯ ಇಲಾಖೆಯ ಪಶುವೈದ್ಯ ವೆಂಕಟೇಶ್ ಪುಂಡಾನೆಗೆ ಅರಿವಳಿಕೆ ಮದ್ದು ನೀಡಿದ ನಂತರ ರಾತ್ರಿ 10 ಗಂಟೆ ಸಮಯದಲ್ಲಿ ಸೆರೆ ಹಿಡಿಯಲಾಗಿತ್ತು.
ಆ ಬಳಿಕ ಸಾಕಾನೆಗಳು ಹಾಗೂ ಜೆಸಿಬಿ ನೆರವಿನಿಂದ ಲಾರಿಗೆ ಹತ್ತಿಸಿ, ಇಡೀ ರಾತ್ರಿ ಪ್ರಯಾಣ ಬೆಳೆಸಿ ಮಂಗಳವಾರ ಬೆಳಗಿನ ಜಾವ ಬಂಡೀಪುರ ಹುಲಿ ಯೋಜನೆಯ ಮೂಲೆಹೊಳೆ ಪ್ರದೇಶಕ್ಕೆ ತೆರಳಿ, ಪುಂಡಾನೆಯನ್ನು ಅರಣ್ಯದೊಳಗೆ ಬಿಡಲಾಯಿತು.