ಚಾಮರಾಜನಗರ; ಪೊಲೀಸ್ ಠಾಣೆ ಜಲಾವೃತ, ತುಂಬಿಹರಿಯುತ್ತಿರುವ ಕೆರೆಕಟ್ಟೆ, ಹಲವೆಡೆ ಪ್ರವಾಹ
ಚಾಮರಾಜನಗರ, ಆಗಸ್ಟ್ 30: ಗಡಿಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರೆದಿದ್ದು ಸೋಮವಾರ ರಾತ್ರಿಯಿಂದ ಮಂಗಳವಾರ ಮುಂಜಾನೆವರೆಗೂ ಬಿಟ್ಟುಬಿಡದೇ ವರುಣ ಪ್ರತಾಪ ತೋರಿದ್ದು ಎಲ್ಲೆಲ್ಲೂ ನೀರು ಎಂಬ ಸ್ಥಿತಿ ತಲೆದೂರಿದೆ.
ಯಳಂದೂರು ತಾಲೂಕಿನಲ್ಲಿರುವ ಮಾಂಬಳ್ಳಿ ಪೊಲೀಸ್ ಠಾಣೆಗೆ ನೀರು ನುಗ್ಗಿ ಇಡೀ ಠಾಣೆಯೇ ಜಲಾವೃತವಾಗಿದೆ. ಎಲ್ಲರನ್ನೂ ರಕ್ಷಿಸಲು ತೆರಳುವ ಪೊಲೀಸರಿಗೆ ಮಳೆಯಿಂದ ರಕ್ಷಣೆ ಸಿಗದಂತಾದ ಸ್ಥಿತಿ ನಿರ್ಮಾಣವಾಗಿದ್ದು ಇಡೀ ಠಾಣೆ ತುಂಬೆಲ್ಲಾ 3-4 ಅಡಿ ನೀರು ನಿಂತು ಅವಾಂತರ ಸೃಷ್ಟಿಸಿದೆ.
'ಮಾತು ಬಿಟ್ಟು ಕೆಲಸದಲ್ಲಿ ನಿನ್ನ ಪ್ರತಾಪ ತೋರಿಸು': ಪ್ರತಾಪ್ ಸಿಂಹಗೆ ಸಿದ್ದರಾಮಯ್ಯ ತರಾಟೆ!
ಮೊಣಕಾಲುದ್ದ ನಿಂತಿರುವ ನೀರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಠಾಣೆಯಲ್ಲಿ ಫಜೀತಿ ಅನುಭವಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇನ್ನು, ಸೋಮವಾರ ಸಂಜೆ ಮಳೆ ಹಾನಿ ಪರಿಶೀಲನೆಗೆ ಹೋಗಿ ಅಧಿಕಾರಿಗಳು ಹಳ್ಳದ ನೀರಿನಲ್ಲಿ ಸಿಲುಕಿ ಕೊಂಡು ಕೊನೆಗೇ ಸ್ಥಳೀಯರಿಂದ ರಕ್ಷಿಸಲ್ಪಟ್ಟ ಘಟನೆ ಚಾಮರಾಜನಗರ ತಾಲೂಕಿನ ಕಣ್ಣೆಗಾಲ -ಆಲೂರು ನಡುವೆ ನಡೆದಿದೆ.
ಮಳೆ ಹಾನಿ ಪರಿಶೀಲನೆ ನಡೆಸಿ ಅಧಿಕಾರಿಗಳು ಕಾರ್ ನಲ್ಲಿ ವಾಪಸ್ ಆಗುತ್ತಿದ್ದರು. ವೇಳೆ ಹಳ್ಳದ ನೀರಿನಲ್ಲಿ ಸಿಲುಕಿದ್ದಾರೆ. ಹಳ್ಳ ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ನೀರಿನ ಮಟ್ಟ ಹೆಚ್ಚಳವಾಗಿ ಹಳ್ಳದ ನೀರಿನಲ್ಲಿ ಅಧಿಕಾರಿಗಳು ಸಿಲುಕಿದ್ದಾರೆ. ನೀರು ರಭಸವಾಗಿ ಹರಿಯುತ್ತಿದ್ದ ಕಾರಣ ಕಾರ್ ಮೇಲೆ ಹತ್ತಿ ನಿಂತುಕೊಂಡಿದ್ದಾರೆ. ಸ್ಥಳೀಯರು ನೀರಿನಲ್ಲಿ ಮುಳುಗಿದ ಕಾರ್ಗೆ ಹಗ್ಗ ಕಟ್ಟಿ ಎಳೆದು ಅಧಿಕಾರಿಗಳನ್ನು ರಕ್ಷಿಸಿದ್ದಾರೆ. ಎಇಇ ಕಾಂತರಾಜ್, ಎಇ ರಾಜು, ಚಾಲಕ ಮುರುಗೇಶ್ ಅವರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಜಿಲ್ಲೆಯಲ್ಲಿ ಮೂರುನಾಲ್ಕು ದಶಕಗಳಲ್ಲಿ ಕಂಡು ಕೇಳರಿಯದಂತೆ ಮಳೆ ಸುರಿಯುತ್ತಿದೆ. ಭಾನುವಾರ ಶುರವಾದ ಮಳೆ ಸೋಮವಾರ ಹಾಗೂ ಮಂಗಳವಾರ ಮುಂಜಾನೆವರೆಗೂ ಬಿಟ್ಟು ಬಿಟ್ಟು ಬರುತ್ತಿದೆ. ಸೋಮವಾರ ಮಳೆ ಅಬ್ಬರ ಕಾರಣ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿತ್ತು.
ಜಮೀನಿಗಳಿಗೆ ನೀರು
ಇನ್ನು ಭಾರಿ ಮಳೆ ಪರಿಣಾಮ ಜಿಲ್ಲೆಯ ಹಲವು ಕಡೆ ಕೆರೆಗಳು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ . ಪರಿಣಾಮ ಆ ನೀರು ಹಲವು ಗ್ರಾಮಗಳನ್ನು, ಕೃಷಿ ಭೂಮಿಗಳನ್ನು ಆವರಿಸಿಕೊಂಡಿದೆ. ಇತ್ತೀಚೆಗೆ ನಾಟಿ ಮಾಡಿದ್ದ ಭತ್ತದ ಪೈರುಗಳು ವರುಣ ಆರ್ಭಟಕ್ಕೆ ಕೊಚ್ಚಿ ಹೋಗಿ ರೈತರು ಕಂಗಾಲಾಗಿದ್ದಾರೆ. ಮಳೆಯಿಂದ ಹಲವು ಕೆರೆಗಳು ಕೋಡಿ ಬಿದ್ದಿರುವ ಪರಿಣಾಮ ರಸ್ತೆಗಳು ಕೂಡ ಜಲಾವೃತಗೊಂಡಿವೆ. ಚಾಮರಾಜನಗರ -ಸಂತೇಮರಹಳ್ಳಿಯ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ಗ್ರಾಮಗಳ ರಸ್ತೆಗಳು ಮುಳುಗಡೆಗೊಂಡಿವೆ.
ಚಾಮರಾಜನಗರ ಜಿಲ್ಲೆಯಲ್ಲಿ ಭಾರಿ ಮಳೆ: ಪೆಟ್ರೋಲ್ ಬಂಕ್ಗೆ ನೀರು ನುಗ್ಗಿ ಅವಾಂತರ
16 ವರ್ಷಗಳ ಬಳಿಕ ತುಂಬಿದ ಕೆರೆ
ಇನ್ನು ಸತತ ಮಳೆಯಿಂದ ಚಾಮರಾಜನಗರ ತಾಲೂಕಿ ಹರದನಹಳ್ಳಿಯ ಮರಗದಕೆರೆ 16 ವರ್ಷಗಳ ಬಳಿಕ ತುಂಬಿ ಕೋಡಿ ಬಿದ್ದಿದೆ. ವಿಷಯದ ತಿಳಿದ ಗ್ರಾಮಸ್ಥರು ಕೆರೆಗೆ ಪೂಜೆ ಸಲ್ಲಿಸಿದ್ದಾರೆ. ನಂತರ ಅಕ್ಕಪಕ್ಕದ ಊರಿನ ಗ್ರಾಮಸ್ಥರು ಕೂಡ ಆಗಮಿಸಿ ಮರಗದಕೆರೆಯ ಸೌಂದರ್ಯವನ್ನು ಸವಿದು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಗುಂಡಾಲ್ ಡ್ಯಾಂ ಭರ್ತಿ
ಬಿಳಿಗಿರಿ ರಂಗನಾಋ ದೇವಾಲಯ ವ್ಯಾಪ್ತಿಯಲ್ಲೂ ಭಾರಿ ಮಳೆಯಾಗುತ್ತಿರುವ ಪರಿಣಾಮ ಗುಂಡಾಲ್ ಜಲಾಶಯ ಭರ್ತಿಯಾಗಿದೆ. ಕಳೆದ ವರ್ಷ ಡಿಸೆಂಬರ್ನಲ್ಲೂ ಜಲಾಶಯ ಭರ್ತಿಯಾಗಿತ್ತು. ಇದೀಗ ಮತ್ತೆ ಭರ್ತಿಯಾಗಿರುವುದರಿಂದ ಡ್ಯಾಂನ ಎಡ ಮತ್ತು ಬಲದಂಡೆಯ ಎರಡು ನಾಲೆಗಳ ಮೂಲಕ ನೀರನ್ನು ಬಿಡಲಾಗುತ್ತಿದೆ.
25 ವರ್ಷಗಳ ಬಳಿ ಕೃಷ್ಣಯ್ಯನ ಕಟ್ಟೆ ಭರ್ತಿ
ಸತತ ಮಳೆಯ ಪರಿಣಾಮ ಜಿಲ್ಲೆಯ ಕೃಷ್ಣಯ್ಯನ ಕಟ್ಟೆ ತುಂಬಿ ಹರಿಯುತ್ತಿದೆ. ಜಲಚರ ಹಾಗೂ ಕಾಡು ಪ್ರಾಣಿಗಳ ನೆಚ್ಚಿನ ತಾಣವಾಗಿರು ಈ 25 ವರ್ಷಗಳ ಬಳಿಕ ತುಂಬಿದೆ. ಈ ಹಿಂದೆ ಹಿಂಗಾರು ಮಳೆಯ ಸಂದರ್ಭದಲ್ಲಿ ಕಟ್ಟೆ ತುಂಬುತ್ತಿತ್ತು. ಆದರೆ ಈ ಬಾರಿ ಮುಂಗಾರು ಅಬ್ಬರಕ್ಕೆ ತುಂಬಿ ತುಳುಕುತ್ತಿದ್ದು, ಕೋಡಿ ಬೀಳುವ ಸೌಂದರ್ಯವನ್ನು ಸವಿಯಲು ಸ್ಥಳೀಯರು ನಿಸರ್ಗ ಪ್ರೇಮಿಗಳು ಕೌತುಕದಿಂದ ಕಾಯುತ್ತಿದ್ದಾರೆ.