ಗುಂಡ್ಲುಪೇಟೆಯಲ್ಲಿ ಸಾರಿಗೆ ಸಿಬ್ಬಂದಿ ಮನಸೋ ಇಚ್ಛೆ ಕುಣಿತಕ್ಕೆ ಆಕ್ರೋಶ
ಚಾಮರಾಜನಗರ, ಆಗಸ್ಟ್ 31: ಗಣೇಶೋತ್ಸವದ ವೇಳೆ ಮಲೆಮಹದೇಶ್ವರ ಬೆಟ್ಟದಲ್ಲಿ ಹುಡುಗಿಯರ ತುಂಡುಡುಗೆ ನೃತ್ಯದ ಸುದ್ದಿ ಹಸಿರಾಗಿರುವಾಗಲೇ ಗುಂಡ್ಲುಪೇಟೆಯ ಕೆಎಸ್ ಆರ್ ಟಿಸಿ ಡಿಪೋ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಸಿಬ್ಬಂದಿಯೇ ಮದ್ಯ ಸೇವಿಸಿ, ಕುಣಿದ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
ಸಾರಿಗೆ ನಿಗಮದ ಡಿಪೋದಲ್ಲಿ ಕೆಲ ಸಿಬ್ಬಂದಿ ಸೇರಿಕೊಂಡು ಗಣಪತಿ ಪ್ರತಿಷ್ಠಾಪನೆ ಮಾಡಿದ್ದರು. ಆ ಗಣಪತಿ ಮೂರ್ತಿಯ ವಿಸರ್ಜನಾ ಮಹೋತ್ಸವವನ್ನು ಮಂಗಳವಾರ ರಾತ್ರಿ ಏರ್ಪಡಿಸಲಾಗಿತ್ತು. ಹೀಗಾಗಿ ಸಂಜೆ 4ರಿಂದಲೇ ಗಣೇಶನ ವಿಜೃಂಭಣೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆಯಲ್ಲಿ ಡಿಪೋ ಮುಂಭಾಗದಲ್ಲಿ ಡಿಜೆ ಸೌಂಡ್ ಸಿಸ್ಟಂ ಅಳವಡಿಸಿ, ಗಣಪತಿ ಮೆರವಣಿಗೆ ಮುಂದೆ ಸಿಬ್ಬಂದಿ ಸಿನಿಮಾ ಹಾಡುಗಳಿಗೆ ಕುಣಿಯುತ್ತಿದ್ದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ ಹಲವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
ಸಂಜೆ 4ರಿಂದ ಆರಂಭವಾಗಿ ರಾತ್ರಿವರೆಗೆ ಮೆರವಣಿಗೆ ನಡೆದಿದ್ದು, ಈ ವೇಳೆ ಮೆರವಣಿಗೆಯುದ್ದಕ್ಕೂ ಡಿಪೋ ಸಿಬ್ಬಂದಿ, ಚಾಲಕರು ಮತ್ತು ನಿರ್ವಾಹಕರು ಕರ್ತವ್ಯ ಮರೆತು, ಸಮವಸ್ತ್ರದ ಮೇಲೆ ಗಮನವಿಲ್ಲದೆ ಬಟ್ಟೆ ಬಿಚ್ಚಿ ಮನಸೋ ಇಚ್ಚೆ ಕುಣಿಯುತ್ತಿದ್ದದ್ದು ಕಂಡು ಬಂದಿತು.
ಇದೀಗ ಸಾರಿಗೆ ನಿಗಮದ ನೌಕರರು ನರ್ತಿಸಿದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿ ಬಂದಿದೆ. ಕಾರಣ ಅವತ್ತು ಚಾಲಕರು ಮತ್ತು ನಿರ್ವಾಹಕರು ಗಣಪತಿ ಮೂರ್ತಿ ವಿಸರ್ಜನೆಯಲ್ಲಿ ತಲ್ಲೀನರಾಗಿದ್ದರಿಂದ ಕಾಡಂಚಿನ ಗ್ರಾಮಗಳಿಗೆ ಹಾಗೂ ಪಟ್ಟಣದ ಪ್ರದೇಶಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಬಸ್ ಸಿಗದೆ ಪರದಾಡುವಂತಾಗಿತ್ತು.












Click it and Unblock the Notifications