ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಅನುಕಂಪದ ಅಲೆ 'ಕೈ' ಹಿಡಿಯಲಿದೆಯಾ?
ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಅನುಕಂಪದ ಅಲೆ ಹಾಗೂ ಎಚ್ಎಸ್ ಮಹದೇವ ಪ್ರಸಾದ್ ವರ್ಚಸ್ಸು ಕಾಂಗ್ರೆಸ್ 'ಕೈ' ಹಿಡಿಯಲಿದೆ ಎಂಬ ವಿಶ್ವಾಸದಲ್ಲಿದೆ. ಇನ್ನು ಬಿಜೆಪಿಗೆ ಕಾಂಗ್ರೆಸ್ ಅಭ್ಯರ್ಥಿಯ ಅನನುಭವವನ್ನು ಬಳಸಿಕೊಳ್ಳುವ ಆಲೋಚನೆ ಇದೆ
ಗುಂಡ್ಲುಪೇಟೆ, ಮಾರ್ಚ್ 20: ಉಪಚುನಾವಣೆಯಲ್ಲಿ ನಂಜನಗೂಡು, ಗುಂಡ್ಲುಪೇಟೆ ಎರಡೂ ಕ್ಷೇತ್ರಗಳಲ್ಲಿ ಮತ್ತೆ ಗೆಲ್ಲಲೇ ಬೇಕೆಂಬ ಜಿದ್ದು ಕಾಂಗ್ರೆಸ್ ನಲ್ಲಿ ಕಾಣುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೆ ಇದು ಯುದ್ಧದ ಮುಂಚಿನ ತಾಲೀಮಿನಂತಾಗಿದೆ. ಆದರೆ ಕಾಂಗ್ರೆಸ್ ಪಾಲಿಗೆ ಗುಂಡ್ಲುಪೇಟೆಯಲ್ಲಿ ಅನುಕಂಪದ ಮತಗಳು ಕೈ ಹಿಡಿಯುವ ಸಾಧ್ಯತೆ ಇದೆ.
ಸಚಿವರಾಗಿದ್ದ ಎಚ್ ಎಸ್ ಮಹದೇವ ಪ್ರಸಾದ್ ನಿಧನದಿಂದ ಗುಂಡ್ಲುಪೇಟೆಯ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಎಚ್ ಎಸ್ ಮಹದೇವಪ್ರಸಾದ್ ಗೆ ಒಳ್ಳೆ ದಾಖಲೆ ಇತ್ತು. ಜತೆಗೆ ಜನರ ಬೆಂಬಲವೂ ಇತ್ತು. ಅದ್ದರಿಂದಲೇ ತುಂಬ ಯೋಚಿಸುವುದಕ್ಕೆ ಹೋಗದೆ ಕಾಂಗ್ರೆಸ್ ನಿಂದ ಮೃತರ ಪತ್ನಿ ಗೀತಾ ಅವರಿಗೆ ಟಿಕೆಟ್ ಎಂದಾಯಿತು.[ನಂಜನಗೂಡು ಉಪಚುನಾವಣೆ: ಬಿಜೆಪಿ ನಾಯಕರ ಮನೆಯಲ್ಲಿ ಕಾಂಗ್ರೆಸ್ ಸಚಿವರು!]
ಗೀತಾ ಅವರು ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದರಿಂದ ಆಕೆ ಅಖಾಡಕ್ಕೆ ಇಳಿದಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಆಸಕ್ತಿಯಿದ್ದ ಗೀತಾ ಅವರಿಗೆ ರಾಜಕೀಯದ ಬಗ್ಗೆ ಅಂಥ ಒಲವೇನೂ ಇರಲಿಲ್ಲ. ಆದರೆ ಈ ಬಾರಿ ಚುನಾವಣೆಯಲ್ಲಿ ಅನುಕಂಪದ ಅಲೆ ಕೈ ಹಿಡಿಯುವ ಸಾಧ್ಯತೆ ಹಾಗೂ ಕಾಂಗ್ರೆಸ್ ನಿಂದ ಬಂದ ಮನವಿ ಎಲ್ಲ ಪರಿಗಣಿಸಿಯೇ ಅವರು ಸ್ಪರ್ಧೆಗೆ ಒಪ್ಪಿದ್ದಾರೆ.
ಕಾಂಗ್ರೆಸ್ ಭದ್ರಕೋಟೆ
ನಂಜನಗೂಡು ವಿಚಾರಕ್ಕೆ ಬಂದರೆ ಬಿಜೆಪಿಗೆ ಸುಲಭ ಗೆಲುವಾಗುವ ಲಕ್ಷಣವೇ ಗೋಚರಿಸುತ್ತಿದೆ. ಹಾಗೆ ನೋಡಿದರೆ ಬಿಜೆಪಿ ಪಾಲಿಗೆ ಗುಂಡ್ಲುಪೇಟೆ ಚುನಾವಣೆ ತೀರಾ ಮಹತ್ವದ್ದು. 2018ರ ವಿಧಾನಸಭೆ ಚುನಾವಣೆ ಕಣ್ಣೆದುರಿಗಿರುವಾಗ ಗುಂಡ್ಲುಪೇಟೆಯಂಥ ಕಾಂಗ್ರೆಸ್ ನ ಭದ್ರಕೋಟೆಯಲ್ಲಿ ಗೆದ್ದುಬಿಟ್ಟರೆ, ಅದರಲ್ಲೂ ಅನುಕಂಪದ ಅಲೆಯ ಹೊರತಾಗಿಯೂ ಜಯ ಗಳಿಸಿದರೆ ಕಾಂಗ್ರೆಸ್ ವಿರೋಧಿ ಅಲೆಯ ಸಂದೇಶವನ್ನು ಇಡೀ ರಾಜ್ಯಕ್ಕೆ ತಲುಪಿಸಿದಂತಾಗುತ್ತದೆ. ಆತ್ಮವಿಶ್ವಾಸವೂ ಹೆಚ್ಚುತ್ತದೆ.
ಬಿಎಸ್ ವೈ ನಿಷ್ಠ ನಿರಂಜನ್ ಕಣದಲ್ಲಿ
ಬಿಜೆಪಿಯಿಂದ ನಿರಂಜನ್ ಕುಮಾರ್ ಗುಂಡ್ಲುಪೇಟೆ ಕಣದಲ್ಲಿದ್ದಾರೆ. 2008ರಲ್ಲಿ ಬಿಜೆಪಿ ಟಿಕೆಟ್ ನಿಂದಲೇ ಸ್ಪರ್ಧಿಸಿದ್ದರು. ಯಾವಾಗ ಯಡಿಯೂರಪ್ಪನವರು ಕೆಜೆಪಿ ಅರಂಭಿಸಿದರೋ ಅಗ ಅಲ್ಲಿಗೆ ಹೋಗಿದ್ದರು. ಬಿಎಸ್ ವೈ ನಿಷ್ಠರಾದ ನಿರಂಜನ್ ಅವರನ್ನು ಉಪಚುನಾವಣೆ ಅಭ್ಯರ್ಥಿಯಾಗಿ ಬಿಜೆಪಿ ಆಯ್ಕೆ ಮಾಡಿದೆ.
ರವಿ, ಲಿಂಬಾವಳಿಗೆ ಉಸ್ತುವಾರಿ
ಎರಡೂ ಉಪಚುನಾವಣೆ ಕ್ಷೇತ್ರದಲ್ಲಿ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತುತ್ತಿದ್ದಾರೆ. ಅದರಲ್ಲೂ ಗುಂಡ್ಲುಪೇಟೆ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುವುದಕ್ಕೆ ಸಿಟಿ ರವಿ, ಅರವಿಂದ ಲಿಂಬಾವಳಿ ಅವರನ್ನು ನೇಮಿಸಲಾಗಿದೆ. ಈಗ ಕಾಂಗ್ರೆಸ್ ಗೆ ಈ ಯುದ್ಧ ಗೆಲ್ಲಲೇಬೇಕು. ಜತೆಗೆ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ ಎಂಬುದನ್ನು ಸಾಬೀತುಪಡಿಸಬೇಕು.
ಆಡಳಿತ ವಿರೋಧಿ ವರ್ಸಸ್ ಅನುಕಂಪದ ಅಲೆ
ಇನ್ನು ಬಿಜೆಪಿಗೆ ಮೈಸೂರು ಭಾಗ ಕಾಂಗ್ರೆಸ್ ಭದ್ರಕೋಟೆ ಎಂಬ ನಂಬಿಕೆಯನ್ನೇ ಕೆಡವಿಹಾಕಬೇಕಿದೆ. ಗೀತಾ ಮಹದೇವಪ್ರಸಾದ್ ಅವರ ಅನನುಭವ ಬಿಜೆಪಿ ಪಾಲಿಗೆ ಭರವಸೆಯಂತೆ ಕಾಣುತ್ತಿದೆ. ಮಹದೇವ್ ಪ್ರಸಾದ್ ಅವರಿಗೆ ಜನರ ಮಧ್ಯೆ ಇದ್ದ ಹೆಸರು ಹಾಗೂ ಅನುಕಂಪದ ಅಲೆ ಸಹಾಯ ಸಿಗಬಹುದು ಎಂಬ ಭರವಸೆ ಕಾಂಗ್ರೆಸ್ ಗೆ ಕಾಣುತ್ತಿದೆ. ಏಪ್ರಿಲ್ 9ರಂದು ಉಪ ಚುನಾವಣೆ ನಡೆದ ನಂತರವಷ್ಟೇ ಮತದಾರರ ಒಲವು ಬಯಲಾಗಲಿದೆ.