ಚಾಮರಾಜನಗರ:ಎಕರೆಗಟ್ಟಲೆ ಈರುಳ್ಳಿ ಬೆಳೆ ನಾಶಪಡಿಸಿದ ರೈತರು
ಈರುಳ್ಳಿ ಕೇವಲ ಅಡುಗೆ ಮಾಡುವವರ ಕಣ್ಣಲ್ಲಿ ನೀರು ತರಿಸುತ್ತಿಲ್ಲ, ಅದನ್ನು ಬೆಳೆದ ರೈತರ ಕಣ್ಣಲ್ಲೂ ನೀರು ಹರಿಸುತ್ತಿದೆ. ನಂಬಿ ಬೆಳೆದಿದ್ದ ಬೆಳೆ ಬಾರದೇ ಲಕ್ಷಾಂತರ ರೂಪಾಯಿ ನಷ್ಟವಾಗಿ ಈರುಳ್ಳಿ ಬೆಳೆಗಾರ ಸಂಕಷ್ಟಕ್ಕೆ ಸಿಲುಕಿರುವ ಸ್ಥಿತಿ ಚಾಮರಾಜನಗರ ತಾಲೂಕಿನಲ್ಲಿದೆ.
ಚಾಮರಾಜನಗರ, ಫೆಬ್ರವರಿ 2: ಈರುಳ್ಳಿ ಕೇವಲ ಅಡುಗೆ ಮಾಡುವವರ ಕಣ್ಣಲ್ಲಿ ನೀರು ತರಿಸುತ್ತಿಲ್ಲ, ಅದನ್ನು ಬೆಳೆದ ರೈತರ ಕಣ್ಣಲ್ಲೂ ನೀರು ಹರಿಸುತ್ತಿದೆ. ನಂಬಿ ಬೆಳೆದಿದ್ದ ಬೆಳೆ ಬಾರದೇ ಲಕ್ಷಾಂತರ ರೂಪಾಯಿ ನಷ್ಟವಾಗಿ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಚಾಮರಾಜನಗರ ತಾಲೂಕಿನ ಕೆ.ಕೆ.ಹುಂಡಿ ಗ್ರಾಮದಲ್ಲಿ 5-6 ಮಂದಿ ರೈತರು ಕಷ್ಟಪಟ್ಟು ಬೆಳೆದ ಸಣ್ಣ ಈರುಳ್ಳಿ ಬೆಳೆಯನ್ನು ಬೇರೆ ದಾರಿ ಕಾಣದೇ ನಾಶಪಡಿಸಿದ್ದು, ಬೆಳೆಗಾಗಿ ಮಾಡಿದ ಸಾಲ ತೀರಿಸುವುದು ಹೇಗೆ ಎನ್ನುವ ಪರಿಸ್ಥಿತಿ ಅನ್ನದಾತರಿಗೆ ಎದುರಾಗಿದೆ.
ತಮಿಳುನಾಡಿನಿಂದ ಚಾಮರಾಜನಗರ ಜಿಲ್ಲೆಗೆ ಆಗಮಿಸಿದ 40ಕ್ಕೂ ಹೆಚ್ಚು ಕಾಡಾನೆಗಳು, ಬೆಳೆಗಳು ನಾಶ
ಅಲ್ಪಾವಧಿ ಬೆಳೆಯಾಗಿರುವ ಸಣ್ಣ ಈರುಳ್ಳಿ ಸಾಮಾನ್ಯವಾಗಿ 55-75 ದಿನಗಳಲ್ಲಿ ಬೆಳೆ ಕಟಾವಿಗೆ ಬರಲಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಾಗಿ ಸಣ್ಣ ಈರುಳ್ಳಿ ಬೆಳೆಯಲಿದ್ದು ತಮಿಳುನಾಡು ಇಲ್ಲಿನ ರೈತರಿಗೆ ಮಾರುಕಟ್ಟೆಯಾಗಿದೆ. ಗುಂಡ್ಲುಪೇಟೆ ತಾಲೂಕಿನ ಎಪಿಎಂಸಿಯಲ್ಲಿ ಬಿತ್ತನೆ ಈರುಳ್ಳಿ ತಂದು ನಾಟಿ ಮಾಡಿ ಅದನ್ನು ತಿಂಗಳುಗಟ್ಟಲೆ ಪೋಷಿಸಿದರೂ ಅಕಾಲಿಕ ಮಳೆಯಿಂದಾಗಿ ಕಾಯಿ ಕಟ್ಟದೇ ರೈತರು ಲಕ್ಷಾಂತರ ರೂಪಾಯಿ ಕೈ ಸುಟ್ಟುಕೊಂಡಿದ್ದಾರೆ.
ಕೆ.ಕೆ.ಹುಂಡಿಯ ಒಬ್ಬೊಬ್ಬ ರೈತ 2- 5 ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಎರಡು ತಿಂಗಳಿನಿಂದ ಹಿಂದೆ ಸುರಿದ ಮಳೆ ರೈತನ ಬಾಳಲ್ಲಿ ಕತ್ತಲು ಆವರಿಸುವಂತೆ ಮಾಡಿದೆ. ಬೆಳೆ ಇಟ್ಟಿಕೊಂಡರೇ ಫಸಲು ಬರಲ್ಲ, ಬೆಳೆ ನಾಶಪಡಿಸಿದರೇ ಹಣ ಬರದ ತ್ರಿಶಂಕು ಸ್ಥಿತಿ ಇಲ್ಲಿನ ರೈತರದ್ದಾಗಿದ್ದು ಸಾಲ ತೀರಿಸಲಾಗದೇ ಕೆಲ ರೈತರು ಊರು ಬಿಟ್ಟು ಪಟ್ಟಣ ಸೇರಿ ಬೇರೆ ನೌಕರಿ ಹುಡುಕುತ್ತಿದ್ದಾರೆ.
ಕಷ್ಟಪಟ್ಟು ದುಡಿದು, ಪ್ರಾಣಿಗಳಿಂದ ರಕ್ಷಿಸಿದ್ದ ಬೆಳೆ ಕೈ ಸೇರದಿದ್ದರಿಂದ ಬೇರೆ ದಾರಿ ಕಾಣದ ರೈತರು ಟ್ರಾಕ್ಟರ್ನಲ್ಲಿ ಉಳುಮೆ ಮಾಡಿಸಿ ಬೆಳೆ ನಾಶ ಪಡಿಸಿದ್ದಾರೆ. 3 ಎಕರೆಯಲ್ಲಿ ಈರುಳ್ಳಿ ಹಾಕಿದ್ದ ನಾಗರಾಜು ಎಂಬ ರೈತ ಸತತ 5 ಬೆಳೆಗಳನ್ನು ಕಳೆದುಕೊಂಡಿದ್ದು, ಬೇಸಾಯ ಮಾಡುವುದೇ ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಸಾಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದೇ, ಬೆಳೆಯೇ ಬರಲಿಲ್ಲ, ಸಾಲ ಕೊಟ್ಟವರು ಮನೆ ಬಾಗಿಲಿಗೆ ಬರುತ್ತಿದ್ದಾರೆ, ಸರ್ಕಾರ ನಮ್ಮ ನೆರವಿಗೆ ಬರಬೇಕೆಂದು ಅಳಲು ತೋಡಿಕೊಂಡಿದ್ದಾರೆ.
ಪ್ರಸ್ತುತ ಸಣ್ಣ ಈರುಳ್ಳಿ ಪ್ರತಿ ಕೆಜಿಗೆ 35-40 ರೂಪಾಯಿ ಇದೆ. ಆದರೆ, ಈ ರೈತರು ಹಾಕಿದ ಬೆಳೆಯೇ ಕೈಗೆ ಬರದಿದ್ದರಿಂದ ಬೆಲೆ ಇದ್ದರೂ ಏನು ಮಾಡಲಾಗದ ಅಸಹಾಯಕ ಸ್ಥಿತಿ ರೈತರದ್ದಾಗಿದೆ. ಈ ಸಂಬಂಧ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ನೊಂದ ರೈತರ ನೆರವಿಗೆ ಧಾವಿಸಬೇಕು ಎನ್ನುವುದು ಸ್ಥಳೀಯ ರೈತರ ಆಗ್ರಹ ವಾಗಿದೆ.