ಬಂಡೀಪುರ ಕಾಡಂಚಿನ ರೈತರಿಗೆ ನೆಮ್ಮದಿಯ ಬದುಕೇ ಇಲ್ಲ!
ಚಾಮರಾಜನಗರ, ಅಕ್ಟೋಬರ್.23: ಚಾಮರಾಜನಗರ ಜಿಲ್ಲೆಯ ಕಾಡಂಚಿನ ಗ್ರಾಮಗಳ ರೈತರು ಇದೀಗ ಸಂಕಷ್ಟಕ್ಕೀಡಾಗಿದ್ದಾರೆ. ಅರಣ್ಯದಿಂದ ನಾಡಿನತ್ತ ಬರುತ್ತಿರುವ ಕಾಡಾನೆಗಳು ಸೇರಿದಂತೆ ಹಲವು ಪ್ರಾಣಿಗಳು ಕೃಷಿಯನ್ನು ನಾಶ ಮಾಡುತ್ತಿರುವುದಲ್ಲದೆ, ಸಾಕುಪ್ರಾಣಿಗಳನ್ನೂ ಬಲಿತೆಗೆದುಕೊಳ್ಳುತ್ತಿವೆ.
ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ರಸ್ತೆಗಳಲ್ಲಿ ಚಿರತೆ, ಕಾಡಾನೆ ಕಾಣಿಸಿಕೊಂಡರೆ ಇತ್ತ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಓಂಕಾರ್ ವಲಯದ ಅರಣ್ಯ ಪ್ರದೇಶದಲ್ಲಿ ರೈಲ್ವೇ ಕಂಬಿಗಳನ್ನು ಅಳವಡಿಸಿದ್ದರೂ ಅವುಗಳನ್ನು ದಾಟಿ ನಾಡಿಗೆ ಬಂದು ರೈತರ ಕೃಷಿ ಜಮೀನಿಗೆ ನುಗ್ಗುತ್ತಿವೆ.
ಬಂಡೀಪುರ: ಮನುಷ್ಯರ ತೆವಲಿಗೆ ವನ್ಯಪ್ರಾಣಿಗಳು ಬಲಿಯಾಗಬೇಕೇ?
ಇದರಿಂದಾಗಿ ಕಷ್ಟಪಟ್ಟು ಮಾಡಿದ ಕೃಷಿ ಕಾಡುಪ್ರಾಣಿಗಳ ಪಾಲಾಗಿ ರೈತ ನಷ್ಟದ ಹಾದಿಯಲ್ಲೇ ಸಾಗುವಂತಾಗಿದೆ. ಓಂಕಾರ ವಲಯದ ಬೋಳೇಗೌಡನಕಟ್ಟೆ ಪ್ರದೇಶದಿಂದ ಹೊರಬರುವ ಆನೆಗಳು ಶ್ರೀಕಂಠಪುರ, ಹೊಸಪುರ, ಕೋಟೆಕೆರೆ, ಯಡವನಹಳ್ಳಿ ಗ್ರಾಮಗಳ ಜಮೀನುಗಳಿಗೆ ನುಗ್ಗುತ್ತಿವೆ. ಕಾಲಿಗೆ ಸಿಕ್ಕ ಬೆಳೆಯನ್ನು ತುಳಿಯುತ್ತಾ ತಿನ್ನುತ್ತಾ ಸಾಗುತ್ತವೆ.
ಇದರಿಂದ ಸಾಲ ಮಾಡಿ ಬೆಳೆದ ಕೃಷಿ ಫಸಲುಗಳು ಆನೆಗಳ ಪಾಲಾಗುತ್ತಿವೆ. ಈ ವ್ಯಾಪ್ತಿಯಲ್ಲಿನ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಿ ಎಂದು ರೈತರು ಮನವಿ ಮಾಡುತ್ತಲೇ ಬರುತ್ತಿದ್ದಾರೆಯಾದರೂ ಪ್ರಯೋಜನವಾಗಿಲ್ಲ.
ಬಂಡೀಪುರದಲ್ಲಿ ಸಫಾರಿ ವಾಹನದ ಮೇಲೆ ಕಾಡಾನೆ ದಾಳಿ
ಇಷ್ಟಕ್ಕೂ ಈ ವ್ಯಾಪ್ತಿಯ ಗ್ರಾಮಗಳಿಗೆ ಕಾಡಾನೆಗಳು ರಾಜಾರೋಷವಾಗಿ ಬರಲು ಕಾರಣವೂ ಇದೆ. ಅದೇನೆಂದು ಓದಿ...
ದುಸ್ಥಿತಿಗೀಡಾದ ಸೋಲಾರ್ ಬೇಲಿ
ಕಾಡಂಚಿನಲ್ಲಿ ರೈಲ್ವೆ ಕಂಬಿ ಅಳವಡಿಸಿ ಅರಣ್ಯದಿಂದ ಹೊರಬರುವುದನ್ನು ತಡೆಗಟ್ಟುವ ವ್ಯವಸ್ಥೆಯಿಲ್ಲ. ರೈಲ್ವೆಕಂಬಿ ಅಳವಡಿಸಲು ಹೆಚ್ಚಿನ ಅನುದಾನ ಬೇಕಾಗಿದ್ದರಿಂದ ಆ ಕಾರ್ಯ ನಿಂತು ಹೋಗಿದೆ. ಇಲ್ಲಿರುವ ಸೋಲಾರ್ ಬೇಲಿ ದುಸ್ಥಿತಿಗೀಡಾಗಿದೆ.
ಅದನ್ನು ದುರಸ್ತಿ ಮಾಡುವ ಕಾರ್ಯ ನಡೆಯದ ಕಾರಣದಿಂದಾಗಿ ಕಾಡಾನೆಗಳು ಕಾಡಿನಿಂದ ನಾಡಿಗೆ ಯಾವುದೇ ಅಡೆ ತಡೆಯಿಲ್ಲದೆ ಬರುತ್ತಿವೆ. ನಾಡಿಗೆ ಬಂದ ಕಾಡಾನೆಗಳ ಹಿಂಡನ್ನು ಮತ್ತೆ ಅರಣ್ಯಕ್ಕೆ ಅಟ್ಟುವ ವೇಳೆಗೆ ಅವು ಎಲ್ಲೆಂದರಲ್ಲಿ ಓಡುವುದರಿಂದ ರೈತರು ಬೆಳೆದ ಬೆಳೆಗಳು ನಾಶವಾಗುತ್ತಿವೆ.
ಇತ್ತೀಚೆಗೆ ಎಂಟು ಗಂಡಾನೆಗಳು ತೊಂಡವಾಡಿ ಗ್ರಾಮದ ಸಿದ್ದನಾಯ್ಕ ಎಂಬುವವರ ಜಮೀನಿಗೆ ದಾಳಿಮಾಡಿ ಅಲ್ಲಿ ಬೆಳೆದಿದ್ದ ಟೊಮೆಟೊ, ಮೆಣಸು ಹಾಗೂ ತೆಂಗಿನ ಸಸಿಗಳನ್ನು ನಾಶಪಡಿಸಿದ್ದಲ್ಲದೆ ಜಮೀನಿನಲ್ಲಿ ಅಳವಡಿಸಿದ್ದ ನೀರಾವರಿಯ ಡ್ರಿಪ್ ಪೈಪ್ಗಳನ್ನು ಸಹ ಕಿತ್ತುಹಾಕಿದ್ದವು.
ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.
ಚಿರತೆಯ ಕಾಟಕ್ಕೆ ಜನ ಹೈರಾಣ
ಕಾಡಾನೆಗಳ ಹಾವಳಿ ಒಂದೆಡೆಯಾದರೆ ಮತ್ತೊಂದೆಡೆ ಚಿರತೆಗಳು ಸದ್ದಿಲ್ಲದೆ ಸಾಕುಪ್ರಾಣಿಗಳ ಮೇಲೆ ದಾಳಿ ಕೊಲ್ಲುತ್ತಿವೆ. ಅದರಲ್ಲೂ ಹಸುಗಳ ಮೇಲೆ ದಾಳಿ ಮಾಡಿ ಸಾಯಿಸುತ್ತಿರುವುದರಿಂದ ರೈತರಿಗೆ ನಷ್ಟದ ಮೇಲೆ ನಷ್ಟವಾಗುತ್ತಿದೆ.
ರಾತ್ರಿಯಾಯಿತೆಂದರೆ ಕೊಟ್ಟಿಗೆಯಲ್ಲಿ ಕಟ್ಟಿದ ಹಸು ಮತ್ತು ಕುರಿ, ಮೇಕೆಗಳ ಮೇಲೆ ದಾಳಿ ಮಾಡುವ ಚಿರತೆ ಕೊಂದು ರಕ್ತ ಕುಡಿದು ಹೋಗುತ್ತಿವೆ. ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಕಲ್ಲಹಳ್ಳಿ ಗ್ರಾಮದ ಗುರುಸಿದ್ದಪ್ಪ ಎಂಬುವರ ಜಮೀನಿನಲ್ಲಿ ಮೇಯುತ್ತಿದ್ದ ಹಸುಗಳ ಮೇಲೆ ದಾಳಿ ನಡೆಸಿದ ಚಿರತೆ ಹಸುವನ್ನು ಕೊಂದು ಪರಾರಿಯಾಗಿದೆ.
ಗ್ರಾಮಗಳ ಜಮೀನಿನ ಬದಿಯ ಕುರುಚಲು ಕಾಡುಗಳಲ್ಲಿ ವಾಸ್ತವ್ಯ ಹೂಡುವ ಚಿರತೆ ಹೊಂಚು ಹಾಕಿ ಸಾಕುಪ್ರಾಣಿಗಳ ಮೇಲೆ ದಾಳಿ ಮಾಡುತ್ತಿದೆ. ಅರಣ್ಯ ಇಲಾಖೆ ಕಣ್ಣಿಗೂ ಕಾಣಿಸದೆ, ಬೋನಿಗೂ ಬೀಳದೆ ತಪ್ಪಿಸಿಕೊಳ್ಳುತ್ತಿರುವ ಚಿರತೆಯ ಕಾಟಕ್ಕೆ ಜನ ಹೈರಾಣರಾಗಿದ್ದಾರೆ.
ನೊಗಕ್ಕೆ ಹೆಗಲು ಕೊಟ್ಟ ಈ ಯುವಕರ ಬದುಕಿನ ಪಾಠ ನಮಗೂ ಒಂದಿಷ್ಟಿರಲಿ
ಭಯ ಹುಟ್ಟಿಸಿದ ಹುಲಿ ಹೆಜ್ಜೆ
ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದ ತಮಿಳುನಾಡಿನ ಗಡಿ ಭಾಗಕ್ಕೆ ಹೊಂದಿಕೊಂಡಂತಿರುವ ಕಾಡಂಚಿನ ಗ್ರಾಮವಾದ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ರೈತ ಮಹದೇವಪ್ಪ ಎಂಬುವರ ಜಮೀನಿನಲ್ಲಿ ರಾತ್ರಿ ಹುಲಿ ಹೆಜ್ಜೆಗಳು ಕಂಡು ಬಂದಿರುವುದರಿಂದ ಗ್ರಾಮ ವ್ಯಾಪ್ತಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಹುಲಿ ಹೆಜ್ಜೆಗಳನ್ನು ನೋಡಿದ ಬಳಿಕ ಜಮೀನಿಗೆ ತೆರಳಲು, ಗ್ರಾಮದಲ್ಲಿ ಓಡಾಡಲು ಜನ ಹೆದರುತ್ತಿದ್ದಾರೆ. ಆದರೆ ಹುಲಿ ಮಾತ್ರ ಯಾರ ಕಣ್ಣಿಗೂ ಬಿದ್ದಿಲ್ಲ. ಜಾನುವಾರು ಅಥವಾ ಜನರ ಮೇಲೆ ದಾಳಿ ಮಾಡಿಬಿಟ್ಟರೆ ಏನಪ್ಪಾ ಗತಿ ಎಂದು ಜನರು ಭಯದಲ್ಲೇ ದಿನ ಕಳೆಯುತ್ತಿದ್ದಾರೆ. ಅರಣ್ಯ ಇಲಾಖೆ ಹುಲಿಯನ್ನು ಸೆರೆ ಹಿಡಿದು ಆತಂಕ ದೂರ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕಾಡುಹಂದಿಗಳ ಅಟ್ಟಹಾಸ
ಇದೆಲ್ಲದರ ನಡುವೆ ಕಾಡುಹಂದಿಗಳ ಹಾವಳಿಯೂ ರೈತರಿಗೆ ಸಂಕಟ ತಂದಿದೆ. ಹಿಂಡು ಹಿಂಡಾಗಿ ಬರುವ ಕಾಡು ಹಂದಿಗಳು ರೈತರ ಬೆಳೆಯನ್ನು ಸರ್ವ ನಾಶ ಮಾಡುವುದಲ್ಲದೆ, ರೈತರ ಮೇಲೆಯೇ ದಾಳಿ ಮಾಡುತ್ತಿವೆ. ಈಗಾಗಲೇ ಕಾಡುಹಂದಿಗೆ ಕೆಲವು ರೈತರು ಪ್ರಾಣ ಬಿಟ್ಟರೆ ಮತ್ತೆ ಕೆಲವರು ಗಾಯಗೊಂಡಿದ್ದಾರೆ.
ಒಟ್ಟಾರೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅರಣ್ಯದಂಚಿನಲ್ಲಿರುವ ರೈತರಿಗೆ ಒಂದಲ್ಲ ಒಂದು ರೀತಿಯ ಸಮಸ್ಯೆ ತಲೆದೋರುತ್ತಲೇ ಇದ್ದು ನೆಮ್ಮದಿಯ ಬದುಕೇ ಇಲ್ಲದಂತಾಗಿದೆ.