ಮಲೆಮಹದೇಶ್ವರದಲ್ಲಿ ಶಿವನ ದರ್ಶನ ಪಡೆಯಲು ನೂಕುನುಗ್ಗಲು
ಚಾಮರಾಜನಗರ, ಮಾರ್ಚ್ 4:ಮಹಾಶಿವರಾತ್ರಿ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ದೇವಾಲಯಕ್ಕೆ ಲಕ್ಷಾಂತರ ಭಕ್ತರು ತೆರಳಿ ಹರಕೆ ಕಾಣಿಕೆ ಸೇವೆ ಸಲ್ಲಿಸಿ ಸಂಭ್ರಮಿಸಿದರು. ಆದರೆ, ನೂಕುನುಗ್ಗಲು ಹೆಚ್ಚಿದ್ದರಿಂದ ದೇವಾಲಯದ ಒಂದು ಬಾಗಿಲಿನ ಬೀಗ ಮುರಿದ ಭಕ್ತರು ಒಳ ಪ್ರವೇಶಿಸಿದರು.
ಸುಮಾರು 200ರಿಂದ 300 ಕಿಲೋ ಮೀಟರ್ ದೂರದಿಂದ ಕಾಲ್ನಡಿಗೆಯಲ್ಲಿ ದೇವಾಲಯ ತಲುಪಿದ ಭಕ್ತರಿಗೆ ಎಲ್ಲಾ ದ್ವಾರಗಳಿಂದ ಪ್ರವೇಶ ಮುಕ್ತಗೊಳಿಸಲಾಗಿತ್ತು. ಆದರೆ, ಭಕ್ತರ ಸಂಖ್ಯೆ ಹೆಚ್ಚಾಗಿದ್ದ ಕಾರಣ ನೂಕುನುಗ್ಗಲು ಏರ್ಪಟ್ಟಿತು.
ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಇಲ್ಲದ ಕಾರಣ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆಗೆ ಭಕ್ತರು ಧಿಕ್ಕಾರವನ್ನು ಕೂಗಿದರು. ಹಾರೋಹಳ್ಳಿಯಿಂದ ದೇವಾಲಯಕ್ಕೆ ಬಂದಿದ್ದ ಭಕ್ತರ ಸಮೂಹ ಎಲ್ಲಾ ಭಕ್ತರಿಗೆ ಮಜ್ಜಿಗೆ ಹಾಗೂ ಕಲ್ಲಂಗಡಿ ಜ್ಯೂಸ್ ವಿತರಿಸುವ ಮೂಲಕ ತಮ್ಮ ಹರಕೆಯನ್ನು ಸಲ್ಲಿಸಿದರು.

ಅನೇಕ ಭಕ್ತರು ಮಾದೇಶ್ವರ ಸ್ವಾಮಿಯ ಚರಿತ್ರೆಯನ್ನು ಸಾರುವ ಮುಖಾಂತರ ಹರಕೆ ತೀರಿಸಿದರು. ಜೊತೆಗೆ ಮುಡಿಸೇವೆ, ಉರುಳುಸೇವೆ, ಪಂಜಿನ ಸೇವೆ, ರುದ್ರಾಕ್ಷಿ ಮಂಟಪ ವಿವಿಧ ಸೇವೆಗಳನ್ನು ಸಲ್ಲಿಸುವುದರ ಮೂಲಕ ಹರಕೆ ಸಲ್ಲಿಸಲಾಯಿತು.












Click it and Unblock the Notifications