ಬಂಡೀಪುರದಲ್ಲಿನ ಸಫಾರಿ ಜಂಗಲ್ ಲಾಡ್ಜ್ ಗೆ ಹಸ್ತಾಂತರ?
ಚಾಮರಾಜನಗರ, ಜೂನ್ 09: ಗುಂಡ್ಲುಪೇಟೆಯ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನಡೆಯುವ ಸಫಾರಿ ಸದ್ಯ ಅರಣ್ಯ ಇಲಾಖೆಯ ಉಸ್ತುವಾರಿಯಲ್ಲಿದ್ದು ಮುಂದಿನ ದಿನಗಳಲ್ಲಿ ಜಂಗಲ್ಲಾಡ್ಜ್ ಅಂಡ್ ರೆಸಾರ್ಟ್ ಗೆ ಹಸ್ತಾಂತರಿಸಲಾಗುತ್ತದೆ ಎಂಬ ಸುದ್ದಿಗಳು ಅರಣ್ಯ ಇಲಾಖೆ ವಲಯದಿಂದ ಕೇಳಿ ಬರುತ್ತಿದೆ.
ಬಂಡೀಪುರದ ಸಫಾರಿ ಪ್ರಾಣಿಪ್ರಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದ್ದು, ಸಫಾರಿಗೆಂದೇ ಬರುವ ಪ್ರವಾಸಿಗರ ದೊಡ್ಡ ಹಿಂಡೇ ಇದ್ದು, ಇದರಿಂದಾಗಿ ವರ್ಷಕ್ಕೆ ಕೋಟ್ಯಂತರ ರೂ. ಆದಾಯ ಬರುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಸಫಾರಿ ಜವಬ್ದಾರಿಯನ್ನು ಅರಣ್ಯ ಇಲಾಖೆ ಜಂಗಲ್ಲಾಡ್ಜ್ ಗೆ ಹಸ್ತಾಂತರಿಸಲು ಮುಂದಾಗಿದೆ ಎಂಬ ಸುದ್ದಿ ಒಂದಷ್ಟು ಅನುಮಾನವನ್ನು ಹುಟ್ಟು ಹಾಕಿದೆ.
ಬಂಡೀಪುರದಲ್ಲಿ ಜಿಪ್ಸಿ ಸಫಾರಿಗೆ ಮುಂಗಡ ಬುಕಿಂಗ್ ಅನಿವಾರ್ಯ!
ಈಗಾಗಲೇ ಅರಣ್ಯ ಇಲಾಖೆಗಳೊಂದಿಗೆ ಕೈಜೋಡಿಸಿರುವ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಆದಾಯ ಬರುವ ಮೂಲಗಳನ್ನೆಲ್ಲ ತನ್ನ ವಶ ಮಾಡುತ್ತಾ ಸಾಗುತ್ತಿದೆ. ಸೂಕ್ತ ನಿರ್ವಹಣೆ ಮಾಡುವಲ್ಲಿ ವಿಫಲವಾಗುತ್ತಿರುವ ಅರಣ್ಯ ಇಲಾಖೆ ಮೇಲಾಧಿಕಾರಿಗಳು ಎಲ್ಲವನ್ನು ಹಸ್ತಾಂತರಿಸಿ ಕೈತೊಳೆದುಕೊಳ್ಳಲು ಸನ್ನದ್ಧರಾಗಿದ್ದಾರೆ ಎನ್ನಲಾಗುತ್ತಿದೆ.
ಬಂಡೀಪುರದಲ್ಲಿರುವ ಪ್ರವಾಸಿಗರ ವಸತಿಗೃಹವನ್ನು ಜಂಗಲ್ಲಾಡ್ಜ್ ನವರೇ ನಿರ್ವಹಣೆ ಮಾಡುತ್ತಿದ್ದಾರೆ ಇದರೊಂದಿಗೆ ಸಫಾರಿಯನ್ನು ನಮಗೆ ವಹಿಸಿಕೊಡಿ ಎನ್ನುವುದು ಅವರ ಒತ್ತಾಯವಾಗಿದೆ. ಈ ಕುರಿತಂತೆ ಉನ್ನತ ಮಟ್ಟದ ಸಭೆಯೂ ನಡೆದಿದ್ದು ಇದಕ್ಕೆ ಪೂರಕವಾಗಿ ಸಭೆಗಳು ನಡೆದಿವೆ. ಅಲ್ಲಿ ಹಸ್ತಾಂತರದಿಂದ ಆಗುವ ಸಾಧಕ ಬಾಧಕಗಳ ಕುರಿತು ಚರ್ಚೆಯಾಗಿದೆ ಎಂದು ಹೇಳಲಾಗಿದೆ.
ಇದೀಗ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿರುವುದು ನಿಜ ಎಂಬುದಕ್ಕೆ ಸಾಕ್ಷಿ ಎಂಬಂತೆ ಸಫಾರಿಗೆ ತೆರಳುವ ಜಿಪ್ಸಿ ವಾಹನವನ್ನು ಆನ್ಲೈನ್ನಲ್ಲಿ ಬುಕಿಂಗ್ ಮಾಡಿದವರಿಗೆ ಮಾತ್ರ ನೀಡುತ್ತಿದ್ದು, ಸ್ಥಳದಲ್ಲೇ ಬುಕಿಂಗ್ ಮಾಡಿಸುವ ಪ್ರವಾಸಿಗರಿಗೆ ನೀಡುತ್ತಿಲ್ಲ. ಒಂದು ಸಲದ ಸಫಾರಿಗೆ 6 ಜನ ಪ್ರವಾಸಿಗರಿಗೆ 4200 ಶುಲ್ಕವನ್ನು ಪಡೆಯಲಾಗುತ್ತಿದೆ. ಅನ್ಲೈನ್ ಬುಕ್ ಮಾಡಿಸದೇ ಇರುವ ಪ್ರವಾಸಿಗರು ಸ್ಥಳದಲ್ಲೇ ಜಿಪ್ಸಿಯನ್ನು ಬುಕಿಂಗ್ ಮಾಡಿಸಿಕೊಂಡು ಸಫಾರಿಗೆ ಹೋಗುತ್ತಿದ್ದರಾದರೂ ಇನ್ನು ಮುಂದೆ ಅದು ಸಾಧ್ಯವಿಲ್ಲ.
ನಮ್ಮ ಇಲಾಖೆಯಿಂದ ಸಫಾರಿ ನಡೆಸಿದರೆ ಇಲಾಖೆಗೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ. ಆದರೆ ಜಂಗಲ್ ಲಾಡ್ಜ್ ಗೆ ನೀಡದರೆ ಲಾಭವನ್ನೆಲ್ಲ ಅವರಿಗೆ ಬಿಟ್ಟುಕೊಟ್ಟಂತೆ ಆಗುತ್ತದೆ ಎಂದು ಕೆಲವು ಅರಣ್ಯ ಸಿಬ್ಬಂದಿ ಹೇಳುತ್ತಿದ್ದಾರೆ. ಒಟ್ಟಾರೆ ಈಗಾಗಲೇ ಹರಡಿರುವ ಈ ಸುದ್ದಿ ನಿಜವೇ ಎಂಬುದು ಕಾರ್ಯರೂಪಕ್ಕೆ ಬಂದ ಬಳಿಕವಷ್ಟೆ ಗೊತ್ತಾಗಬೇಕಿದೆ.