ಗುಂಡ್ಲುಪೇಟೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಹೊರಟ EO ಬಿಂದ್ಯಾ!
ಚಾಮರಾಜನಗರ, ನವೆಂಬರ್ 10: ಗುಂಡ್ಲುಪೇಟೆ ತಾಲೂಕನ್ನು ಬಯಲು ಶೌಚಮುಕ್ತ ತಾಲೂಕನ್ನಾಗಿಸಲು ಪಣತೊಟ್ಟಿರುವ ತಾಪಂ ಕಾರ್ಯನಿರ್ವಾಹಕ ಅಧಿಕಾರಿ(EO) ಎಚ್.ಎಸ್.ಬಿಂದ್ಯಾ ಅವರು ತಾವೇ ಗ್ರಾಮಕ್ಕೆ ತೆರಳಿ ಹಾರೆ ಹಿಡಿದು ಗುಂಡಿ ತೋಡುವ ಮೂಲಕ ಗ್ರಾಮಸ್ಥರಿಗೆ ಶೌಚಾಲಯದ ಅರಿವು ಮೂಡಿಸುವುದರೊಂದಿಗೆ ಎಲ್ಲರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನವೆಂಬರ್ 16ರೊಳಗೆ ತಾಲೂಕಿನ ಎಲ್ಲ ಗ್ರಾಮಗಳನ್ನೂ ಬಯಲು ಶೌಚಮುಕ್ತವಾಗಿಸಲು ತಾಲೂಕು ಪಂಚಾಯಿತಿ ಪಣತೊಟ್ಟಿದ್ದು, ಅದರಂತೆ ಗ್ರಾಮ, ಗ್ರಾಮಗಳಿಗೆ ತೆರಳುತ್ತಿರುವ ಅವರು ಅಲ್ಲಿನ ಜನರನ್ನು ಭೇಟಿ ಮಾಡಿ ಅವರಿಗೆ ಶೌಚಾಲಯ ನಿರ್ಮಾಣಕ್ಕೆ ಬೇಕಾದ ವ್ಯವಸ್ಥೆ ಮಾಡುವ ಮೂಲಕ ಶೌಚಾಲಯದ ಸದುಪಯೋಗದ ಬಗ್ಗೆ ತಿಳಿಸಿ ಶೌಚಾಲಯ ನಿರ್ಮಾಣ ಮಾಡುವಂತೆ ಮನವೊಲಿಸುತ್ತಿದ್ದಾರೆ.
ಬಿಂದ್ಯಾ ಉತ್ಸಾಹಿ ಅಧಿಕಾರಿಯಾಗಿದ್ದು, ಜೂನ್ 21ರಂದು ತಾಲೂಕು ಪಂಚಾಯಿತಿಯ ಪ್ರಭಾರ ಇಒ ಆಗಿ ಅಧಿಕಾರ ಸ್ವೀಕರಿಸಿದ್ದು, ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶೌಚಾಲಯ ನಿರ್ಮಾಣಕ್ಕೆ ಪ್ರೇರಣೆ
ಸ್ವಚ್ಛಭಾರತ್ ಯೋಜನೆಯಲ್ಲಿ ಗುರಿ ಸಾಧಿಸಲು ಗ್ರಾಪಂ ಅಧಿಕಾರಿಗಳ ಜತೆಗೂಡಿ ಹಗಲಿರುಳು ಶ್ರಮಿಸುತ್ತಿದ್ದು, ಪ್ರತಿ 10 ಗ್ರಾಮಪಂಚಾಯಿತಿಗಳಿಗೆ ಉಸ್ತುವಾರಿ ಅಧಿಕಾರಿಗಳನ್ನು ನೇಮಿಸಿ ಮನೆಮನೆಗೆ ತೆರಳಿ ಮನವೊಲಿಸುತ್ತಿದ್ದಾರೆ. ಈ ಮೂಲಕ ವೈಯುಕ್ತಿಕ ಸಮಸ್ಯೆ, ಸ್ಥಳಾವಕಾಶದ ಕೊರತೆ ಮುಂತಾದ ವಿವಿಧ ಕಾರಣಗಳಿಂದ ಶೌಚಾಲಯ ನಿರ್ಮಿಸಿಕೊಳ್ಳದವರ ಸಮಸ್ಯೆ ಬಗೆಹರಿಸಿ ಶೌಚಾಲಯ ನಿರ್ಮಾಣಕ್ಕೆ ಪ್ರೇರೇಪಿಸುತ್ತಿದ್ದಾರೆ.

ಖುದ್ದು ಗುದ್ದಲಿ ಹಿಡಿದ ಬಿಂದ್ಯಾ
ಬನ್ನಿತಾಳಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಚಿಕ್ಕತುಪ್ಪೂರು ಗ್ರಾಮದಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಆಸಕ್ತಿಯಿದ್ದರೂ ಪರರನ್ನು ಅವಲಂಬಿಸಬೇಕಾದ ರಾಜಮ್ಮ ಎಂಬ ಮಹಿಳೆಯ ಮನೆಯ ಮುಂದೆ ಗುಂಡಿಗಳನ್ನು ತೆಗೆಯುವ ಕಾರ್ಯವನ್ನು ತಾವೇ ಆರಂಭಿಸುವ ಮೂಲಕ ಇತರರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ.

ಕೈಜೋಡಿಸಿದ ಅಧಿಕಾರಿಗಳು
ಬಿಂದ್ಯಾ ಅವರು ಗುಂಡಿ ತೆಗೆಯಲು ಮುಂದಾಗಿದ್ದನ್ನು ಕಂಡು ಜತೆಗಿದ್ದ ತಾಪಂ ಸಹಾಯಕ ನಿರ್ದೇಶಕ ಸುಬ್ರಹ್ಮಣ್ಯಶರ್ಮ, ಪಿಡಿಒ ಮಹೇಶ್, ಬಿಲ್ಕಲೆಕ್ಟರ್ ಎಂ.ಮಲ್ಲು, ಕಂಪ್ಯೂಟರ್ ಆಪರೇಟರ್ ಮಲ್ಲೇಶ್ ಸೇರಿದಂತೆ ಗ್ರಾಪಂ ನೌಕರರು ಹಾಗೂ ಗ್ರಾಪಂ ಸದಸ್ಯರು ಕೈಜೋಡಿಸಿದ್ದಾರೆ. ಅಧಿಕಾರಿಗಳೇ ಶೌಚಾಲಯಕ್ಕೆ ಗುಂಡಿತೆಗೆಯುವುದನ್ನು ಕಂಡ ಗ್ರಾಮಸ್ಥರು ಸ್ವಪ್ರೇರಣೆಯಿಂದ ಕೈಜೋಡಿಸಿದ್ದಾರೆ. ಹೀಗಾಗಿ ಗುಂಡಿ ತೆಗೆಯುವ ಕಾರ್ಯ ಮುಗಿದು ಉಳಿದ ಕೆಲಸಕ್ಕೆ ವ್ಯವಸ್ಥೆಯನ್ನು ಮಾಡಿದ್ದಾರೆ.

ಬಯಲು ಶೌಚ ಮುಕ್ತ ಗ್ರಾಮದತ್ತ...
ಈ ನಡುವೆ ಕಾಮಗಾರಿ ನಡೆಸಿ ಅರ್ಧಕ್ಕೆ ಕೈಬಿಟ್ಟಿದ್ದ ಸುಮಾರು 20 ಮನೆಗಳಿಗೆ ತೆರಳಿ ಕೂಡಲೇ ಕಾಮಗಾರಿ ಕೈಗೊಳ್ಳುವಂತೆ ಮನವೊಲಿಸಿದರಲ್ಲದೆ, ಕಾಮಗಾರಿ ನಡೆಸುತ್ತಿದ್ದಲ್ಲಿಗೆ ತೆರಳಿ ಅಲ್ಲಿಯೂ ಕೈಜೋಡಿಸಿದ್ದಾರೆ. ಇವರ ಈ ಉತ್ಸಾಹದಿಂದಾಗಿ ಸದ್ಯದಲ್ಲೇ ಗುಂಡ್ಲುಪೇಟೆ ಬಯಲು ಶೌಚಮುಕ್ತ ತಾಲೂಕಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ. ಎಲ್ಲ ಅಧಿಕಾರಿಗಳು ಇವರಂತೆ ಕಾರ್ಯನಿರ್ವಹಿಸಿದರೆ ದೇಶ ಅಭಿವೃದ್ಧಿಯಾಗುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications