ಬೀಳುವ ಸ್ಥಿತಿಯಲ್ಲಿರುವ ಗೌಡಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ
ಚಾಮರಾಜನಗರ, ಮೇ 21; ಚಾಮರಾಜನಗರ ಸಮೀಪದ ಗೌಡಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು ಕುಸಿಯುವ ಸಂಭವವಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿರುವ ಈ ಆರೋಗ್ಯ ಕೇಂದ್ರವು ಸತ್ತಮುತ್ತಲಿನ 10-12 ಗ್ರಾಮಸ್ಥರ ಏಕೈಕ ಆರೋಗ್ಯ ಚಿಕಿತ್ಸೆಯ ಅವಲಂಬನೆ ಆಗಿದೆ. ಆದರೆ ಸುಮಾರು 5 ದಶಕಗಳನ್ನು ಕಂಡಿರುವ ಈ ಅರೋಗ್ಯ ಕೇಂದ್ರದ ಕಟ್ಟಡದಲ್ಲಿ ಗೋಡೆಗಳು ಸವೆದು ಉದುರುತ್ತಿರುವುದಲ್ಲದೆ ಚಾವಣಿಯ ಸಿಮೆಂಟ್ ಚಕ್ಕೆಗಳು ಕಳಚಿ ಬೀಳುತ್ತಿರುವುದರ ನಡುವೆಯೇ ಸಿಬ್ಬಂದಿ ಕೆಲಸ ಮಾಡಬೇಕಾಗಿದೆ.
ಆಸ್ಪತ್ರೆ ಆಕ್ಸಿಜನ್ ದುರಂತ; ಚಾಮರಾಜನಗರ ಡಿಸಿ ಎತ್ತಂಗಡಿ
ಕೇಂದ್ರದಲ್ಲಿ ಎಂಬಿಬಿಎಸ್ ವೈದ್ಯರು ಮತ್ತು ಶುಶ್ರೂಷಕರು ಯಾವುದೇ ಕೊರತೆ ಇಲ್ಲದೆ ಉತ್ತಮ ಗುಣಮಟ್ಟದ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಜನರು ಹತ್ತಾರು ಕಿ.ಮೀ. ದೂರದಿಂದ ಬಂದು ಶುಶ್ರೂಷೆ ಪಡೆಯುತ್ತಾರೆ.
ಚಾಮರಾಜನಗರ; ಕಡಿಮೆಯಾಗದ ಕೊರೊನಾ, ಮುಂದುವರೆದ ಆತಂಕ
"ಈಗ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಹೆರಿಗೆ ಮತ್ತು ಸಣ್ಣಪುಟ್ಟ ಕಾಯಿಲೆಗೂ ಆಸ್ಪತ್ರೆಗೆ ಬರುವವರ ಸಂಖ್ಯೆ ಏರಿಕೆಯಾಗಿದ್ದು, ಕೊಠಡಿ ಮತ್ತು ಸ್ಥಳಾವಕಾಶ ಕೊರತೆಯಿಂದ ವೈದ್ಯರಿಗೆ ಸೇವೆ ಸಲ್ಲಿಸಲು ಹೆಚ್ಚಿನ ಒತ್ತಡ ಇದೆ" ಎಂದು ಗ್ರಾಮಸ್ಥರಾದ ಮಹದೇವಸ್ವಾಮಿ ಹೇಳಿದರು.
ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ?
ಅಲ್ಲದೆ ಈ ಆಸ್ಪತ್ರೆಗೆ ಕೋವಿಡ್ ನಿರೋಧಕ ಲಸಿಕೆ ಪಡೆಯಲು ಮತ್ತು ಕೋವಿಡ್ ಸೋಂಕಿತರೂ ಈಗ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆದರೆ ಇವರು ನೆರಳಿನಲ್ಲಿ ಕೂತುಕೊಳ್ಳಲು ಕನಿಷ್ಟ ಪಕ್ಷ ನಿಂತುಕೊಳ್ಳಲೂ ಸ್ಥಳಾವಕಾಶದ ಕೊರತೆ ಇದೆ. ಇವರಿಗೆ ಮಳೆಯಿಂದಲೂ ರಕ್ಷಣೆ ಪಡೆಯಲು ಅವಕಾಶ ಇಲ್ಲವಾಗಿದೆ.
"ಇಷ್ಟೇ ಅಲ್ಲದೆ ಹಳೆಯದಾದ ಈ ಕಟ್ಟಡ ಮಳೆಗಾಲದಲ್ಲಿ ಕುಸಿಯುವ ಭೀತಿಯು ಎದುರಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಪ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಆರೋಗ್ಯ ಸೌಕರ್ಯ ಒದಗಿಸಿಕೊಟ್ಟರೆ ಹೆಚ್ಚಿನ ರೋಗಿಗಳು ಇದೇ ಕೇಂದ್ರಕ್ಕೆ ಆಗಮಿಸುವ ದಟ್ಟಣೆಯನ್ನು ತಪ್ಪಿಸಬಹುದು" ಎಂದು ದೇವರಹಳ್ಳಿಯ ಪುಟ್ಟಪ್ಪ ಹೇಳುತ್ತಾರೆ.
ಈ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತನುಜಾ, "ಆರೋಗ್ಯ ಕೇಂದ್ರದ ಚಾವಣಿಯನ್ನು ಹಿಂದೆ ತಾಲ್ಲೂಕು ಪಂಚಾಯಿತಿ ವತಿಯಿಂದ ದುರಸ್ಥಿ ಮಾಡಲಾಗಿತ್ತು. ಈಗ ಮತ್ತೆ ಶಿಥಿಲವಾಗಿದೆ. ಇಲ್ಲಿನ 2 ಕೊಠಡಿಗಳಲ್ಲಿ 8 ಸಿಬ್ಬಂದಿ, 13 ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ" ಎಂದರು.
ಚಾಮರಾಜನಗರ ತಾಲ್ಲೂಕಿನಲ್ಲಿ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಗೌಡಹಳ್ಳಿ ಪಂಚಾಯಿತಿ ವ್ಯಾಪ್ತಿಯ 13 ಗ್ರಾಮಗಳ 3250 ಕುಟುಂಬಗಳ ಒಟ್ಟು 15 ಸಾವಿರ ಜನರಿಗೆ 1 ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಯರಿಯೂರು-2 ಮತ್ತು ಶಿವಕಳ್ಳಿಗಳಲ್ಲಿ ಉಪ ಕೇಂದ್ರಗಳಿವೆ. ಉಳಿದೆಡೆ ಬಳಕೆಯಲ್ಲಿ ಇಲ್ಲ.
Recommended Video
"ಕಟ್ಟಡ ಶಿಥಿಲಗೊಂಡಿರುವ ಕುರಿತು ಮಾಹಿತಿ ಪಡೆಯಲಾಗಿದೆ. ನೂತನ ಕಟ್ಟಡ ನಿರ್ಮಿಸಲು ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು" ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ್ ಹೇಳಿದ್ದಾರೆ.