ಚಾಮರಾಜನಗರದಲ್ಲಿ ಬಂಡಾವಳ ಹೂಡಲಿದ್ದಾರೆ ಕೇರಳದ ಉದ್ಯಮಿಗಳು
ಚಾರಾಜನಗರ, ಜನವರಿ 07: "ಚಾಮರಾಜನಗರದಲ್ಲಿ ಕೈಗಾರಿಕಾ ಬೆಳವಣಿಗೆಗೆ ಒಳ್ಳೆಯ ಅವಕಾಶವಿದೆ. ಇಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ನೆರೆ ರಾಜ್ಯ ಕೇರಳದ ಉದ್ಯಮಿಗಳು ಅಗಮಿಸುತ್ತಿದ್ದಾರೆ" ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಗುರುವಾರ ಚಾಮರಾಜನಗರದಲ್ಲಿ ಮಾಧ್ಯಮಗಳ ಜೊತೆ ಮಾತಾನಾಡಿದ ಸಚಿವರು, "ಚಾಮರಾಜನಗರ ಜಿಲ್ಲೆ ಹಿಂದುಳಿದಿದ್ದು ಇಲ್ಲಿಯೂ ಕೈಗಾರಿಕೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ಹಿನ್ನೆಲೆಯಲ್ಲಿ ಇಂದು ಭೇಟಿ ನೀಡುತ್ತಿದ್ದೇನೆ. ಗಡಿಜಿಲ್ಲೆಯ ಕೈಗಾರಿಕೋದ್ಯಮ ಮತ್ತು ರಾಜ್ಯದ ಕೈಗಾರಿಕೋದ್ಯಮ ಅಭಿವೃದ್ಧಿಗೆ ಪೂರಕವಾಗಿದೆ" ಎಂದರು.
"ಕೋವಿಡ್ ಲಾಕ್ ಡೌನ್ ನಂತರ ಅತಿ ಹೆಚ್ಚು ಉದ್ಯೋಗ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಲಾಕ್ ಡೌನ್ ನಂತರ ನಿರೀಕ್ಷೆ ಮೀರಿ ಕೈಗಾರಿಕೆಗಳು ಅಭಿವೃದ್ಧಿ ಹೊಂದುತ್ತಿವೆ. ದೇಶದಲ್ಲಿ ಮೂರುವರೆ ಲಕ್ಷ ಕೋಟಿಯಷ್ಟು ಬಂಡವಾಳ ಹೂಡಿಕೆ ಮಾಡಲು ಕೈಗಾರಿಕೋದ್ಯಮಿಗಳು ಮುಂದಾಗಿದ್ದಾರೆ. ರಾಜ್ಯದಲ್ಲಿ 1.40 ಕೋಟಿ ಬಂಡವಾಳ ಹೂಡಲು ಕೈಗಾರಿಕೆಗಳು ಮುಂದಾಗಿವೆ" ಎಂದು ಮಾಹಿತಿ ನೀಡಿದರು.

"ಕೋವಿಡ್ ವೇಳೆಯಲ್ಲಿ ಅವರ ಗ್ರಾಮಗಳಿಗೆ ತೆರಳಿದ ನೌಕರರು ಪುನಃ ಹಿಂದಿರುಗಿ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಕ್ಷಾಂತರ ಜನ ಉದ್ಯೋಗಿಗಳು ರಾಜ್ಯಕ್ಕೆ ಆಗಮಿಸಿದ್ದು ಕೌಶಲ್ಯಭಿವೃದ್ಧಿಗೆ ಹೆಚ್ಚು ಗಮನವಹಿಸಲಾಗುತ್ತಿದೆ" ಎಂದು ವಿವರಿಸಿದರು.
"ಉದ್ಯೋಗ ಸೃಷ್ಟಿಸಲು ಕೊಪ್ಪಳದಲ್ಲಿ ಟಾಯ್ಸ್ ಕ್ಲಸ್ಟರ್ ಮುಖಾಂತರ 350 ರಿಂದ 450 ಎಕರೆ ಪ್ರದೇಶದಲ್ಲಿ ವಿನೂತನ ಗೊಂಬೆಗಳ ತಯಾರಿಕೆಗೆ ಮುಂದಾಗಿದ್ದೇವೆ. ಇದರಿಂದ 20 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುತ್ತೇವೆ. ದೇಶದಲ್ಲಿ ಅತಿ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆದಾರರು ಆಗಮಿಸುತ್ತಿದ್ದಾರೆ. ಇದರಿಂದ ಮತ್ತಷ್ಟು ಹೆಚ್ಚಿನ ಉದ್ಯೋಗಗಳು ರಾಜ್ಯದ ನಿರುದ್ಯೋಗಿಗಳಿಗೆ ಸಿಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಕಾಂಗ್ರೆಸ್ ರಚನಾತ್ಮಕ ಕೆಲಸಗಳಿಗೆ ಕೈಜೋಡಿಸಬೇಕು. ವಿರೋಧ ಪಕ್ಷಗಳು ಕೇವಲ ವಿರೋಧ ಮಾಡಬಾರದು. ರಚನಾತ್ಮಕ ಕೆಲಸ ಕಾರ್ಯಗಳಿಗೆ ಸಲಹೆ ಸೂಚನೆ ಕೊಡಬೇಕು. ರಾಹುಲ್ ಗಾಂಧಿ ಇಷ್ಟೆಲ್ಲಾ ಆರೋಪ ಮಾಡುತ್ತಾರಲ್ಲ ಅವರ ಸ್ಥಿತಿ ಹೇಗಿದೆ? ಅಂತ ಜನತೆಗೆ ಗೊತ್ತಿದೆ. ಇಡೀ ಜಗತ್ತಿನಲ್ಲೇ ಪ್ರಧಾನಿ ಮೋದಿ ನಂಬರ್ ಒನ್ ಜನಪ್ರಿಯತೆಯಲ್ಲಿದ್ದಾರೆ" ಎಂದು ಶೆಟ್ಟರ್ ಹೇಳಿದರು.












Click it and Unblock the Notifications