ಆಲತ್ತೂರಿನಲ್ಲಿ ನಾಮ್ ಕೇ ವಾಸ್ತೆ ಕನ್ನಡ ಶಾಲೆ, ನೀನೇ ಅಂತ ಕೇಳೋರಿಲ್ವೆ
ಚಾಮರಾಜನಗರ, ಫೆಬ್ರವರಿ 6: ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಹೆಚ್ಚಿನ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಕನ್ನಡ ಬೋಧನೆಗೆ ಅನುಮತಿ ಪಡೆದು, ರಾಜಾರೋಷವಾಗಿ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇವುಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳದ ಕಾರಣ ಇದು ಹೀಗೆಯೇ ಮುಂದುವರೆಯುತ್ತಿದೆ.
ಕನ್ನಡದಲ್ಲಿ ಅನುಮತಿ ಪಡೆದು, ಆಂಗ್ಲ ಮಾಧ್ಯಮದ ಶಾಲೆ ನಡೆಸುವ ಖಾಸಗಿ ಶಾಲಾ ಆಡಳಿತ ಮಂಡಳಿ ತಮ್ಮ ಶಾಲೆಯಲ್ಲಿ ಮಕ್ಕಳಿಗೆ ಬೋಧನೆಯೊಂದಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸದೆ ಇರುವುದು ಗುಂಡ್ಲುಪೇಟೆ ತಾಲೂಕಿನ ಆಲತ್ತೂರು ಗ್ರಾಮದಲ್ಲಿ ಕಂಡು ಬಂದಿದೆ. ಇಲ್ಲಿನ ಶ್ರೀ ಹರಿವಿದ್ಯಾ ಸಂಸ್ಥೆ ಕನ್ನಡ ಮಾಧ್ಯಮದಲ್ಲಿ ಅನುಮತಿ ಪಡೆದು, ಆಂಗ್ಲ ಮಾಧ್ಯಮದಲ್ಲಿ ಬೋಧಿಸುತ್ತಿದೆ ಎನ್ನುವುದು ಸ್ಥಳೀಯ ಆರೋಪವಾಗಿದೆ.[ಚಾಮರಾಜನಗರ: ಶಾಲೆ ಸಮವಸ್ತ್ರಕ್ಕೆ ನೀಡಿದ ಹಣ ಗುಳುಂ ಆಯ್ತಾ?]

ಶಾಲೆಗಳಲ್ಲಿ ನಾಲ್ಕನೇ ತರಗತಿವರೆಗೆ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಮತ್ತು ಅನುಮತಿ ನೀಡಿದೆ. ಆದರೆ ಶ್ರೀ ಹರಿ ವಿದ್ಯಾ ಸಂಸ್ಥೆಯಲ್ಲಿ ಈ ಆದೇಶವನ್ನು ಗಾಳಿಗೆ ತೂರಲಾಗಿದೆ. ಇದೀಗ ಇಲ್ಲಿ ಸುಮಾರು 17 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಇಲ್ಲಿ ಮಕ್ಕಳಿಗೆ ಅನುಕೂಲಕರ ವಾತಾವರಣ ಇಲ್ಲ. ಶೌಚಾಲಯ ಇಲ್ಲ, ಆಟದ ಮೈದಾನ ಇಲ್ಲ, ಹಾಜರಾತಿ ಪುಸ್ತಕ ಇದೆ ಆದರೆ ನೋಂದಣಿ ಮಾತ್ರ ಇಲ್ಲವೇ ಇಲ್ಲ. ಶ್ರೀ ಚೌಡೇಶ್ವರಿ ಎಜುಕೇಷನ್ ಮತ್ತು ಸೋಷಿಯಲ್ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿದೆ. ಇಬ್ಬರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.[ಚಾಮರಾಜನಗರ: ಶಾಲೆ ಸಮವಸ್ತ್ರಕ್ಕೆ ನೀಡಿದ ಹಣ ಗುಳುಂ ಆಯ್ತಾ?]
ಸರ್ಕಾರಿ ಶಾಲೆಗಳು ಅಭಿವೃದ್ಧಿ ವಂಚಿತವಾಗಿ ಸೌಲಭ್ಯಗಳಿಲ್ಲದೆ ಕಾರ್ಯ ನಿರ್ವಹಿಸುವುದನ್ನು ನಾವು ಕಾಣಬಹುದು. ಆದರೆ ಮಕ್ಕಳಿಂದ ಶುಲ್ಕ ಪಡೆದ ಖಾಸಗಿ ಶಾಲೆ ಮಕ್ಕಳಿಗೆ ಮೂಲಸೌಲಭ್ಯ ಕಲ್ಪಿಸುವುದು ಅಗತ್ಯ. ಆದರೆ ಇಲ್ಲಿ ಮೂಲಸೌಕರ್ಯವೇ ಇಲ್ಲದಾಗಿದೆ. ವಿದ್ಯಾಭ್ಯಾಸಕ್ಕೆ ಉತ್ತಮ ಕೊಠಡಿ ಇಲ್ಲ, ಇದ್ದರೂ ಬಾಗಿಲಿಲ್ಲ. ಬೆಳಕಿನ ವ್ಯವಸ್ಥೆ ಇಲ್ಲ, ಶೌಚಾಲಯ ಕೂಡ ಇಲ್ಲ.

ಬರೆಯಲು ಫಲಕ ಇಲ್ಲ. ಹೀಗಾಗಿ ಗೋಡೆಯೇ ಮೇಲೆಯೇ ಬರೆದು, ಕಲಿಯಬೇಕಾದ ದುಃಸ್ಥಿತಿ ಇಲ್ಲಿನದಾಗಿದೆ. ಮಕ್ಕಳಿಗೆ ಸುರಕ್ಷತೆಯೂ ಇಲ್ಲಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಖಾಸಗಿ ಜಮೀನಿನ ಬಳಿಯಿರುವ ಜಾಗವೇ ಆಟದ ಮೈದಾನವಾಗಿದೆ. ಬಯಲೇ ಶೌಚಾಲಯವಾಗಿದೆ. ಈ ಬಗ್ಗೆ ಗುಂಡ್ಲುಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಅವರು ಪ್ರತಿಕ್ರಿಯಿಸಿ, ವಿದ್ಯಾಸಂಸ್ಥೆ ಬಗ್ಗೆ ದೂರುಗಳು ಬಂದಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications