ಶ್ರೀನಿವಾಸ್ಪ್ರಸಾದ್ ರನ್ನು ಕಣಕ್ಕಿಳಿಸಲು ಅಭಿಮಾನಿಗಳ ಕಸರತ್ತು!
Recommended Video
ಚಾಮರಾಜನಗರ, ಮಾರ್ಚ್ 14: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜಕೀಯ ಬೆಳವಣಿಗೆಗಳು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುವುದು ಹೊಸದೇನಲ್ಲ. ಕೆಲವು ಮುಖಂಡರು ಟಿಕೆಟ್ ಗಾಗಿ ತಮ್ಮ ಬೆಂಬಲಿಗರ ಮೂಲಕ ಅಥವಾ ತಮಗೆ ಆತ್ಮೀಯರಾದ ಹಿರಿಯ ನಾಯಕರ ಮೂಲಕ ಒತ್ತಡ ತರುವುದು ಒಂದೆಡೆಯಾಗಿದೆ.
ಇನ್ನೊಂದೆಡೆ ಚುನಾವಣೆಯ ಸಹವಾಸವೇ ಬೇಡವೆಂದು ದೂರ ಸರಿದಿರುವ ಮಾಜಿ ಕೇಂದ್ರ ಸಚಿವ ಹಾಗು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಕಣಕ್ಕಿಳಿಯುವಂತೆ ಅಭಿಮಾನಿಗಳು ಒತ್ತಡ ಹೇರುತ್ತಿರುವುದು ಕಂಡು ಬಂದಿದೆ.
ಬಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆ ದಿನಾಂಕ ಘೋಷಣೆ, ಇವೆ ಕೆಲವು ಬದಲಾವಣೆ
ಹಾಗೆನೋಡಿದರೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡ ಬಳಿಕ ಚುನಾವಣಾ ಸ್ಪರ್ಧೆಯಿಂದ ದೂರವೇ ಇರುವ ಅವರು ಅಭಿಮಾನಿಗಳ ಮನವಿಯನ್ನು ಪುರಸ್ಕರಿಸುತ್ತಾರಾ? ಎಂಬ ಕುತೂಹಲ ಎಲ್ಲರನ್ನು ಕಾಡತೊಡಗಿದೆ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದ ಶ್ರೀನಿವಾಸಪ್ರಸಾದ್ ಅವರನ್ನು ಕೈಬಿಡಲಾಗಿತ್ತು.
ಇದರಿಂದ ಅವಮಾನಕ್ಕೊಳಗಾದ ಅವರು ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದರಲ್ಲದೆ, ಸಕ್ರಿಯ ರಾಜಕಾರಣದಲ್ಲಿದ್ದರೂ ಚುನಾವಣಾ ಕಣಕ್ಕಿಳಿಯದೆ ದೂರವಿದ್ದರು. ಬಹುಶಃ ಮನಸ್ಸು ಮಾಡಿದ್ದರೆ ಹಿಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬಹುದಿತ್ತು.
ಆದರೆ ಅವರು ಆ ಬಗ್ಗೆ ತಲೆಕೆಡಿಸಿಕೊಳ್ಳದೆ ದೂರವೇ ಇದ್ದುಬಿಟ್ಟಿದ್ದರು. ಆದರೆ ಈಗ ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಿಂದ ಸ್ಫಧೆ ಮಾಡಬೇಕೆಂದು ನೂರಾರು ಸಂಖ್ಯೆಯ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಒತ್ತಾಯಿಸುತ್ತಿರುವುದು ಹೊಸಬೆಳವಣಿಗೆಯಾಗಿದೆ.
ಲೋಕ ಸಮರ 2019: ಬಿಜೆಪಿ ಅಭ್ಯರ್ಥಿಗಳ ಅಂತಿಮ ಸಂಭಾವ್ಯ ಪಟ್ಟಿ
ಒಂದಷ್ಟು ಅಭಿಮಾನಿಗಳು ಚಾಮರಾಜನಗರದಿಂದ ಮೈಸೂರಿಗೆ ತೆರಳಿ ಅಲ್ಲಿನ ನಿವಾಸದಲ್ಲಿ ಶ್ರೀನಿವಾಸ್ಪ್ರಸಾದ್ ಅವರನ್ನು ಭೇಟಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಲು ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಇದಕ್ಕಾಗಿ ಮಾರ್ಚ್ 14 ರಂದು ಬೆಳಗ್ಗೆ 11 ಗಂಟೆಯ ಸಮಯವನ್ನು ನಿಗದಿ ಮಾಡಿರುವುದಾಗಿ ತಿಳಿದು ಬಂದಿದೆ.
ಸರ್ವ ಜನಾಂಗದ ಧೀಮಂತ ನಾಯಕ
ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಪ್ರಸಾದ್ ಅವರು ಸೂಕ್ತ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್ಗೆ ಪ್ರಬಲ ಪೈಪೋಟಿ ನೀಡಲು ಅವರಿಂದ ಮಾತ್ರ ಸಾಧ್ಯ. ಅವರು ಕಳೆದ ಹಲವು ದಶಕಗಳಿಂದ ಸಂಸದರಾಗಿ ಹಾಗೂ ರಾಜ್ಯ ಸಚಿವರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ದಲಿತ ನಾಯಕರಾಗಿದ್ದಾರೆ. ಅವರಿಗೆ ರಾಜ್ಯದ ಉದ್ದಗಲಕ್ಕೆ ಅಭಿಮಾನಿಗಳ ಮಹಾಪೂರವಿದೆ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಪರ ಹೋರಾಟ ಹಾಗೂ ದನಿಯಾಗಿ ಕೆಲಸ ಮಾಡುವ ಮೂಲಕ ಸರ್ವ ಜನಾಂಗದ ಧೀಮಂತ ನಾಯಕರೆನಿಸಿಕೊಂಡಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವಂತೆ ಮನವಿ
ಶ್ರೀನಿವಾಸ್ಪ್ರಸಾದ್ ಸ್ಪರ್ಧಿಸಿದರೆ ಗೆಲುವು ನಿಶ್ಚಿತ ಎಂದಿರುವ ಅವರ ಅಭಿಮಾನಿಗಳು ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಹಾಗೂ ಬಿಜೆಪಿ ಮುಖಂಡ ಎಂ.ಎಸ್ ಮಹದೇವಸ್ವಾಮಿ ನೇತೃತ್ವದಲ್ಲಿ ನಿವಾಸಕ್ಕೆ ತೆರಳಿ ಚುನಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ : ಬಿಜೆಪಿ ಟಿಕೆಟ್ಗೆ 12 ಕ್ಷೇತ್ರದಲ್ಲಿ ಪೈಪೋಟಿ!
ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿ
ಈಗಾಗಲೇ ಬಿಜೆಪಿಯಿಂದ ಹಲವು ಮುಖಂಡರು ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಆದರೆ ಕಾಂಗ್ರೆಸ್ನ ಅಭ್ಯರ್ಥಿಯಾಗಿರುವ ಹಾಲಿ ಸಂಸದ ಆರ್.ಧ್ರುವನಾರಾಯಣ್ ಮುಂದೆ ನಿಂತು ಗೆಲುವು ಸಾಧಿಸುವ ತಾಕತ್ ಬೇಕಾಗಿದೆ. ಹೀಗಾಗಿ ಬಿಜೆಪಿಯಿಂದ ಪ್ರಬಲ ಪೈಪೋಟಿ ನೀಡ ಬಲ್ಲ ಅಭ್ಯರ್ಥಿಗಾಗಿ ಹುಡುಕಾಟ ನಡೆಯುತ್ತಿರುವುದರಿಂದ ಒಂದಷ್ಟು ಅಭಿಮಾನಿಗಳು ಶ್ರೀನಿವಾಸ ಪ್ರಸಾದ್ ಅವರ ಹೆಸರನ್ನು ಹೇಳುತ್ತಿದ್ದಾರೆ.
ವಿ.ಶ್ರೀನಿವಾಸ ಪ್ರಸಾದ್ ಕಣಕ್ಕಿಳಿಯುತ್ತಾರಾ?
ಇಷ್ಟಕ್ಕೂ ವಿ.ಶ್ರೀನಿವಾಸ ಪ್ರಸಾದ್ ಅವರು ಕಣಕ್ಕಿಳಿಯುತ್ತಾರಾ? ಅವರಿಗೆ ಸ್ಪರ್ಧೆ ಮಾಡುವ ಆಸಕ್ತಿ ಇದೆಯಾ? ಎಂಬುದೇ ಬಹುಮುಖ್ಯವಾದ ವಿಚಾರವಾಗಿದೆ. ಹೀಗಾಗಿ ಭೇಟಿ ಮಾಡಲು ತೆರಳುತ್ತಿರುವ ನಿಯೋಗಕ್ಕೆ ಅವರು ಯಾವ ರೀತಿಯ ಉತ್ತರ ನೀಡುತ್ತಾರೆ ಎಂಬುದರ ಮೇಲೆ ಅವರ ತೀರ್ಮಾನ ಏನು ಎಂಬುದು ಗೊತ್ತಾಗಲಿದೆ.