ದೇವಸ್ಥಾನಕ್ಕೆ ತೆರಳಿ ನಿತ್ಯ ರಾಮನ ದರ್ಶನ ಮಾಡುವ ಕರು!
ಚಾಮರಾಜನಗರ, ಡಿಸೆಂಬರ್ 27 : ಪ್ರತಿದಿನ ಬೆಳಗ್ಗೆ ದೇವಸ್ಥಾನದ ಪೂಜಾ ಸಮಯಕ್ಕೆ ಸರಿಯಾಗಿ ಕರುವೊಂದು ಆಗಮಿಸಿ ಪ್ರಸಾದ ಪಡೆದು ಹೋಗುತ್ತಿರುವ ದೃಶ್ಯ ಗುಂಡ್ಲುಪೇಟೆಯ ರಾಮೇಶ್ವರ ದೇವಾಲಯದಲ್ಲಿ ಸಾಮಾನ್ಯವಾಗಿದ್ದು, ಭಕ್ತರ ಅಚ್ಚರಿಗೂ ಕಾರಣವಾಗಿದೆ.
ಕಳೆದ ಕೆಲವು ಸಮಯಗಳಿಂದ ಈ ದೃಶ್ಯ ಕಂಡು ಬರುತ್ತಿದೆ. ಕರು ದೇವಸ್ಥಾನದ ಬಾಗಿಲು ತೆರೆಯುವ ಸಮಯಕ್ಕೆ ಸರಿಯಾಗಿ ಬರುತ್ತಿದ್ದು, ದೇವಸ್ಥಾನದ ಬೀಗ ತೆರೆಯುತ್ತಿದ್ದಂತೆಯೇ ಬಾಗಿಲನ್ನು ದೂಡಿಕೊಂಡು ಒಳ ಪ್ರವೇಶಿಸಿ ಶಿವಲಿಂಗದ ಎದುರು ಇರುವ ನಂದಿ ಮೂರ್ತಿಯ ಹಿಂಭಾಗ ನಿಲ್ಲುತ್ತದೆ. ಒಳಾಂಗಣವನ್ನೆಲ್ಲ ಸುತ್ತಾಡಿದ ಬಳಿಕ ಶಿವಲಿಂಗದ ಎದುರು ನಿಲ್ಲುವುದನ್ನು ರೂಢಿಸಿಕೊಂಡಿದೆ.

ಕೆಲವೊಮ್ಮೆ ಭಕ್ತರು ವಿರಳವಾಗಿದ್ದ ಸಮಯದಲ್ಲಿ ಮಂಗಳಾರತಿ ಮುಗಿಯುವವರೆಗೂ ನಂದಿಯ ಮೂರ್ತಿಯ ಹಿಂಭಾಗಕ್ಕೆ ತಲೆಯಿಟ್ಟು ಮಲಗುತ್ತದೆ. ತೀರ್ಥ ಪ್ರೋಕ್ಷಣೆ ಮಾಡಿ ಪ್ರಸಾದ ನೀಡಿದ ನಂತರ ಹೊರಹೋಗುತ್ತದೆ.
ಈ ಕರು ಪಟ್ಟಣದ ನಿವಾಸಿ ಅಕ್ಬರ್ ಎಂಬುವರಿಗೆ ಸೇರಿದ್ದಾಗಿದೆ. ಭಕ್ತರ ಆಪೇಕ್ಷೆಯಂತೆ ಕರುವನ್ನು ದೇವಸ್ಥಾನಕ್ಕೆ ಬಿಟ್ಟುಕೊಡುವಂತೆ ದೇವಸ್ಥಾನದ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ಮನವಿ ಮಾಡಿದ್ದು ಅದಕ್ಕೆ ಮಾಲೀಕರೂ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.












Click it and Unblock the Notifications