ನಿರಾಶ್ರಿತರ ತಾಣಕ್ಕೆ ಗುಂಡ್ಲುಪೇಟೆಯಲ್ಲಿದ್ದ ಮಾನಸಿಕ ಅಸ್ವಸ್ಥರ ರವಾನೆ
ಚಾಮರಾಜನಗರ, ಜುಲೈ 5: ಗುಂಡ್ಲುಪೇಟೆ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅಲೆದಾಡುತ್ತಿದ್ದ ಸುಮಾರು ಆರು ಮಂದಿ ಮಾನಸಿಕ ಅಸ್ವಸ್ಥರನ್ನು ಮೈಸೂರಿನ ನಿರಾಶ್ರಿತರ ತಾಣಕ್ಕೆ ಬಿಡಲಾಗಿದೆ.
ಬೇರೆ ಬೇರೆ ಕಡೆಯಿಂದ ಮಾನಸಿಕ ಅಸ್ವಸ್ಥರು ಗುಂಡ್ಲುಪೇಟೆ ಪಟ್ಟಣಕ್ಕೆ ಬಂದು ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅಡ್ಡಾಡುತ್ತಾ ಅವರಿವರು ಕೊಟ್ಟಿದ್ದನ್ನು ತಿಂದುಕೊಂಡು ಓಡಾಡುತ್ತಿದ್ದರು. ಬಸ್ ನಿಲ್ದಾಣ, ಪ್ರಯಾಣಿಕರ ತಂಗುದಾಣ, ಕಟ್ಟಡಗಳ ಮುಂದೆ ಆಶ್ರಯ ಪಡೆಯುವುದರೊಂದಿಗೆ ತಮ್ಮಷ್ಟಕ್ಕೆ ಗುನುಗುತ್ತಾ ದಿನ ಕಳೆಯುತ್ತಿದ್ದರು. ಇತ್ತೀಚೆಗೆ ಪಟ್ಟಣದ ಹೊರವಲಯದ ವೀರನಪುರ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ ವಾಹನವೊಂದು ಮಾನಸಿಕ ಅಸ್ವಸ್ಥನಿಗೆ ಡಿಕ್ಕಿ ಹೊಡೆದು ಆತ ಸಾವನ್ನಪ್ಪಿದ್ದನು.

ಇದಾದ ಬಳಿಕ ಸಾರ್ವಜನಿಕರು ಪಟ್ಟಣದಲ್ಲಿ ಮಾನಸಿಕ ಅಸ್ವಸ್ಥರ ಸಂಖ್ಯೆ ಹೆಚ್ಚಾಗಿದ್ದು ಅವರಿಂದ ತೊಂದರೆ ಹೆಚ್ಚಾಗಿದೆ. ಆದ್ದರಿಂದ ಅವರನ್ನು ನಿರಾಶ್ರಿತರ ತಾಣಕ್ಕೆ ಬಿಡಬೇಕು ಎಂದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಪಟ್ಟಣ ಠಾಣೆಯ ಪಿಎಸ್ ಐ ಲತೇಶ್ ಕುಮಾರ್ ಹಾಗೂ ಸಿಬ್ಬಂದಿ ಪಟ್ಟಣದಲ್ಲಿ ಕಾರ್ಯಾಚರಣೆ ನಡೆಸಿ ವಿವಿಧೆಡೆ ಸಂಚರಿಸುತ್ತಿದ್ದ ಆರು ಮಂದಿ ಮಾನಸಿಕ ಅಸ್ವಸ್ಥರನ್ನು ವಶಕ್ಕೆ ಪಡೆದು ಮೈಸೂರಿನ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ.












Click it and Unblock the Notifications