ಭಗವಂತ, ಮಾದಪ್ಪ ಏನ್ ಮಾಡ್ತಾನೋ ಗೊತ್ತಿಲ್ಲ: ಎಲ್ಲಿ ಸ್ಪರ್ಧೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ವಿ.ಸೋಮಣ್ಣ ಪ್ರತಿಕ್ರಿಯೆ
ಚಾಮರಾಜನಗರ, ಏಪ್ರಿಲ್, 11: ಬಿಜೆಪಿ ಸರ್ಕಾರದ ಹಿರಿಯ ಸಚಿವ ವಿ.ಸೋಮಣ್ಣ ಅವರ ಸ್ಪರ್ಧೆ ಇನ್ನೂ ನಿಗೂಢವಾಗಿದ್ದು, ಇದುವರೆಗೆ ಸೋಮಣ್ಣ ಕ್ಷೇತ್ರ ಯಾವುದೆಂದು ಬಾಯಿ ಬಿಟ್ಟಿಲ್ಲ. ಚಾಮರಾಜನಗರದಲ್ಲಿ ಪುತ್ರ ಹಾಗೂ ತಾವು ಸ್ಪರ್ಧಿಸುವ ಇಂಗಿತ ಹೊಂದಿರುವ ಸಚಿವ ವಿ.ಸೋಮಣ್ಣ, ಟಿಕೆಟ್ ಘೋಷಣೆಗೂ ಮುನ್ನ ಚಾಮರಾಜನಗರಕ್ಕೆ ಭರ್ಜರಿ ಎಂಟ್ರಿ ಕೊಟ್ಟು ರೈತ ಸಮಾವೇಶದಲ್ಲಿ ಭಾಗಿ ಆಗಿದ್ದರು.
ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಭಗವಂತ, ಮಾದಪ್ಪ ಏನ್ ಮಾಡುತ್ತಾನೆಯೋ ಗೊತ್ತಿಲ್ಲ, ನಾನು ಇಂತಹದ್ದೇ ಕ್ಷೇತ್ರ ಬೇಕೆಂದು ಕೇಳಿಲ್ಲ. 11 ಚುನಾವಣೆ ಎದುರಿಸಿದ್ದೇನೆ, 224 ಕ್ಷೇತ್ರವೂ ನನಗಿಷ್ಟ ಎಂದರು. ಅಲ್ಲದೆ ಚಾಮರಾಜನಗರದಲ್ಲಿ ಸ್ಪರ್ಧೆ ಮಾಡುತ್ತೀರಾ ಎಂದು ಸುದ್ದಿಗಾರರು ಮತ್ತೇ ಕೇಳಿದ್ದಕ್ಕೇ, ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ. ನೀವು ಮಾಧ್ಯಮದವರು ಸುಮ್ಮನೆ ಬರೆಯುತ್ತೀದ್ದೀರಿ. ನಾನು ಇಂತಹದ್ದೇ ಕ್ಷೇತ್ರ ಬೇಕೆಂದು ಕೇಳಿಲ್ಲ. ಹಾಗೆಯೇ ನಿಮ್ಮನ್ನು ಬರೆಯಬೇಡಿ ಎಂದು ಹೇಳಲಾಗಲ್ಲ," ಎಂದರು.

ಜಿಲ್ಲಾ ರೈತ ಸಮಾವೇಶದಲ್ಲಿ ಸೋಮಣ್ಣ ಭಾಗಿ
ಮಂಗಳವಾರ (ಏಪ್ರಿಲ್ 11) ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ನೇತೃತ್ವದಲ್ಲಿ ನಡೆದ ಜಿಲ್ಲಾ ರೈತ ಸಮಾವೇಶಕ್ಕೆ ಸೋಮಣ್ಣ ಬರುತ್ತಾರೆ ಎಂದು ಹೇಳಿರಲಿಲ್ಲ. ಮಂಗಳವಾರ ಸಂಜೆಯ ಹೊತ್ತಿಗೆ ದಿಢೀರ್ ಸೋಮಣ್ಣನವರ ಹೆಸರು ಸೇರ್ಪಡೆಗೊಂಡು ಭಾಗಿಯಾಗಿದ್ದರು. ಆಗ ಸೋಮಣ್ಣಗೆ ಚಾಮರಾಜನಗರ ಟಿಕೆಟ್ ಖಚಿತ ಎಂಬ ಮಾತಿಗೆ ಪುಷ್ಠಿ ಕೊಟ್ಟಿದೆ.
ಮನೆ ಹುಡುಕುತ್ತಿರುವ ಬೆಂಬಲಿಗರು
ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದ ಮೂರು-ನಾಲ್ಕು ತಿಂಗಳಲ್ಲಿ ಸಚಿವ ವಿ.ಸೋಮಣ್ಣ ಚಾಮರಾಜನಗರದಲ್ಲಿ ಮನೆಯೊಂದನ್ನು ಮಾಡಿದ್ದರು. ಅದಾದ ಎರಡು ತಿಂಗಳಿಗೇ ಮನೆ ಖಾಲಿ ಮಾಡಿ ಸರ್ಕಾರಿ ಅತಿಥಿ ಗೃಹಗಳಲ್ಲಿ ವಾಸ್ತವ್ಯ ಹೂಡಲು ಆರಂಭಿಸಿದ್ದರು. ಈಗ ಮತ್ತೇ ಅವರ ಬೆಂಬಲಿಗರಿಗೆ ಮನೆಯೊಂದನ್ನು ನೋಡುವಂತೆ ಸಚಿವ ಸೋಮಣ್ಣ ತಿಳಿಸಿದ್ದು, ಅವರ ಅನುಯಾಯಿಗಳು ಮನೆ ಹುಡುಕಾಟ ಆರಂಭಿಸಿದ್ದಾರೆ.
ಗೆಲ್ಲಲೇಬೆಕೆಂಬ ಪಣತೊಟ್ಟ ಬಿಜೆಪಿ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ರಾಜಕೀಯ ಪಕ್ಷಗಳಲ್ಲಿ ಬದಲಾವಣೆಗಳು ಆಗುತ್ತಲೇ ಇವೆ. ಬರೋಬ್ಬರಿ 2 ದಶಕದ ಬಳಿಕ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲೇಬೆಕೆಂಬ ಪಣತೊಟ್ಟಿದೆ. ಹಾಗೆಯೇ ಕ್ಷೇತ್ರದಿಂದ ಅಚ್ಚರಿ ಅಭ್ಯರ್ಥಿಯನ್ನು ಘೋಷಣೆ ಮಾಡಲು ಬಿಜೆಪಿ ಪ್ಲಾನ್ ರೂಪಿಸಿದೆ. ಹಾಗಾದರೆ "ಆ" ಅಚ್ಚರಿ ಹೆಸರು ಯಾವುದು ಅಂತೀರಾ ಇಲ್ಲಿದೆ ನೋಡಿ ವಿವರ.

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಲೇಬೇಕೆಂದು ಪಣ ತೊಟ್ಟಿರುವ ಕಮಲಪಾಳೆಯ ಅಚ್ಚರಿ ಅಭ್ಯರ್ಥಿಯಾಗಿ ಸೋಮಣ್ಣ ಬರಬಹುದೆಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಟಿಕೆಟ್ ಸಂಬಂಧ ಕೋರ್ ಕಮಿಟಿ ಸಭೆ ನಡೆದಿದ್ದು, ಸಭೆಯಲ್ಲಿ ಸಚಿವ ವಿ.ಸೋಮಣ್ಣ ಅವರ ಹೆಸರು ಜೋರಾಗಿ ಕೇಳಿಬಂದಿದೆ.
ಜೊತೆಗೆ ಟಿಕೆಟ್ಗಾಗಿ ಓಡಾಡುತ್ತಿದ್ದ ಬಿ.ವೈ.ವಿಜಯೇಂದ್ರ ಅವರ ಆಪ್ತ ರುದ್ರೇಶ್ ಹೆಸರು ಪ್ರಸ್ತಾಪ ಆಗಿಲ್ಲದಿರುವುದು ಗಡಿಜಿಲ್ಲೆ ರಾಜಕೀಯದಲ್ಲಿ ಹೊಸ ಟ್ವಿಸ್ಟ್ ಹುಟ್ಟುಹಾಕಿದೆ. ವರಿಷ್ಠರ ಸಭೆಯಲ್ಲಿ ರುದ್ರೇಶ್ ಹೆಸರು ಪ್ರಸ್ತಾಪ ಆಗದಿರುವುದರಿಂದ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಇದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
ಹೊಸ ಜಾತಿ ಸಮೀಕರಣದ ಮೂಲಕ ತನಗೇ ಟಿಕೆಟ್ ಕೊಡಬೇಕು ಎಂದು ಸಾಕಷ್ಟು ಕಸರತ್ತು ನಡೆಸುತ್ತಿರುವ ವಾಲ್ಮೀಕಿ ಸಮುದಾಯದ ರಾಮಚಂದ್ರು ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಪ್ರಬಲ ನಾಯಕ ವಿ.ಸೋಮಣ್ಣ ಹಾಗೂ ಹೊಸ ಜಾತಿ ಸಮೀಕರಣ, ಸೌಮ್ಯ ಸ್ವಭಾವದ ರಾಮಚಂದ್ರು ಇವರಿಬ್ಬರಿಗೇ ಟಿಕೆಟ್ ಸಿಗಬಹುದು. ಇಲ್ಲವೇ, ಹಳೇ ಮೈಸೂರು ಟಾರ್ಗೆಟ್ ಮಾಡಿರುವ ಬಿಜೆಪಿ ಸೋಮಣ್ಣಗೆ ಚಾಮರಾಜನಗರ ಟಿಕೆಟ್ ಕೊಟ್ಟು ಬೇರೆ ಕ್ಷೇತ್ರಗಳನ್ನೂ ಗೆಲ್ಲಿಸುವ ಗುರಿ ಹೊಂದಿರಬಹುದು ಎನ್ನಲಾಗಿದೆ.












Click it and Unblock the Notifications