ಬೆಳ್ಳಂಬೆಳಗ್ಗೆ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರ ಪರದಾಟ-ಕಾರಣ ಏನು?
ಚಾಮರಾಜನಗರ, ನವೆಂಬರ್, 22: ಇದೀಗ ಚಳಿಗಾಳ ಆರಂಭವಾಗಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭೀಕರ ಚಳಿಯ ಜೊತೆಗೆ ಮಂಜಿನ ವಾತಾವರಣ ನಿರ್ಮಾಣವಾಗುತ್ತಿದೆ. ಅದರಲ್ಲೂ ಕೆಲವು ಕಡೆಯಂತೂ ಬೆಳಗ್ಗೆ 11 ಗಂಟೆಯಾದರೂ ಮಂಜು ಕವಿದಿರುತ್ತದೆ. ಹಾಗೆಯೇ ಇದೀಗ ಗಡಿಜಿಲ್ಲೆ ಚಾಮರಾಜನಗರದಲ್ಲಿ ದಟ್ಟ ಮಂಜು ಆವರಿಸಿದ ಹಿನ್ನೆಲೆ ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.
ಶುಕ್ರವಾರ ಬೆಳಗ್ಗೆ ಗಂಟೆ 7:40 ಆದರೂ ಮಂಜು ಕವಿದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸವಾರರು ವಾಹನ ಚಲಾಯಿಸಲು ಪರದಾಡಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಚಳಿಗೆ ಜನರು ಹೈರಣಾಗಿದ್ದಾರೆ. ಇದರ ನಡುವೆ ಒಬ್ಬರ ಮುಖ ಮತ್ತೊಬ್ಬರಿಗೆ ಕಾಣದಷ್ಟು ದಟ್ಟ ಮಂಜು ಆವರಿಸಿತ್ತಿರುವ ಕಾರಣ ವಾಹನ ಸವಾರರು ಪರದಾಡಿದರೆ, ಜನರು ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚಾಮರಾಜನಗರದಲ್ಲಿ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ಇಲ್ಲಿ ವಾಹನ ಸವಾರರು ದಟ್ಟ ಮಂಜಿನ ನಡುವೆ ವಾಹನ ಚಲಾಯಿಸಲು ಪ್ರಯಾಸ ಪಟ್ಟರು.
ವಾಹನ ಸವಾರರ ಪರದಾಟ: ಚಾಮರಾಜನಗರ ಒಂದಲ್ಲ ಒಂದು ರೀತಿಯಲ್ಲಿ ರಸ್ತೆ, ಅಪಘಾತಗಳು, ಪ್ರಾಣಿಗಳ ವಿಡಿಯೋ ವೈರಲ್ ವಿಚಾರದಲ್ಲಿ ಸುದ್ದಿಯಾಗುತ್ತಲೇ ಇದೆ. ಹಾಗೆಯೇ ಇದೀಗ ಈ ಜಿಲ್ಲೆ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದಾಗಿದ್ದು, ಸುಮಾರು ಎರಡು ಗಂಟೆಗಳ ಕಾಲ ವಾಹನ ಸವಾರರು ಪರದಾಡಿದ ಘಟನೆ ಇತ್ತೀಚೆಗಷ್ಟೇ ನಡೆದಿತ್ತು.
2 ತಾಸು ಟ್ರಾಫಿಕ್ ಜಾಂ: ಅತಿಭಾರ ಹೊತ್ತ ವಾಹನಗಳು ಕಳೆದ ಕೆಲವು ದಿನಗಳಿಂದ ಮತ್ತೇ ಸಂಚರಿಸುತ್ತಿರುವ ಹಿನ್ನೆಲೆ ಕರ್ನಾಟಕ ಮತ್ತು ತಮಿಳುನಾಡು ಬೆಸೆಯುವ ಚಾಮರಾಜನಗರ ಗಡಿಭಾಗವಾದ ದಿಂಬಂನಲ್ಲಿ 2 ತಾಸು ಟ್ರಾಫಿಕ್ ಜಾಂ ಆದ ಘಟನೆ ಗುರುವಾರ (ಸೆಪ್ಟೆಂಬರ್ 19) ಮಧ್ಯಾಹ್ನ ನಡೆದಿದೆ. ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಕಿಲೋ ಮೀಟರ್ಗಟ್ಟಲೇ ಟ್ರಾಫಿಕ್ ಜಾಂ ಉಂಟಾಗಿ ವಾಹನ ಸವಾರರು ಪರದಾಡಿದರು.
ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರದ ಗಡಿಯಲ್ಲಿರುವ ಅಸನೂರು, ದಿಂಬಂನಲ್ಲಿ ಅತಿಭಾರ ಹೊತ್ತ ವಾಹನಗಳು ಸಂಚಾರ ಮಾಡಿವೆ. ಈ ಹಿನ್ನೆಲೆ ಉಳಿದ ವಾಹನಗಳಾದ ಬಸ್, ಕಾರು, ಬೈಕ್ ಸವಾರರು ಗಂಟೆಗಟ್ಟಲೇ ಟ್ರಾಫಿಕ್ ಜಾಂನಲ್ಲಿ ಸಿಲುಕಿ ಪರದಾಡಿದರು. ಆ್ಯಂಬುಲೆನ್ಸ್ಗಳು ಸೇರಿದಂತೆ ಹಲವು ವಾಹನಗಳು ಕಿಲೋ ಮೀಟರ್ಗಟ್ಟಲೇ ನಿಂತು ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಫಜೀತಿ ಅನುಭವಿಸಿದ್ದಾರೆ.
ಜಂಟಿ ಸಮೀಕ್ಷೆ: ಗುಂಡ್ಲುಪೇಟೆ ಮೂಲಕ ಮೈಸೂರಿಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-766ರಲ್ಲಿ ಅಪಘಾತಗಳು ಹೆಚ್ಚಳ ಆಗುತ್ತಲೇ ಇವೆ. ಈ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುರುತಿಸಲಾದ ಅಪಘಾತ ವಲಯಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪ್ರಾದೇಶಿಕ ಸಾರಿಗೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿದರು.












Click it and Unblock the Notifications