ವಿಷಪ್ರಸಾದ ಪ್ರಕರಣದ ಸಂಪೂರ್ಣ ಮಾಹಿತಿ: ಇದು ಮೂವರ ದ್ವೇಷದ ಕತೆ
ಚಾಮರಾಜನಗರ, ಡಿಸೆಂಬರ್ 19: ಇಮ್ಮಡಿ ಮಹಾದೇವಸ್ವಾಮಿ ನೇತೃತ್ವದಲ್ಲಿ, ಅಂಬಿಕಾ, ಮಾದೇಶ, ದೊಡ್ಡಯ್ಯ ಎಂಬುವರು ಸೇರಿ ಪ್ರಸಾದಕ್ಕೆ ವಿಷವಿಕ್ಕಿದ್ದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ಅವರು ಹೇಳಿದರು.
ಚಾಮರಾಜನಗರದ ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದ ಪ್ರಸಾದದಲ್ಲಿ ವಿಷ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು.
ಸೋಲೂರು ಮಠದ ಕಿರಿಯ ಸ್ವಾಮಿ ಇಮ್ಮಡಿ ಮಹಾದೇವಸ್ವಾಮಿ ಹಾಗೂ ಅಂಬಿಕ ಹಾಗೂ ದೊಡ್ಡಯ್ಯ ಎಂಬುವರ ದ್ವೇಷ ಮನಸ್ಥಿತಿಯಿಂದ 15 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ಐಜಿಪಿ ಶರತ್ ಚಂದ್ರ ಅವರು ನೀಡಿದ ಮಾಹಿತಿಯಿಂದ ಗೊತ್ತಾಗುತ್ತಿದೆ.
ಐಜಿಪಿ ಶರತ್ ಚಂದ್ರ ಅವರು ಪ್ರಕರಣ ನಡೆದಿದ್ದು ಹೇಗೆ, ಘಟನೆಗೆ ಕಾರಣ, ಕೃತ್ಯ ಎಸೆಗಲು ಕಾರಣವೇನು, ಆರೋಪಿಗಳನ್ನು ಬಂಧಿಸಿದ್ದು ಹೇಗೆ, ಸಾಕ್ಷಿ ದೊರೆತಿದ್ದು ಹೇಗೆ ಎಲ್ಲವನ್ನೂ ವಿವರಿಸಿದ್ದಾರೆ. ಶರತ್ ಚಂದ್ರ ಅವರು ಮಾಧ್ಯಮಗಳಿಗೆ ನೀಡಿದ ಮಾಹಿತಿ ಅನ್ವಯ ಘಟನೆ ನಡೆದಿರುವುದು ಹೀಗೆ...
ದೇವಾಲಯ ವಶಪಡಿಸಿಕೊಳ್ಳಬೇಕೆಂಬ ದುರಾಸೆ
ಮಾರಮ್ಮ ದೇವಾಲಯದ ಟ್ರಸ್ಟ್ನ ಅಧ್ಯಕ್ಷರೂ ಆಗಿರುವ ಸೋಲೂರು ಮಠದ ಕಿರಿಯ ಸ್ವಾಮಿ ಇಮ್ಮಡಿ ಮಹಾದೇವಸ್ವಾಮಿ ಅಲಿಯಾಸ್ ದೇವಣ್ಣ ಬುದ್ದಿ ಅವರಿಗೆ ಮಾರಮ್ಮ ದೇವಾಲಯವನ್ನು ಪೂರ್ಣವಾಗಿ ತಮ್ಮ ವಶಮಾಡಿಕೊಳ್ಳಬೇಕು ಎಂಬ ಆಸೆ ಇತ್ತು. ಆದರೆ ಟ್ರಸ್ಟ್ನ ಸದಸ್ಯರು ಅವರ ವಿರುದ್ಧ ನಡೆದುಕೊಳ್ಳುತ್ತಿದ್ದರು.
ಟ್ರಸ್ಟ್ ಸದಸ್ಯರು ಇಮ್ಮಡಿ ಸ್ವಾಮಿ ವಿರುದ್ಧ ಬಂಡಾಯ
ಟ್ರಸ್ಟ್ ನ ಅಧ್ಯಕ್ಷರಾಗಿದ್ದ ಇಮ್ಮಡಿ ಮಹಾದೇವ ಸ್ವಾಮಿಯನ್ನೂ ಕರೆಯದೆ ಡಿಸೆಂಬರ್ 14 ರಂದು ಗೋಪುರ ನಿರ್ಮಾಣ ಶಂಕುಸ್ಥಾಪನೆ ಕಾರ್ಯಕ್ಕೆ ಟ್ರಸ್ಟ್ ಮುಂದಾಗಿತ್ತು. ಇದರಿಂದ ಕೋಪಗೊಂಡಿದ್ದ ಇಮ್ಮಡಿ ಮಹಾದೇವಸ್ವಾಮಿ ತನ್ನ ಸಂಗಡಿರೊಂದಿಗೆ ಸೇರಿ ಅದೇ ದಿನ ಪ್ರಸಾದದಲ್ಲಿ ವಿಷ ಬೆರೆಸುವಂತೆ ಮಾಡಿದ್ದಾನೆ.
ಅಂಬಿಕಾ ಸಹಾಯ ಕೇಳಿದ ಇಮ್ಮಡಿ ಸ್ವಾಮಿ
ಮಾರಮ್ಮ ದೇವಾಲಯದ ವ್ಯವಸ್ಥಾಪಕ ಮಾದೇಶನ ಮಡದಿ ಅಂಬಿಕ ಮತ್ತು ಇಮ್ಮಡಿ ಮಹಾದೇವಸ್ವಾಮಿ ಒಂದೇ ಊರಿನವರು, ಅವರಿಬ್ಬರಿಗೂ ಅನೈತಿಕ ಸಂಬಂಧ ಇತ್ತು ಎಂಬುದು ಸಹ ತನಿಖೆಯಿಂದ ಗೊತ್ತಾಗಿದೆ. ಮಾದೇಶ ಹಾಗೂ ಅಂಬಿಕ ಅವರಿಗೆ ಸಾಕಷ್ಟು ಹಣದ ಸಹಾಯ ಇಮ್ಮಡಿ ಸ್ವಾಮಿ ಮಾಡಿದ್ದ, ಮನೆ ಸಹ ಲೀಜ್ಗೆ ಹಾಕಿಸಿಕೊಟ್ಟಿದ್ದ, ಮಾದೇಶನಿಗೆ ಮಾರಮ್ಮನ ದೇವಾಲಯದಲ್ಲಿ ಕೆಲಸ ಕೂಡ ಕೊಡಿಸಿದ್ದ.
ಕುತಂತ್ರವೇ ಮೈವೆತ್ತಾಕೆ ಅಂಬಿಕಾ
ಹಾಗಾಗಿ ದೇವಾಲಯದ ಪ್ರಸಾದದಲ್ಲಿ ವಿಷ ಬೆರೆಸಲು ಇಮ್ಮಡಿ ಸ್ವಾಮಿ ಅಂಬಿಕಳ ಸಹಾಯ ಕೇಳುತ್ತಾನೆ. ಪ್ರಸಾದದಲ್ಲಿ ವಿಷ ಹಾಕಿದರೆ ಟ್ರಸ್ಟಿಗಳ ಮೇಲೆ ಅನುಮಾನ ಬಂದು ಅವರ ಮೇಲೆ ಕೇಸು ದಾಖಲಾಗುತ್ತಿದೆ ಆಗ ದೇವಾಲಯದ ಪ್ರಮುಖ ಟ್ರಸ್ಟಿ ಚಿನ್ನಪ್ಪನ ಜಾಗಕ್ಕೆ ತನ್ನ ಗಂಡ ಮಾದೇಶನನ್ನು ಕೂರಿಸಬಹುದು ಎಂದೆಣಿಸಿದ ಅಂಬಿಕ ಇಮ್ಮಡಿ ಸ್ವಾಮಿಗೆ ಸಹಾಯ ಮಾಡಲು ಮುಂದಾಗಿದ್ದಾಳೆ.
ವಿಷ ಬೆರೆಸಲು ದೊಡ್ಡಯ್ಯನನ್ನು ಆರಿಸುತ್ತಾಳೆ ಅಂಬಿಕ
ಆದರೆ ವಿಷ ಹಾಕಲು ದೊಡ್ಡಯ್ಯ ಎಂಬುವನನ್ನು ಅಂಬಿಕ ಆಯ್ಕೆ ಮಾಡಿದ್ದಾಳೆ. ದೊಡ್ಡಯ್ಯ ಮಾರಮ್ಮನ ಗುಡಿಯಲ್ಲಿಯೇ ಕೆಲಸ ಮಾಡುತ್ತಿದ್ದ, ಆದರೆ ಆತ ಕೆಲವು ತಿಂಗಳ ಹಿಂದೆ ಗಾಂಜಾ ಕೇಸಲ್ಲಿ ಸಿಕ್ಕಬಿದ್ದ ಕಾರಣ ಚಿನ್ನಪ್ಪಿ ಆತನನ್ನು ಕೆಲಸದಿಂದ ವಜಾ ಮಾಡಿದ್ದ ಆ ದ್ವೇಷದಲ್ಲಿ ಇದ್ದ ದೊಡ್ಡಯ್ಯನನ್ನು ಈ ಕೆಲಸಕ್ಕೆ ಅಂಬಿಕ ಆರಿಸಿದ್ದಾಳೆ. ದ್ವೇಷದಲ್ಲಿದ್ದ ಆತನೂ ಕೆಲಸ ಮಾಡುವುದಾಗಿ ಒಪ್ಪಿದ್ದಾನೆ.
ಕೃಷಿ ಅಧಿಕಾರಿಯಿಂದ ವಿಷ ತರಿಸಿಕೊಂಡಿದ್ದಳು
ನಂತರ ಅಂಬಿಕ ತನಗೆ ಪರಿಚಯವಿದ್ದ ಹನೂರಿನ ಕೃಷಿ ಅಧಿಕಾರಿಗಳಿಗೆ, 'ಮನೆಯ ಬಳಿ ಗಿಡಗಳಿಗೆಂದು' ಸುಳ್ಳು ಹೇಳಿ ಕ್ರಿಮಿನಾಶಕವನ್ನು ತರಿಸಿಕೊಂಡಿದ್ದಾಳೆ. ಗೊತ್ತಾದ ದಿನ ದೊಡ್ಡಯ್ಯ ಮತ್ತು ಮಾದೇಶ ವಿಷದ ಬಾಟಲಿ ತೆಗೆದುಕೊಂಡು ದೇವಾಸ್ಥಾನಕ್ಕೆ ಹೋಗಿ ಅಡುಗೆ ಮಾಡುತ್ತಿದ್ದವರನ್ನು ಯಾಮಾರಿಸಿ ಟಮೆಟೋಬಾತ್ಗೆ ವಿಷ ಬೆರೆಸಿದ್ದಾರೆ.