ಚಾಮರಾಜನಗರದಲ್ಲಿ ನಿರ್ಮಾಣವಾಗುತ್ತಾ ಜಿಯಲಾಜಿಕಲ್ ಮ್ಯೂಸಿಯಂ?
ಚಾಮರಾಜನಗರ, ಆಗಸ್ಟ್ 26: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಜಿಯಲಾಜಿಕಲ್ ಮ್ಯೂಸಿಯಂ ನಿರ್ಮಾಣವಾಗುವ ಸಾಧ್ಯತೆಯಿದ್ದು, ಇದು ಜಿಲ್ಲೆಗೊಂದು ಹಿರಿಮೆಯಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಶ್ರಮಿಸುತ್ತಿದ್ದಾರೆ.
Recommended Video
ಚಾಮರಾಜನಗರ ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಆದರ್ಶ ಶಾಲಾ ಆವರಣದ ಪಕ್ಕದ ಸರ್ಕಾರಿ ಜಮೀನಿನಲ್ಲಿ ವಿವಿಧ ಮಾದರಿಯ ಖನಿಜ, ಉಪ ಖನಿಜಗಳಿರುವುದರಿಂದ ಶಾಲಾ ಆವರಣದಲ್ಲಿಯೇ ಪ್ರಾಕೃತಿಕ ಭೂಗರ್ಭ ಸಂಗ್ರಹಾಲಯ (ಜಿಯಲಾಜಿಕಲ್ ಮ್ಯೂಸಿಯಂ) ಸ್ಥಾಪನೆ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಇಷ್ಟಕ್ಕೂ ಇಲ್ಲಿಯೇ ಏಕೆ ಮ್ಯೂಸಿಯಂ ಸ್ಥಾಪನೆ ಮಾಡಬೇಕು ಎಂಬುದನ್ನು ನೋಡುವುದಾದರೆ, ಇದಕ್ಕೆ ಹಲವು ಕಾರಣಗಳಿವೆ.
ಭೂಗರ್ಭಶಾಸ್ತ್ರದ ಅಧ್ಯಯನಕ್ಕೆ ಅನುಕೂಲ
ಒಂದೇ ಪ್ರದೇಶದಲ್ಲಿ ಎಲ್ಲ ರೀತಿಯ ಉಪಖನಿಜಗಳು ಇದ್ದು, ಈ ಪ್ರದೇಶವನ್ನು ಸಂರಕ್ಷಿಸಿ ಭೂಗರ್ಭ ಸಂಗ್ರಹಾಲಯ ಪ್ರದೇಶವಾಗಿ ಅಭಿವೃದ್ಧಿಪಡಿಸಿದ್ದೇ ಆದರೆ ಭೂಗರ್ಭಶಾಸ್ತ್ರದ ಬಗ್ಗೆ ಹಾಗೂ ಖನಿಜ, ಉಪ ಖನಿಜಗಳ ಬಗ್ಗೆ ಅರಿವು ಮೂಡಿಸಲು ವಿದ್ಯಾರ್ಥಿಗಳ ಹೆಚ್ಚಿನ ಕ್ಷೇತ್ರ ಅಧ್ಯಯನಕ್ಕೆ ಅನುಕೂಲವಾಗಲಿದೆ. ಈ ಕುರಿತಂತೆ ಈಗಾಗಲೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕೂಡ ಈ ಪ್ರದೇಶದಲ್ಲಿ ಪ್ರಾಕೃತಿಕ ಭೂಗರ್ಭ ಸಂಗ್ರಹಾಲಯ ನಿರ್ಮಾಣ ಮಾಡಲು ಅನುಕೂಲವಾಗಿದೆ ಎಂದಿದ್ದಾರೆ.
ಚಾಮರಾಜನಗರದ ಚಾಮರಾಜೇಂದ್ರ ಒಡೆಯರ್ ಜನನ ಮಂಟಪಕ್ಕಿಲ್ಲ ಕಾಯಕಲ್ಪ
ಸಂಗ್ರಹಾಲಯ ನಿರ್ಮಾಣಕ್ಕೆ ಜಿಲ್ಲಾಡಳಿತ ಸಜ್ಜು
ಈಗಾಗಲೇ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಾದ ಲಕ್ಷ್ಮಮ್ಮ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಹೊನ್ನೇಗೌಡ, ಭೂ ವಿಜ್ಞಾನಿಗಳಾದ ಸುಬ್ರಮಣ್ಯ, ನಾಗರಾಜು, ಇಂಜಿನಿಯರ್ ರಾಘವ, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಮಲ್ಲಯ್ಯನಪುರ ಗ್ರಾಮಕ್ಕೆ ತೆರಳಿ ಪರಿಶೀಲಿಸಿದ್ದು, ಜಿಯಲಾಜಿಕಲ್ ಮ್ಯೂಸಿಯಂ ನಿರ್ಮಾಣ ಮಾಡಲು ಈ ಪ್ರದೇಶ ಯೋಗ್ಯವಾಗಿರುವುದನ್ನು ಮನಗಂಡಿದ್ದಾರೆ.
ಕಾರ್ಯಯೋಜನೆ ತಯಾರಿಸಲು ಸೂಚನೆ
ಇನ್ನು ಈ ಕುರಿತಂತೆ ಮಾತನಾಡಿರುವ ಅವರು, ಪ್ರಕೃತಿದತ್ತವಾದ ಭೂ ಭೌಗೋಳಿಕ (ಜಿಯಲಾಜಿಕಲ್ ಮ್ಯೂಸಿಯಂ) ಪ್ರದೇಶಗಳನ್ನು ಗುರುತಿಸಿ ಈ ಪ್ರದೇಶದಲ್ಲಿಯೇ ವಿದ್ಯಾರ್ಥಿಗಳಿಗೆ ಶಿಲಾಸ್ಥಾವರಗಳ ಉಗಮದ ಬಗ್ಗೆ ಹಾಗೂ ಖನಿಜ, ಉಪಖನಿಜಗಳ ಬಳಕೆಯ ಬಗ್ಗೆ ಕ್ಷೇತ್ರ ಅಧ್ಯಯನದ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನವನ್ನು ನೀಡಬಹುದಾಗಿದೆ ಎಂದಿದ್ದಾರೆ.
ಶಿವಮೊಗ್ಗ: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಮಾಲ್ಗುಡಿ ಡೇಸ್ ಮ್ಯೂಸಿಯಂ
ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಿಗೆ ಸೂಚನೆ
ಸ್ವಾಭಾವಿಕ ಭೂಗರ್ಭ ಸಂಗ್ರಹಾಲಯ ಆಗಿ ಸಂರಕ್ಷಿಸಲು ಹಾಗೂ ಜಿಲ್ಲೆಯಲ್ಲಿ ದೊರಕುವ ಶಿಲಾ ಮಾದರಿಗಳನ್ನು ಮತ್ತು ಖನಿಜಗಳನ್ನು ಸಂಗ್ರಹಿಸಿ ಭೂಗರ್ಭ ಸಂಗ್ರಹಾಲಯ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ತಯಾರಿಸಿ ಸಲ್ಲಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ.