ಕೊರೊನಾ ನಿಯಂತ್ರಣಕ್ಕೆ ಮೂರು ನಿರ್ಣಯ ತೆಗೆದುಕೊಂಡ ಚಾಮರಾಜನಗರ ಜಿಲ್ಲಾಡಳಿತ
ಚಾಮರಾಜನಗರ, ಜುಲೈ 2: ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ರಾಜ್ಯ ಸರ್ಕಾರ ಹೆಚ್ಚಿನ ನಿರ್ಬಂಧವನ್ನೇನೂ ಹೇರಿಲ್ಲ. ಆದರೆ ಚಾಮರಾಜನಗರ ಜಿಲ್ಲಾಡಳಿತ ಇಂದು ಸೋಂಕಿನ ನಿಯಂತ್ರಣಕ್ಕೆ ಪ್ರಮುಖ ಮೂರು ನಿರ್ಣಯಗಳನ್ನು ಕೈಗೊಂಡಿದೆ. ಅಂತರರಾಜ್ಯ ಪ್ರಯಾಣಿಕರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಸೇರಿದಂತೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ.
Recommended Video
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ತಮಿಳುನಾಡಿನಿಂದ ಚಾಮರಾಜನಗರಕ್ಕೆ ಬರುವ ನಾಲ್ ರೋಡ್ ಮತ್ತು ಪಾಲರ್ ರೋಡ್ ಅನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ಸೇವಾ ಸಿಂಧು ಆಪ್ ಮೂಲಕ ನೋಂದಣಿ ಮಾಡಿಸಿಕೊಂಡು ಬಂದರೆ ಕಡ್ಡಾಯ ಸಾಂಸ್ಥಿಕ ಕ್ವಾರೈಂಟನ್ ಗೆ ಒಳಗಾಗಬೇಕು.

ಗೂಡ್ಸ್ ಚಾಲಕರಲ್ಲಿ ಕೊರೊನಾ ವೈರಸ್ ಪ್ರಕರಣ
ಜಿಲ್ಲೆಯಲ್ಲಿ ಗೂಡ್ಸ್ ಚಾಲಕರಲ್ಲಿ ಕೊರೊನಾ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆ ಕೇರಳ ಮತ್ತು ತಮಿಳುನಾಡಿಗೆ ಚಾಲಕರು ಹೋಗಿ ಬಂದರೆ ಮೂರು ದಿನಗಳ ಸಾಂಸ್ಥಿಕ ಕ್ವಾರೈಂಟನ್ ಗೆ ಒಳಗಾಗಬೇಕು ಎಂದು ತಿಳಿಸಿದ್ದಾರೆ.

ಪ್ರವಾಸಿಗರಿಗೂ ನಿರ್ಬಂಧ
ಉಳಿದಂತೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಆಗಮಿಸುವುದಕ್ಕೆ ನಿರ್ಬಂಧ ವಿಧಿಸಿದ್ದು, ರಾಜ್ಯದಲ್ಲಿ ಈಗಾಗಲೇ ಘೋಷಣೆ ಮಾಡಿರುವ ಭಾನುವಾರದ ಲಾಕ್ಡೌನನ್ನು ಜಿಲ್ಲೆಯಲ್ಲಿ ಜಾರಿ ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ. ಕಿಲ್ಲರ್ ಕೊರೊನಾ ಸಮುದಾಯ ಸಂಪರ್ಕದ ಹಂತ ತಲುಪಿದ್ದು, ಜನರ ಆತಂಕ ದುಪ್ಪಟ್ಟಾಗಿದೆ. ಹೀಗಾಗಿ ಹಲವೆಡೆ ಸ್ವಯಂಪ್ರೇರಿತವಾಗಿ ವ್ಯಾಪಾರ, ರಸ್ತೆ, ನಗರಗಳನ್ನು ಲಾಕ್ ಡೌನ್ ಮಾಡಿಕೊಳ್ಳಲಾಗುತ್ತಿದೆ. ಆ ಮೂಲಕ ವೈರಸ್ ಹರಡದಂತೆ ಎಚ್ಚರಿಕೆ ವಹಿಸಲು ಜನರು ಮುಂದಾಗಿದ್ದಾರೆ.

ಗ್ರಾಮದತ್ತ ಯಾರೂ ಬರಬೇಡಿ ಎಂದ ಗ್ರಾಮಸ್ಥರು
ಕೊರೊನಾದಿಂದ ರಕ್ಷಣೆ ಪಡೆದುಕೊಳ್ಳಲು ನಮ್ಮ ಗ್ರಾಮದತ್ತ ಯಾರೂ ಬರಬಾರದೆಂದು ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಜೆಸಿಬಿ ಮೂಲಕ ರಸ್ತೆಯನ್ನು ಅಗೆದು, ಅಡ್ಡಲಾಗಿ ಮುಳ್ಳಿನ ಗಿಡಗಳನ್ನು ಇಟ್ಟು ಲಾಕ್ ಡೌನ್ ಮಾಡಿಕೊಂಡಿರುವ ಘಟನೆ ಇಂದು ಚಾಮರಾಜನಗರ-ತಮಿಳುನಾಡು ಗಡಿಯ ಎಲ್ಲೆಕಟ್ಟೆ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.

ಸ್ವಯಂ ಪ್ರೇರಿತ ಬಂದ್ ಮಾಡಿಕೊಂಡ ಗ್ರಾಮಸ್ಥರು
ಅಧಿಕಾರಿಗಳನ್ನು ನಂಬಿಕೊಂಡು ಕುಳಿತರೆ ನಮ್ಮ ಗ್ರಾಮಕ್ಕೆ ಕೊರೊನಾ ಕಾಲಿಡುವುದು ಗ್ಯಾರಂಟಿ ಎಂದು ಅರಿತ ಬಹಳಷ್ಟು ಗ್ರಾಮಗಳ ಜನತೆ ಸ್ವಯಂ ಪ್ರೇರಿತವಾಗಿ ಗ್ರಾಮಗಳ ಪ್ರವೇಶ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಿಸಿದ್ದಾರೆ. ಜನತೆಯೇ ಸರ್ಕಾರದ ಕಾರ್ಯದಲ್ಲಿ ಪಾಲ್ಗೊಂಡಿರುವುದರಿಂದ ಕೊರೊನಾ ಹತೋಟಿಗೆ ಬರಲು ಸಹಕಾರಿ ಆಗಲಿದೆ ಎಂದು ಆರೋಗ್ಯ ಸಹಾಯಕರೊಬ್ಬರು ತಿಳಿಸಿದರು.












Click it and Unblock the Notifications