ಗಡಿಜಿಲ್ಲೆಯಲ್ಲಿ 24.58 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲು ನಿಲ್ದಾಣ ಅಭಿವೃದ್ಧಿಗೆ ಶಂಕುಸ್ಥಾಪನೆ, ಏನೆಲ್ಲಾ ಸೌಲಭ್ಯಗಳಿರಲಿವೆ?
ಚಾಮರಾಜನಗರ, ಫೆಬ್ರವರಿ, 26: ಕರ್ನಾಟಕ ರಾಜ್ಯದ ಕಟ್ಟಕಡೆಯ ರೈಲ್ವೆ ನಿಲ್ದಾಣವಾದ ಚಾಮರಾಜನಗರ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಅಮೃತ ಭಾರತ ಸ್ಟೇಷನ್ ಯೋಜನೆ ವ್ಯಾಪ್ತಿಗೆ ತರಲಾಗಿದ್ದು, ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಚಾಮರಾಜನಗರ ರೈಲ್ವೆ ನಿಲ್ದಾಣವು ಬ್ರಾಡ್ ಗೇಜ್ ಪರಿವರ್ತನೆಗೊಂಡ ಬಳಿಕ ಎರಡು ಟ್ರ್ಯಾಕ್ಗೆ ಅನುಕೂಲವಾದ 2 ಪ್ಲಾಟ್ ಫಾರಂ ಇದ್ದು, 24 ಬೋಗಿಗಳ ರೈಲು ನಿಲ್ಲಬಹುದಾಗಿದೆ. ಅಮೃತ ಭಾರತ್ ನಿಲ್ದಾಣ ಯೋಜನೆಗೆ ಗಡಿಜಿಲ್ಲೆಯ ರೈಲು ನಿಲ್ದಾಣ ಆಯ್ಕೆ ಆಗಿದ್ದು, 24.58 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿ ನಡೆಯಲಿದೆ.

ಹೊಸ ಬುಕಿಂಗ್ ಆಫೀಸ್, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ವೇಟಿಂಗ್ ರೂಂ, ಶಿಶುಪಾಲನ ಕೊಠಡಿ, ಪಾರ್ಸೆಲ್ ಆಫೀಸ್, ಒಂದು ಕೆಫೆಟೇರಿಯಾ ಹಾಗೂ ಮೂರು ಕ್ಯಾಟರಿಂಗ್ ಮಳಿಗೆ, ಪ್ಲಾಟ್ ಫಾರಂ ಶೌಚಾಲಯ, ಗ್ರಾನೈಟ್ ನೆಲಹಾಸು, ಪ್ಲಾಟ್ ಫಾರಂ ಛಾವಣಿ, ದ್ವಿಚಕ್ರ ಹಾಗೂ ಕಾರುಗಳಿಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳ ಮತ್ತು ಆಟೋ ಸ್ಟಾಂಡ್ ಸೌಲಭ್ಯಗಳನ್ನು ಹೊಂದಿರಲಿದೆ.
ಅಷ್ಟೇ ಅಲ್ಲದೆ, ಮಳೆ ನೀರು ಕೊಯ್ಲು, ದೊಡ್ಡ ನಿಲ್ದಾಣ ಪ್ರವೇಶದ್ವಾರ, ಸಿಸಿಟಿವಿ ಅಳವಡಿಕೆ, ವೈಫೈ ಸೌಲಭ್ಯ, ಎಲ್ಇಡಿ ಪರದೆಯಲ್ಲಿ ರೈಲುಗಳ ಮಾಹಿತಿ, ಕಟ್ಟಡ ಜೀರ್ಣೋದ್ಧಾರ ಈ ಅಮೃತ ಸ್ಟೇಷನ್ ಯೋಜನೆಯಲ್ಲಿ ಒಳಗೊಂಡಿದೆ.
ಇನ್ನು, ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಚಾಮರಾಜನಗರದ ಕಾರ್ಯಕ್ರಮದಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್, ಮಾಜಿ ಶಾಸಕರಾದ ಎನ್.ಮಹೇಶ್, ಬಾಲರಾಜು ಇದ್ದರು. ಇನ್ನು ಸಮಾರಂಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಕಾರ್ಯಕ್ರಮ ನಡೆಯಿತು.











Click it and Unblock the Notifications