ಗುಂಡ್ಲುಪೇಟೆ: ಚೆಕ್ಪೋಸ್ಟ್ ಬಳಿ ನೆರಳಿನ ವ್ಯವಸ್ಥೆ ಇಲ್ಲಿದೆ ಬಿಸಿಲಿಗೆ ಬೆಂಡಾದ ಚುನಾವಣಾ ಸಿಬ್ಬಂದಿ
ಚಾಮರಾಜನಗರ, ಮಾರ್ಚ್, 21: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ ಮದ್ದೂರು ಮತ್ತು ಕೆಕ್ಕನಹಳ್ಳ ಚೆಕ್ ಪೋಸ್ಟ್ನಲ್ಲಿ ಕಟ್ಟುನಿಟ್ಟಿನ ತಪಾಸಣೆ ಆರಂಭಿಸಿದ್ದು, ಕೇರಳ-ತಮಿಳುನಾಡಿನಿಂದ ಗುಂಡ್ಲುಪೇಟೆ ಪ್ರವೇಶಿಸುವ ಪ್ರತಿಯೊಂದು ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಗುಂಡ್ಲುಪೇಟೆ ತಾಲೂಕು ಕೇರಳ ಹಾಗೂ ತಮಿಳುನಾಡು ಎರಡು ರಾಜ್ಯಗಳ ಗಡಿ ಹಂಚಿಕೊಂಡಿರುವ ಹಿನ್ನೆಲೆ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿವೆ. ಪ್ರಸ್ತುತ ಲೋಕಸಭಾ ಚುನಾವಣೆ ನೀತಿ ಸಂಹಿತೆ ಘೋಷಣೆಯಾಗಿರುವ ಹಿನ್ನೆಲೆ ಮದ್ದೂರು ಮತ್ತು ಕೆಕ್ಕನಹಳ್ಳ ತನಿಖಾ ಠಾಣೆಗಳಲ್ಲಿ ತಪಾಸಣೆ ಕಾರ್ಯ ಚುರುಕುಗೊಂಡಿದೆ. ಈ ಮಧ್ಯೆ ತಮಿಳುನಾಡು ಮತ್ತು ಕೇರಳದಿಂದ ಗುಂಡ್ಲುಪೇಟೆ ಪ್ರವೇಶಿಸುವ ವಾಹನಗಳನ್ನು ತಪಾಸಣೆಗೆ ಒಳಪಡಿಸಿ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

ಚುನಾವಣೆ ಕರ್ತವ್ಯಕ್ಕೆ ಐದು ಮಂದಿ ಪ್ಲೇಯಿಂಗ್ ಸ್ಕ್ವಾಡ್, ವಿಡಿಯೋ ಚಿತ್ರೀಕರಣಕ್ಕೆ ಅಲರ್ಟ್ ಮಾಡಲಾಗಿದ್ದು, ವಾಹನಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಲಾಗುತ್ತಿದೆ. ಚೆಕ್ ಪೋಸ್ಟ್ಗಳಲ್ಲಿ ಪ್ರವೇಶಿಸುವ ವಾಹನದ ನೋಂದಣಿ ಮಾಹಿತಿಯನ್ನು ರಿಜಿಸ್ಟರ್ನಲ್ಲಿ ನಮೂದಿಸಲಾಗುತ್ತಿದೆ.
ಲೋಕಸಭಾ ಚುನಾವಣೆ ಹಿನ್ನೆಲೆ ತಪಾಸಣೆಗಾಗಿ ಮದ್ದೂರು ಪೊಲೀಸ್ ಚೆಕ್ ಪೋಸ್ಟ್ ಬಳಿ ನಿಯೋಜಿಸಿರುವ ಸಿಬ್ಬಂದಿಗೆ ತಾಲೂಕು ಆಡಳಿತ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದ್ದು, ತನಿಖಾ ಠಾಣಾ ಮುಂಭಾಗ ಪೆಂಡಲ್ ವ್ಯವಸ್ಥೆಯಿಲ್ಲದೆ ಮರದ ನೆರಳಿನ ಆಶ್ರಯದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಆದ್ದರಿಂದ ಇಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕೆಂದು ಹೆಸರೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ಒತ್ತಾಯಿಸಿದ್ದಾರೆ.












Click it and Unblock the Notifications