ಗುಂಡ್ಲುಪೇಟೆ ಬಳಿ ಟಿಪ್ಪರ್ ಗುದ್ದಿದ ಸ್ಕಾರ್ಪಿಯೋ ನಜ್ಜುಗುಜ್ಜು, ವ್ಯಕ್ತಿ ಸಾವು
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯಲ್ಲಿ ಟಿಪ್ಪರ್ ಹಾಗೂ ಸ್ಕಾರ್ಪಿಯೋ ಮಧ್ಯೆ ಅಪಘಾತವಾಗಿ, ಸ್ಕಾರ್ಪಿಯೋ ನಜ್ಜುಗುಜ್ಜಾಗಿದೆ. ಅದರೊಳಗೆ ಇದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ
ಗುಂಡ್ಲುಪೇಟೆ, ಏಪ್ರಿಲ್ 15: ಟಿಪ್ಪರ್ ಮತ್ತು ಸ್ಕಾರ್ಪಿಯೋ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ, ಸ್ಕಾರ್ಪಿಯೋದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ಸಮೀಪದ ಕುರುಬರಹುಂಡಿ ಬಳಿಯಿರುವ ಓಂಕಾರ್ ವಲಯ ಅರಣ್ಯ ಕಚೇರಿ ಬಳಿ ನಡೆದಿದೆ. ಘಟನೆಯಲ್ಲಿ ಬೇಗೂರು ಸಮೀಪದ ತಗ್ಗಲೂರು ಗ್ರಾಮದ ಬಸವಣ್ಣ (52) ಸಾವನ್ನಪ್ಪಿದ್ದಾರೆ.
ಹೆಡಿಯಾಲ ಕಡೆಯಿಂದ ಬೇಗೂರು ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ (ಎಪಿ-26-ಟಿಟಿ6070) ಹಾಗೂ ಬೇಗೂರು ಕಡೆಯಿಂದ ಹೆಡಿಯಾಲ ಕಡೆಗೆ ತೆರಳುತ್ತಿದ್ದ ಸ್ಕಾರ್ಪಿಯೋ (ಕೆಎ10-ಎಂ1508) ಮುಖಾಮುಖಿ ಡಿಕ್ಕಿಯಾಗಿದೆ. ಈ ವೇಳೆ ಸ್ಕಾರ್ಪಿಯೋದಲ್ಲಿ ಪ್ರಯಾಣಿಸುತ್ತಿದ್ದ ಬಸವಣ್ಣ ಸಾವನ್ನಪ್ಪಿದ್ದಾರೆ.[ಪ್ರವಾಸಕ್ಕೆ ತೆರಳಿದ್ದ ಬೆಳಗಾವಿಯ 8 ವಿದ್ಯಾರ್ಥಿಗಳು ನೀರುಪಾಲು]
ತಮ್ಮ ಸ್ವಗ್ರಾಮ ತಗ್ಗಲೂರಿನಿಂದ ಹೆಂಡತಿಯ ತವರು ಮನೆಯಾದ ನಂಜನಗೂಡು ತಾಲೂಕು ನಾಗಣಾಪುರ ಗ್ರಾಮಕ್ಕೆ ಬಸವಣ್ಣ ತೆರಳುತ್ತಿದ್ದರು. ಕುರುಬರಹುಂಡಿ ಬಳಿಯಿರುವ ಓಂಕಾರ್ ವಲಯ ಅರಣ್ಯ ಕಚೇರಿ ಬಳಿ ತೆರಳುತ್ತಿದ್ದಂತೆಯೇ ಎದುರುಗಡೆಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು ಲಾರಿಯ ಮುಂದಿನ ಚಕ್ರ ಕಿತ್ತು ಹೊರಬಂದಿದೆ.
ಅಣತಿ ದೂರದಲ್ಲಿಯೇ ಇದ್ದ ಓಂಕಾರ್ ವಲಯ ಅರಣ್ಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದಿದ್ದಾರೆ. ಅಷ್ಟರಲ್ಲೇ ರಕ್ತದ ಮಡುವಿನಲ್ಲಿದ್ದ ಬಸವಣ್ಣನವರು ಸ್ಥಳದಲ್ಲೇ ಸಾವಿಗೀಡಾಗಿದ್ದರು. ಘಟನೆಯ ಬಳಿಕ ಲಾರಿಯ ಚಾಲಕ ಸೇರಿದಂತೆ ಇತರೆ ಇಬ್ಬರು ಪಕ್ಕದ ಕಾಡಿನತ್ತ ಓಡಿ ನಾಪತ್ತೆಯಾಗಿದ್ದಾರೆ.[ಕ್ಯಾಮರಾ ಕೇಳಿದರೆ ಮಂಗಳೂರಲ್ಲಿ ಗಣಪನೇ ಪ್ರತ್ಯಕ್ಷನಾದ!]
ಬೇಗೂರು ಪೊಲೀಸ್ ಠಾಣೆ ಪಿಎಸ್ ಐ ಕಿರಣ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಎರಡೂ ವಾಹನ ವಶಕ್ಕೆ ಪಡೆದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.