ಗುಂಡ್ಲುಪೇಟೆಯಲ್ಲಿ ಬೇಟೆಗಾರನನ್ನೇ ಬೇಟೆಯಾಡಿದ ಅರಣ್ಯಇಲಾಖೆ!
ಬೇಟೆಗಾರನಾಗಿದ್ದ ಶಿವಕುಮಾರ ತನ್ನ ಇಬ್ಬರು ಸಂಗಡಿಗರೊಂದಿಗೆ ಜಿಂಕೆ, ಮೊಲ, ನವಿಲು, ಹಂದಿಗಳನ್ನು ಬೇಟೆಯಾಡಿ ಮಾಂಸವನ್ನು ರೆಸಾರ್ಟ್ ಗಳು, ಪಟ್ಟಣದ ಕೆಲವು ಮಾಂಸಹಾರಿ ಹೋಟೆಲ್ ಹಾಗೂ ಮನೆಗಳಿಗೆ ಸರಬರಾಜು ಮಾಡುತ್ತಿದ್ದನು ಎನ್ನಲಾಗಿದೆ.
ಚಾಮರಾಜನಗರ, ಮೇ 30: ಜಿಂಕೆಯನ್ನು ಬೇಟೆಯಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಚಾಮರಾಜನಗರ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಅಣ್ಣೂರುಕೇರಿ ಬಳಿಯ ವಡ್ಡನಹೊಸಳ್ಳಿ ಗ್ರಾಮದ ಶಿವಕುಮಾರ್ ಆಲಿಯಾಸ್ ಬಂಗಾರಿ(30) ಬಂಧಿತ ಆರೋಪಿ. ಜಿಂಕೆ ಬೇಟೆಯಾಡಿ ಮಾಂಸ ಮಾಡಿ ಮಾರಾಟ ಮಾಡುವುದನ್ನು ಕರಗತ ಮಾಡಿಕೊಂಡಿದ್ದ.
ಏಪ್ರಿಲ್ 29 ರಂದು ಹಂಗಳ ಗ್ರಾಮದ ಜಮೀನಿನಲ್ಲಿ ಜಿಂಕೆಯನ್ನು ಬೇಟೆಯಾಡಿ ಮಾಂಸ ಮಾಡಿ ಪೊಟ್ಟಣಗಳಿಗೆ ತುಂಬುವ ವೇಳೆಗೆ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಜಮೀನಿನ ಮಾಲಿಕ ಶಿವಪ್ಪ ಸಿಕ್ಕಿಬಿದ್ದಿದ್ದರೆ ಶಿವಕುಮಾರ್ ಸೇರಿದಂತೆ ಇತರರು ಓಡಿ ತಪ್ಪಿಸಿಕೊಂಡಿದ್ದರು.[ಎಲುಬಿನ ಹಂದರದಂತಾಗಿದ್ದ ಬಂಡೀಪುರದ ಆನೆ, ನಿಶ್ಶಕ್ತಿಯಿಂದ ಸಾವು]

ಕೃತ್ಯದ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ತಲೆ ಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಆ ಪೈಕಿ ಶಿವಕುಮಾರ್ ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಅರಣ್ಯ ಇಲಾಖೆಗೆ ಬೇಕಾದವನಾಗಿದ್ದಾನೆ.
ಬಂಡೀಪುರದ ಎ.ಸಿ.ಎಫ್.ಆಂಥೋಣಿಮರಿಯಪ್ಪ ಮತ್ತು ಎಸ್.ಟಿ.ಪಿ.ಎಫ್.ನ ಡಿಆರ್ಎಫ್ಓ ಗಳಾದಮೋಹನ್, ಶ್ರೀನಾಥರೆಡ್ಡಿ ಅವರು ಆರೋಪಿಗಾಗಿ ಒಂದು ತಿಂಗಳಿನಿಂದ ಕಾರ್ಯಾಚರಣೆ ನಡೆಸಿದ್ದರು. ಈ ಮಧ್ಯೆ ಈತನನ್ನು ರಾಮನಗರ ಜಿಲ್ಲೆಯ ನಟ್ಕಲ್ ಬಳಿ ಸೆರೆ ಹಿಡಿಯಲು ನಡೆಸಿದ ಪ್ರಯತ್ನ ವಿಫಲವಾಗಿತ್ತು.
ಆದರೆ ಸ್ವಗ್ರಾಮವಾದ ವಡ್ಡನಹೊಸಳ್ಳಿಯ ಮನೆಗೆ ಬಂದಿದ್ದಾನೆ ಎಂಬ ಮಾಹಿತಿ ಸಿಕ್ಕ ಮೇರೆಗೆ ಮಹಿಳಾ ಸಿಬ್ಬಂದಿ ಸೇರಿದಂತೆ 15 ಮಂದಿ ಮನೆಯನ್ನು ಸುತ್ತುವರಿದು ಬಂಧಿಸಲು ಮುಂದಾದಾಗ ಮೇಲ್ಛಾವಣಿ ಹಾರಿ ಓಡಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಪ್ರಾಣವನ್ನು ಪಣಕ್ಕಿಟ್ಟು ಶ್ರೀನಾಥ್ ರೆಡ್ಡಿ ಎಂಬುವರು ಹಿಡಿದಿದ್ದಾರೆ.
ಈ ವೇಳೆ ಅವರಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ.
ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ಹೀರೋ ಡ್ರೀಂ ಬೈಕ್ (ಕೆ.ಎ.10.ಎಸ್.9738)ನ್ನು ವಶಪಡಿಸಿಕೊಳ್ಳಲಾಗಿದೆ.
ಬೇಟೆಗಾರನಾಗಿದ್ದ ಶಿವಕುಮಾರ ತನ್ನ ಇಬ್ಬರು ಸಂಗಡಿಗರೊಂದಿಗೆ ಜಿಂಕೆ, ಮೊಲ, ನವಿಲು, ಹಂದಿಗಳನ್ನು ಬೇಟೆಯಾಡಿ ಮಾಂಸವನ್ನು ರೆಸಾರ್ಟ್ ಗಳು, ಪಟ್ಟಣದ ಕೆಲವು ಮಾಂಸಹಾರಿ ಹೋಟೆಲ್ ಹಾಗೂ ಮನೆಗಳಿಗೆ ಸರಬರಾಜು ಮಾಡುತ್ತಿದ್ದನು ಎನ್ನಲಾಗಿದೆ.












Click it and Unblock the Notifications