ಗಡಿಜಿಲ್ಲೆಯಲ್ಲಿ ಒಂದೇ ದಿನ ಕೈ-ಕಮಲ ಅಭ್ಯರ್ಥಿಗಳ ನಾಮಿನೇಷನ್: ಯಾರೆಲ್ಲಾ ಭಾಗಿಯಾಗಲಿದ್ದಾರೆ ಗೊತ್ತಾ?-ಮಾಹಿತಿ
ಚಾಮರಾಜನಗರ, ಏಪ್ರಿಲ್, 1: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರಂಗು ಜೋರಾಗುತ್ತಿದ್ದು, ಒಂದೇ ದಿನ ಕೈ-ಕಮಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಏಪ್ರಿಲ್ 3ರಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಹಾಗೂ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಎರಡೂ ಪಕ್ಷಗಳು ಭರ್ಜರಿ ರೋಡ್ ಶೋ ನಡೆಸಲಿವೆ.

ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದು, ರೋಡ್ ಶೋ ನಡೆಸಲಿದ್ದಾರೆ. ಇವರಿಗೆ ಸಚಿವರಾದ ಎಚ್.ಸಿ.ಮಹಾದೇವಪ್ಪ, ವೆಂಕಟೇಶ್ ಜೊತೆಯಾಗುತ್ತಾರೆ. ಇನ್ನು, ಎಸ್.ಬಾಲರಾಜು ನಾಮಿನೇಷನ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬರಲಿದ್ದು, ಇವರು ಕೂಡ ಚಾಮರಾಜೇಶ್ವರ ದೇಗುಲದಿಂದ ಜಿಲ್ಲಾಡಳಿತ ಭವನದವರೆಗೆ ರೋಡ್ ಶೋ ಮಾಡಲಿದ್ದು, ಈ ವೇಳೆ ಡಿ.ವಿ.ಸದಾನಂದಗೌಡ, ನಟಿ ಶೃತಿ, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಭಾಗಿಯಾಗಲಿದ್ದಾರೆ.
ಒಂದೇ ದಿನ ಅರ್ಧ ತಾಸಿನ ಅಂತರದಲ್ಲಿ ಎರಡೂ ಪಕ್ಷಗಳ ನಾಯಕರು ಮತ ಬೇಟೆಯಲ್ಲಿ ತೊಡಗಲಿದ್ದು, ಚುನಾವಣಾ ರಂಗು ಮತ್ತಷ್ಟು ಹೆಚ್ಚಲಿದೆ.
ವಿ.ಸೋಮಣ್ಣ ನಾಮಪತ್ರ ಸಲ್ಲಿಕೆ: ಅದೇ ರೀತಿ ತುಮಕೂರಿನಲ್ಲಿ ವಿ.ಸೋಮಣ್ಣ ಅವರು ಸಹ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಶಾಸಕರಾದ ಜ್ಯೋತಿ ಗಣೇಶ್, ಸುರೇಶ್ ಗೌಡ, ಸುರೇಶ್ ಬಾಬು, ಮಾಜಿ ಶಾಸಕ ಸುಧಾಕರ್ ಲಾಲ್, ಬಿಜೆಪಿ ಮುಖಂಡ ಅನಿಲ್ ಕುಮಾರ್ ಅವರ ಜೊತೆ ಸೇರಿ ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಅವರು ನಾಮಪತ್ರ ಸಲ್ಲಿಕೆ ಮಾಡಿದರು. ಇದಕ್ಕೂ ಮುಂಚೆ ಅವರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.
ಕೆ.ಸುಧಾಕರ್ ನಾಮಪತ್ರ ಸಲ್ಲಿಕೆ: ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಎಂಟಿಬಿ ನಾಗರಾಜ್ ಅವರ ಕಾಲಿಗೆ ಬಿದ್ದು ಸುಧಾಕರ್ ಆಶೀರ್ವಾದ ಪಡೆದರು. ಇದೇ ವೇಳೆ, ನಾಗರಾಜ್ ಅವರು ನಾಮಪತ್ರ ಶುಲ್ಕವಾದ 25,000 ರೂಪಾಯಿ ನೀಡಿ ಆಶೀರ್ವಾದ ಮಾಡಿದರು.
ಹಲವು ಹಿರಿಯರ ಆಶೀರ್ವಾದ ಪಡೆದ ಬಳಿಕ ಸುಧಾಕರ್ ಅವರು ನಾಮಪತ್ರ ಸಲ್ಲಿಸಿದರು. ಇವರಿಗೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ವರ್ತೂರು ಪ್ರಕಾಶ್, ನಿಸರ್ಗ ನಾರಾಯಣಸ್ವಾಮಿ ಸಾಥ್ ನೀಡಿದರು.












Click it and Unblock the Notifications