MUDA Case: "ಭ್ರಷ್ಟ ಮುಖ್ಯಮಂತ್ರಿಗೆ ಶಿಕ್ಷೆ ಕೊಡಿಸಬಹುದು ಎಂಬುದಕ್ಕೆ ಇದೊಂದು ಸೂಕ್ತ ಉದಾಹರಣೆ"
ಚಾಮರಾಜನಗರ, ಸೆಪ್ಟೆಂಬರ್, 27: ಮುಡಾ ಹಗರಣ ಪ್ರಕರಣ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದೆ. ಇನ್ನೂ ಈ ಬಗ್ಗೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು, ನನ್ನ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ ಎಂದು ಹೇಳಿದರು.
ಸಿಎಂ ವಿರುದ್ಧ ಎಫ್ಐಆರ್ ದಾಖಲಾದ ಬಗ್ಗೆ ಚಾಮರಾಜನಗರದಲ್ಲಿ ಅವರು ಮೊದಲ ಪ್ರತಿಕ್ರಿಯೆ ನೀಡಿದ ಅವರು, ನನ್ನ ಹೋರಾಟಕ್ಕೆ ಮೊದಲ ಜಯ ಸಿಕ್ಕಂತಾಗಿದೆ. ಮೇಲಾಧಿಕಾರಿಗಳ ಒತ್ತಡ ಹೇರಿದ್ದರಿಂದ ಲೋಕಾಯುಕ್ತ ಎಸ್ಪಿ ಎಫ್ಐಆರ್ ದಾಖಲು ಮಾಡಿದ್ದಾರೆ. ಪ್ರಾಮಾಣಿಕ ಹೋರಾಟಕ್ಕೆ ಯಾವಾಗಲೂ ಜಯ ಎಂಬುದಕ್ಕೆ ಇದೊಂದು ಉದಾಹರಣೆ ಎಂದರು.

ಹೋರಾಟ ಮಾಡಿ ಭ್ರಷ್ಟ ಮುಖ್ಯಮಂತ್ರಿಗೆ ಶಿಕ್ಷೆ ಕೊಡಿಸಬಹುದು ಎಂಬುದಕ್ಕೆ ಇದೊಂದು ಪ್ರಮುಖ ಉದಾಹರಣೆ ಆಗಿದೆ. ಎಫ್ಐಆರ್ ದಾಖಲಾಗಿದ್ದರೂ ಸಹ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರ್ಟ್ಗೆ ಅರ್ಜಿ ಹಾಕುತ್ತೇನೆ. ಎಫ್ಐಆರ್ ದಾಖಲಿಸುವ ಆರಂಭದಲ್ಲೇ ಇಷ್ಟು ಆಟ ಆಡಿದರೇ ನಿಷ್ಪಕ್ಷಪಾತ ತನಿಖೆ ಅಸಾಧ್ಯ ಎಂದು ಅವರು ಲೋಕಾಯುಕ್ತ ಪೊಲೀಸ್ ತನಿಖೆ ಬಗ್ಗೆ ಅಸಮಾಧಾನ ಹೊರಹಾಕಿದರು.
ಶೀಘ್ರವಾಗಿ ಕ್ರಮ ಕೈಗೊಳ್ಳದೇ, ಲೋಕಾಯುಕ್ತ ಎಸ್ಪಿ ನ್ಯಾಯಾಂಗ ನಿಂದನೆ ಮಾಡಿದ್ದು, ಅವರಿಗೂ ಶಿಕ್ಷೆ ಕೊಡಿಸುತ್ತೇನೆ ಎಂದು ಸ್ನೇಹಮಯಿ ಕೃಷ್ಣ ಅವರು ಹೇಳಿದರು. ಈ ಪ್ರಕರಣವನ್ನು ಸಿಬಿಐಗೆ ಕೊಡಿಸುತ್ತೇನೆ. ಒಂದು ಮೊಬೈಲ್ ಫೋನ್ಗೆ ಹೆದರಿಕೊಳ್ಳುವಂತಹ ಎಸ್ಪಿ ಉದೇಶ್ ಪ್ರಾಮಾಣಿಕ ತನಿಖೆ ನಡೆಸುತ್ತಾರಾ? ಪ್ರಕರಣ ಸಿಬಿಐಗೆ ಹೋಗುವ ತನಕ ನಿರಂತರ ಹೋರಾಟ ಮಾಡುತ್ತೇನೆ. ಸೋಮವಾರ ಹೈ ಕೋರ್ಟ್ನಲ್ಲಿ ನಮ್ಮ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ. ಈ ಹಿಂದೆ ತನಿಖಾ ಸಂಸ್ಥೆಗಳಿಗೆ ನ್ಯಾಯಾಲಯ ಛೀ ಮಾರಿ ಹಾಕಿದೆ ಎಂದರು.
ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ಕೊಡಲ್ಲ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಒಂದೊಂದು ಸಮಯಕ್ಕೆ ಒಂದೊಂದು ರೀತಿ ವರ್ತಿಸಿದ್ದಾರೆ. ಬೇರೆಯವರ ಮೇಲೆ ಆರೋಪ ಬಂದಾಗ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ತಮ್ಮ ವಿರುದ್ದ ದೂರು ದಾಖಲಾದಾಗ ಉಲ್ಟಾ ಹೊಡೆಯುತ್ತಿದ್ದಾರೆ. ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಹೇಳಿದರು.
ಸ್ನೇಹಮಯಿ ಕೃಷ್ಣ ಹೇಳಿದ್ದೇನು?: ನ್ಯಾಯಾಲಯದ ವಿಚಾರಣೆಗೆ ಹಾಜರಾದ ಬಳಿಕ ಸ್ನೇಹಮಯಿ ಕೃಷ್ಣ ಮಾಧ್ಯಮದವರೊಂದಿಗೆ ಮಾತನಾಡಿ,ಕರುಣಾಕರ್ ಎಂಬವರು ನನಗೆ ಪರಿಚಿತರೇ ಆಗಿದ್ದು ನನ್ನ ವಿರುದ್ದ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನಾನು ಅವರ ಬಳಿ 50,000 ರೂಪಾಯಿ ಸಾಲವನ್ನು ಪಡೆದಿದ್ದು ನಿಜ. ಆದರೆ, 3 ಲಕ್ಷ ಸಾಲ ಕೊಡಿಸುವುದಾಗಿ ಪ್ರಾಮಿಸರಿ ನೋಟ್ ಬರೆಸಿಕೊಂಡಿದ್ದರು. ಪ್ರತಿ ತಿಂಗಳು 50,000 ರೂಪಾಯಿ ಪಡೆದ ಸಾಲಕ್ಕೆ ಬಡ್ಡಿ ಕೊಡುತ್ತಾ ಬಂದಿದ್ದೇನೆ ಎಂದರು.
ನ್ಯಾಯಾಧೀಶರ ಮುಂದೆಯೂ ಇದನ್ನು ಹೇಳಿದ್ದು 50 ಸಾವಿರಕ್ಕೆ ಎಷ್ಟು ಸೇರಿಸಿ ಕೊಡ್ತಿರಾ ಅಂತ ಕೇಳಿದರು. ಅದಕ್ಕೆ, 25,000 ರೂಪಾ ಸೇರಿಸಿ 75,000 ರೂಪಾಯಿ ಕೊಡಲು ಒಪ್ಪಿದ್ದೇನೆ. ನನ್ನ ವಿರುದ್ಧದ ಈ ಸುಳ್ಳು ಆರೋಪದ ಬಗ್ಗೆ ಶೀಘ್ರದಲ್ಲೇ ನಿಜಾಂಶ ಗೊತ್ತಾಗಲಿದೆ.
ನನ್ನ ವಿರುದ್ಧ ಒಟ್ಟು 22 ಪ್ರಕರಣ ದಾಖಲಾಗಿದ್ದವು. ಅದರಲ್ಲಿ, 9 ಪ್ರಕರಣಗಳು ಪ್ರಕರಣ ಬೋಗಸ್ ಎಂದು ಬಿ ರಿಪೋರ್ಟ್ ಆಗಿದೆ. 8 ಪ್ರಕರಣಗಳಲ್ಲಿ ನಾನು ನಿರಪರಾಧಿ ಅಂತಾ ಸಾಬೀತಾಗಿದೆ. 3 ಪ್ರಕರಣಗಳಲ್ಲಿ ವಿಚಾರಣೆ ನಡೆಯುತ್ತಿದೆ. ಅದರಂತೆಯೇ ಇಲ್ಲಿಯೂ ಕೂಡ ವಿಚಾರಣೆ ನಡೆಯುತ್ತಿದೆ. ನಿಜಾಂಶ ಶೀಘ್ರವೇ ಗೊತ್ತಾಗಲಿದೆ ಎಂದರು.
ನನ್ನ ವಿರುದ್ಧ ಕರುಣಾಕರ್ ಸುಳ್ಳು ಆರೋಪ ಮಾಡಿರುವ ಬಗ್ಗೆ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ದೂರು ಕೊಡಲಾಗಿದ್ದು, ದೋಷಾರೋಪಣೆ ಪಟ್ಟಿ ಸಲ್ಲಿಸುವ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications