9 ವರ್ಷಗಳಿಂದ ಆರೋಗ್ಯ ಸಹಾಯಕಿಯರಿಲ್ಲದೆ ಆಸ್ಪತ್ರೆಗೆ ಬೀಗ!
ಆರೋಗ್ಯ ಸಹಾಯಕಿಯರಿಲ್ಲದೆ ಚಾಮರಾಜನಗರ ಗುಂಡ್ಲುಪೇಟೆಯ ಮಲ್ಲಯನಪುರ ಗ್ರಾಮದ 'ಕಿರಿಯ ಆರೋಗ್ಯ ಸಹಾಯಕಿ ಕೇಂದ್ರ' ಕಳೆದ 9 ವರ್ಷಗಳಿಂದ ಬಾಗಿಲು ಎಳೆದುಕೊಂಡಿದೆ.
ಚಾಮರಾಜನಗರ, ಜನವರಿ 26: ಆರೋಗ್ಯ ಸಹಾಯಕಿರಿಲ್ಲದೆ ಇಲ್ಲಿನ ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಕಿರಿಯ ಆರೋಗ್ಯ ಕೇಂದ್ರಕ್ಕೆ ಕಳೆದ 98 ವರ್ಷಗಳಿಂದ ಬೀಗ ಜಡಿಯಲಾಗಿದೆ.
ಗ್ರಾಮೀಣ ಭಾಗದ ಜನರ ಉಪಯೋಗಕ್ಕಾಗಿ ಹಲವು ವರ್ಷಗಳ ಹಿಂದೆ ಮಲ್ಲಯನಪುರ ಗ್ರಾಮದಲ್ಲಿ ಕಿರಿಯ ಆರೋಗ್ಯ ಕೇಂದ್ರ ತೆರೆಯಲಾಗಿತ್ತು. ಗ್ರಾಮದಲ್ಲಿ 2,700 ಜನಸಂಖ್ಯೆಯಿದ್ದು ಈ ಹಿಂದೆ ಇವರೆಲ್ಲಾ ಕಾಯಿಲೆ ಬಂದರೆ ದೂರದ ಕಗ್ಗಳದಹುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗಿತ್ತು. ಇದನ್ನು ತಪ್ಪಿಸುವ ಸಲುವಾಗಿಯೇ ಮಲ್ಲಯ್ಯನಪುರದಲ್ಲಿ ಕಿರಿಯ ಆರೋಗ್ಯ ಸಹಾಯಕಿ ಕೇಂದ್ರವನ್ನು ತೆರೆಯಲಾಗಿತ್ತು.[ಮತ್ತೆ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದವು ಮೂರು ಹುಲಿ]
ದಶಕಗಳ ಹಿಂದೆ ಇಲ್ಲಿ ಎಲ್ಲವೂ ಸರಿಯಾಗಿತ್ತು. ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆರೋಗ್ಯ ಸಹಾಯಕಿ ನಿತ್ಯ ಆರೋಗ್ಯ ಕೇಂದ್ರದ ಬಾಗಿಲು ತೆರೆಯುತ್ತಿದ್ದರು. ಗ್ರಾಮದ ಮಹಿಳೆಯರು ಭೇಟಿ ನೀಡಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯುತ್ತಿದ್ದರು. ಆದರೆ ಆಗಿದ್ದ ಆರೋಗ್ಯ ಸಹಾಯಕಿ 9 ವರ್ಷಗಳ ಹಿಂದೆ ವರ್ಗಾವಣೆ ಮಾಡಿಕೊಂಡು ತೆರಳಿದ ಕಾರಣದಿಂದ ಕಿರಿಯ ಆರೋಗ್ಯ ಸಹಾಯಕಿ ಕೇಂದ್ರಕ್ಕೆ ಬೀಗ ಬಿದ್ದಿದೆ. ನಂತರ ಇದುವರೆಗೂ ಸಹಾಯಕಿಯರ ನೇಮಕವಾಗಿಲ್ಲ.
ಇದರಿಂದ ಗ್ರಾಮದ ಮಹಿಳೆಯರು, ಗರ್ಭಿಣಿಯರು ಹಾಗೂ ಬಾಣಂತಿಯರು ಸಕಾಲಕ್ಕೆ ವೈದ್ಯಕೀಯ ಸೇವೆ ದೊರಕದೆ ಪರದಾಡುವಂತಾಗಿದೆ. ಆರೋಗ್ಯ ಸಹಾಯಕಿಯರಿಲ್ಲದೆ ಆಶಾ ಕಾರ್ಯಕರ್ತೆಯರೇ ಪ್ರಾಥಮಿಕ ಆರೋಗ್ಯ ಸೇವೆ ನೀಡುವಂತಾಗಿದೆ.[ಸತ್ತ ಆನೆಯ ದಂತ ಕದ್ದ ಚೋರರ ಬಂಧನ]
ಗ್ರಾಮದಲ್ಲಿ ಬಡವರು, ಕೂಲಿಕಾರ್ಮಿಕರು, ಹಿಂದುಳಿದ ವರ್ಗದ ಜನರೇ ಹೆಚ್ಚಾಗಿದ್ದಾರೆ. ಹೀಗಾಗಿ ಇವರಿಗೆಲ್ಲ ದೂರದ ಕಗ್ಗಳದಹುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗವುದು ಕಷ್ಟವಾಗಿದೆ. ಆದ್ದರಿಂದ ಆದಷ್ಟು ಬೇಗ ಮಹಿಳಾ ಆರೋಗ್ಯ ಸಹಾಯಕಿಯನ್ನು ನೇಮಕ ಮಾಡಿ, ಕೇಂದ್ರ ತೆರೆಯಿರಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಗ್ಗಳದಹುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿವೇಕ್ ಅವರು ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿಂದಾಗಿ ನೇಮಕಾತಿ ನೆನೆಗುದಿಗೆ ಬಿದ್ದಿತ್ತು. ಇತ್ತೀಚೆಗೆ ಗ್ರಾಮಕ್ಕೆ ನೇಮಕ ಮಾಡಿದ್ದ ಕಿರಿಯ ಆರೋಗ್ಯ ಸಹಾಯಕಿ ಹೆರಿಗೆ ರಜೆಗೆ ತೆರಳಿದ್ದಾರೆ. ಹೀಗಾಗಿ ತೊಂದರೆಯಾಗಿದೆ ವಾರಕ್ಕೊಮೆ ತಾವೇ ಗ್ರಾಮಕ್ಕೆ ತೆರಳಿ ಆರೋಗ್ಯ ಸೇವೆ ನೀಡುವುದಾಗಿ ತಿಳಿಸಿದ್ದಾರೆ.