ಕೇರಳಿಗರಿಗೆ ಕಸದ ತೊಟ್ಟಿಯಾಗಿದೆಯಾ ಗುಂಡ್ಲುಪೇಟೆ?
ಚಾಮರಾಜನಗರ, ಸೆಪ್ಟೆಂಬರ್ 19: ಗಡಿಭಾಗದ ತಪಾಸಣಾ ಕೇಂದ್ರದಲ್ಲಿರುವ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಲಾರಿ ಚಾಲಕರು ನೀಡುವ ಕಾಸಿಗೆ ಕೈಯೊಡ್ಡಿ ತಪಾಸಣೆ ಮಾಡದೆ ಬಿಡುವುದರಿಂದಾಗಿ ಕೇರಳದ ಕಸವೆಲ್ಲವೂ ಚಾಮರಾಜನಗರ ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯಲ್ಲಿ ವಿಲೇವಾರಿಯಾಗುತ್ತಿದೆ.
ಹೊರ ರಾಜ್ಯಗಳಿಗೆ ಕರ್ನಾಟಕ ಕಸದ ತೊಟ್ಟಿಯಾ?
ಈ ವ್ಯಾಪ್ತಿಯ ರಸ್ತೆಯಲ್ಲಿ ಸಂಚರಿಸಿದರೆ ನಿರ್ಜನ ಪ್ರದೇಶಗಳಲ್ಲಿ ಕಸವನ್ನು ಮೂಟೆಯಲ್ಲಿ ಕಟ್ಟಿ ಎಸೆದು ಹೋಗಿರುವ ದೃಶ್ಯಗಳು ಕಾಣಸಿಗುತ್ತಿವೆ. ಚಾಮರಾಜನಗರಕ್ಕೆ ಅತ್ತ ತಮಿಳುನಾಡು ಮತ್ತು ಕೇರಳದ ಗಡಿಭಾಗವೂ ಸೇರುವುದರಿಂದಾಗಿ ಎರಡು ರಾಜ್ಯಗಳ ಕಸವನ್ನು ತಂದು ಇಲ್ಲಿ ಸುರಿಯುತ್ತಿರುವುದು ಕಂಡು ಬರುತ್ತಿದೆ. ಪರಿಣಾಮ ಹೆದ್ದಾರಿಗಳು ಕಸದಿಂದ ಗಬ್ಬುನಾರುವಂತಾಗಿದೆ.
ಈ ಕಸಗಳು ಹೇಗೆ ಇಲ್ಲಿಗೆ ಬರುತ್ತಿವೆ ಎನ್ನುವುದೇ ಗೊತ್ತಾಗುತ್ತಿಲ್ಲ. ಇಷ್ಟಕ್ಕೂ ಚೆಕ್ ಪೋಸ್ಟ್ ಗಳಲ್ಲಿ ಸಿಬ್ಬಂದಿ ಯಾವ ರೀತಿಯ ತಪಾಸಣೆ ಮಾಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ಕೆಲವರು ಹೇಳುವ ಪ್ರಕಾರ ಕರ್ನಾಟಕದಿಂದ ಕೇರಳಕ್ಕೆ ತೆರಳುವ ಲಾರಿಗಳು ಮತ್ತೆ ಕೇರಳದಿಂದ ಹಿಂತಿರುಗುವ ಸಂದರ್ಭದಲ್ಲಿ ಅಲ್ಲಿನ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಕವರ್ ಗಳಲ್ಲಿ ತುಂಬಿಕೊಂಡು ಬರುತ್ತಿದ್ದು, ಅದನ್ನು ರಸ್ತೆಯ ಎರಡು ಬದಿಗಳಲ್ಲಿ ಅಲ್ಲಲ್ಲಿ ನಿಲ್ಲಿಸಿ ಎಸೆದುಹೋಗುತ್ತಿದ್ದು, ಇದಕ್ಕೆ ಒಂದಷ್ಟು ಹಣವೂ ಸಂದಾಯವಾಗುತ್ತಿದೆಯಂತೆ.
ಕೆಲವು ಸಮಯಗಳಿಂದ ಇದಕ್ಕೆ ನಿಯಂತ್ರಣ ಕಂಡು ಬಂದಿತ್ತಾದರೂ ಇದೀಗ ಮತ್ತೆ ಕೇರಳದಿಂದ ಗುಂಡ್ಲುಪೇಟೆ ಕಡೆಗೆ ತೆರಳುವ ಲಾರಿಗಳು ಕೇರಳದ ತ್ಯಾಜ್ಯಗಳು ಹೊತ್ತು ತರುತ್ತಿವೆ. ಈ ನಡುವೆ ಹೆದ್ದಾರಿ 766ರ ಬದಿಯಲ್ಲಿ ಸಂಚರಿಸುತ್ತಿದ್ದ ಲಾರಿಯೊಂದು ತ್ಯಾಜ್ಯ ತುಂಬಿದ ಪ್ಲಾಸ್ಟಿಕ್ ಕವರ್ ಗಳನ್ನು ರಸ್ತೆಯ ಎಡಭಾಗಕ್ಕೆ ಎಸೆದು ಹೋಗುತ್ತಿತ್ತು. ಇದನ್ನು ಗಮನಿಸಿದ ಶಿಕ್ಷಕ ಸುಬ್ರಹ್ಮಣ್ಯಸ್ವಾಮಿ ಮತ್ತು ರಾಜು ಎಂಬುವವರು ಬೆಂಡಗಳ್ಳಿ ಗ್ರಾಮದ ಬಳಿ ಲಾರಿ ತಡೆದು ಚಾಲಕನನ್ನು ಪ್ರಶ್ನಿಸಿದರೆ ಲಾರಿ ಚಾಲಕ ಉಡಾಫೆಯ ಉತ್ತರ ನೀಡಿ ಶಿಕ್ಷಕರ ಮೇಲೆ ಹಲ್ಲೆಗೂ ಯತ್ನಿಸಿದ್ದಾನೆ.
ಅಷ್ಟರಲ್ಲಿ ಸ್ಥಳೀಯ ಸಾರ್ವಜನಿಕರು ಲಾರಿಯತ್ತ ಬರುವುದನ್ನು ಗಮನಿಸಿದ ಚಾಲಕ ಪರಾರಿಯಾಗಿದ್ದಾನೆ. ಕಳೆದ ಕೆಲವು ಸಮಯಗಳ ಹಿಂದೆ ಗುಂಡ್ಲುಪೇಟೆ ತಾಲೂಕಿನ ಚನ್ನಮಲ್ಲಿಪುರ, ಭೀಮನಬೀಡು ಸೇರಿದಂತೆ ಗಡಿಭಾಗದ ಗ್ರಾಮಗಳಲ್ಲಿ ಕೇರಳದ ತ್ಯಾಜ್ಯಗಳನ್ನು ಎಸೆಯುತ್ತಿದ್ದಾಗ ಗ್ರಾಮಸ್ಥರೇ ಲಾರಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು.
ಗುಂಡ್ಲುಪೇಟೆಯಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಗಡಿಭಾಗದ ಚೆಕ್ ಪೋಸ್ಟ್ ನಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೇರಳದ ಕಸಗಳು ಮಾತ್ರ ಎಗ್ಗಿಲ್ಲದೆ ಜಿಲ್ಲೆಯೊಳಗೆ ನುಗ್ಗುತ್ತಿವೆ.
ಇನ್ನಾದರೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕಸ ತಂದು ಎಸೆಯುವ ಕೃತ್ಯಕ್ಕೆ ಕಡಿವಾಣ ಹಾಕಬೇಕಾಗಿದೆ. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಗುಂಡ್ಲುಪೇಟೆ ಹೊರರಾಜ್ಯಗಳಿಗೆ ಕಸ ಎಸೆಯುವ ತೊಟ್ಟಿಯಾಗಿ ಪರಿಣಮಿಸಿದರೂ ಅಚ್ಚರಿ ಪಡಬೇಕಾಗಿಲ್ಲ.