ಚಂಡೀಘಡದ ಅರಣ್ಯಾಧಿಕಾರಿಗೆ ಕರ್ನಾಟಕದ ಪ್ರತಿಭೆಗಳ ಸಲಹೆ
ಚಾಮರಾಜನಗರ, ಏಪ್ರಿಲ್ 29: ಕಾಡಿಗೆ ಹೊಂದಿಕೊಂಡಿರುವ ಗ್ರಾಮಗಳ ಜನರು ಆಗಾಗ್ಗೆ ವನ್ಯ ಪ್ರಾಣಿಗಳ ಹಾವಳಿಯಿಂದ ಸಂಕಷ್ಟ ಅನುಭವಿಸುತ್ತಲೇ ಬರುತ್ತಿದ್ದಾರೆ. ಕಾಡಿನಿಂದ ಬರುವ ಹುಲಿ, ಚಿರತೆಗಳು ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ಸಾಯಿಸುವುದಲ್ಲದೆ, ರೈತರನ್ನು ಕೂಡ ಬಲಿ ತೆಗೆದುಕೊಂಡ ನಿದರ್ಶನಗಳು ಬೇಕಾದಷ್ಟಿವೆ.
Recommended Video
ಇತ್ತೀಚೆಗೆ ಹುಲಿ, ಚಿರತೆಗಳು ಕಾಡಂಚಿನ ಜನರಿಗೆ ಹಲವು ರೀತಿಯಲ್ಲಿ ಕಾಟ ಕೊಡುತ್ತಿರುವ ಪ್ರಕರಣಗಳೂ ನಡೆಯುತ್ತಿವೆ. ಅವುಗಳನ್ನು ಹುಡುಕಿ ಸೆರೆ ಹಿಡಿಯುವುದು ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಈಗಲೂ ಅರಣ್ಯ ಇಲಾಖೆ ಹಿಂದಿನ ಕಾಲದ ತಂತ್ರಗಳನ್ನೇ ಅವಲಂಬಿಸಿ ಹುಲಿ, ಚಿರತೆಗಳನ್ನು ಸೆರೆ ಹಿಡಿಯುತ್ತಿದ್ದು, ಆಧುನಿಕವಾಗಿ ನೂತನ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಗೋಜಿಗೆ ಹೋಗದ ಕಾರಣ ವ್ಯಾಘ್ರಗಳು ಅರಣ್ಯ ಇಲಾಖೆ ಸಿಬ್ಬಂದಿಗಳ ಕಣ್ಣಿಗೆ ಮಣ್ಣೆರಚಿ ತಮ್ಮ ಅಟ್ಟಹಾಸ ಮುಂದುವರೆಸುತ್ತಿವೆ. ಇದರಿಂದ ರೈತರು ತಮ್ಮ ಸಾಕು ಪ್ರಾಣಿಗಳನ್ನು ಕಳೆದುಕೊಳ್ಳುತ್ತಿರುವುದಲ್ಲದೆ ತಮ್ಮ ಪ್ರಾಣಕ್ಕೆಲ್ಲಿ ಕುತ್ತು ಬಂದು ಬಿಡುತ್ತದೆಯೋ ಎಂಬ ಭಯದಲ್ಲಿಯೇ ಬದುಕುವಂತಾಗಿದೆ.
ಚಿರತೆ ಸೆರೆಗೆ ನೂತನ ತಂತ್ರಜ್ಞಾನದ ಸಲಹೆ
ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಕಾಡಿನಿಂದ ನಾಡಿಗೆ ಬಂದು ಮನುಷ್ಯನ ಮತ್ತು ಸಾಕು ಪ್ರಾಣಿಗಳ ಜೀವಕ್ಕೆ ಕಂಟಕವಾಗಿರುವ ಹುಲಿ, ಚಿರತೆಯಂತಹ ಕ್ರೂರ ಪ್ರಾಣಿಗಳನ್ನು ಸೆರೆ ಹಿಡಿದು ಬೇರೆಡೆಗೆ ಬಿಡುವ ಪ್ರಕ್ರಿಯೆಯಲ್ಲಿ ಒಂದಿಷ್ಟು ಆಧುನಿಕ ತಂತ್ರಜ್ಞಾನವನ್ನು ಅಳವಡಿಕೆ ಮಾಡುವುದು ಅನಿವಾರ್ಯವಾಗಿದೆ. ಹೀಗಿರುವಾಗಲೇ ಬಂಡೀಪುರ ಅಭಯಾರಣ್ಯದಿಂದ ಸುಮಾರು ಇಪ್ಪತ್ತು ಕಿ.ಮೀ. ದೂರದ ನಿವಾಸಿ ನಾಗಾರ್ಜುನ ಕುಮಾರ ಮತ್ತು ಕರ್ನಾಟಕದ ಪಶು ವೈದ್ಯಕೀಯ ಕಾಲೇಜಿನ ಅನಿಮಲ್ ಜೆನೆಟಿಕ್ಸ್ ಮತ್ತು ಬ್ರೀಡಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಪಶುವೈದ್ಯಾಧಿಕಾರಿ ಎಚ್.ಎಸ್ ಪ್ರಯಾಗ್ ಮತ್ತು ಇಮ್ರಾನ್ ಅವರು ನೂತನ ತಂತ್ರಜ್ಞಾನ ಬಳಸಿ ಚಿರತೆ ಸೆರೆಹಿಡಿಯುವ ಮತ್ತು ಚಲನೆಯನ್ನು ನಕ್ಷೆ ಮಾಡುವತ್ತ ಕಾರ್ಯಪ್ರವೃತ್ತರಾಗಿದ್ದಾರೆ.
ಬಂಡೀಪುರ ಕಾಡಂಚಿನಲ್ಲಿ ಹುಲಿ ಪತ್ತೆಗೆ ಮುಂದುವರೆದ ಕೂಂಬಿಂಗ್
ಈಗಲೂ ಬೋನಿರಿಸಿಯೇ ಚಿರತೆಗಳ ಸೆರೆ
ಸಾಮಾನ್ಯವಾಗಿ ಅರಣ್ಯದಂಚಿನಲ್ಲಿರುವ ಗ್ರಾಮದ ಜನರು ಹೆಚ್ಚಾಗಿ ಚಿರತೆಯ ಹಾವಳಿಯಿಂದ ಭಯಭೀತರಾಗಿರುತ್ತಾರೆ. ಆಗೊಮ್ಮೆ ಈಗೊಮ್ಮೆ ಪ್ರತ್ಯಕ್ಷವಾಗುವ ಚಿರತೆ ಸಾಕು ನಾಯಿ, ಜಾನುವಾರು, ಕುರಿ, ಮೇಕೆಗಳ ಮೇಲೆ ದಾಳಿ ಮಾಡುತ್ತವೆ. ಬಹಳಷ್ಟು ಕಡೆ ಮನುಷ್ಯನ ಮೇಲೆ ದಾಳಿ ಮಾಡಿ ಜೀವ ತೆಗೆದ ಪ್ರಕರಣಗಳು ಬೇಕಾದಷ್ಟಿವೆ. ಇವುಗಳನ್ನು ಬೋನಿರಿಸಿ ಸೆರೆಹಿಡಿಯುವ ಕ್ರಮ ಚಾಲ್ತಿಯಲ್ಲಿದ್ದು, ಇದು ಒಂದೆರಡು ದಿನಗಳಲ್ಲಿ ಆಗುವ ಕಾರ್ಯವಲ್ಲ. ತಿಂಗಳಾನುಗಟ್ಟಲೆ ಅರಣ್ಯ ಇಲಾಖೆ ಇದರ ಹಿಂದೆ ಬೀಳಬೇಕಾಗುತ್ತದೆ. ಕೆಲವು ಚಿರತೆಗಳು ಬೋನಿಗೆ ಸಿಗದೆ ಚಳ್ಳೆಹಣ್ಣು ತಿನ್ನಿಸಿದ ಉದಾಹರಣೆಗಳಿವೆ.
ಚಂಡೀಘಡದ ಅರಣ್ಯಾಧಿಕಾರಿ ಪ್ರಶಂಸೆ
ಇದೆಲ್ಲವನ್ನು ಗಮನಿಸಿದ ಪ್ರಯಾಗ್, ನಾಗಾರ್ಜುನ ಮತ್ತು ಇಮ್ರಾನ್ ಅವರು ಚಿರತೆಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ನಾಗಾರ್ಜುನ ಅವರು ಕೇಂದ್ರ ಪರಿಸರ ಸಚಿವಾಲಯದ ಮೂಲಕ ಹಸಿರು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ದೆಹಲಿಯಲ್ಲಿ ಎರಡು ತಿಂಗಳ ತರಬೇತಿ ಪಡೆದಿದ್ದಾರೆ. ಇತ್ತೀಚೆಗೆ ಚಿರತೆ ಹಾವಳಿ ಕುರಿತಂತೆ ಚಂಡೀಘಡದ ಅರಣ್ಯ ಉಪ ಸಂರಕ್ಷಣಾಧಿಕಾರಿ ಡಾ. ಅಬ್ದುಲ್ ಕಯುಮ್ ಅವರು ಟ್ವಿಟರ್ ಖಾತೆಯಲ್ಲಿ ಪ್ರಸ್ತಾಪಿಸಿದ ವೇಳೆ ಪ್ರಯಾಗ್, ನಾಗಾರ್ಜುನ ಮತ್ತು ಇಮ್ರಾನ್ ಅವರು ಒಂದಷ್ಟು ಆಧುನಿಕ ತಂತ್ರಜ್ಞಾನಗಳ ಕುರಿತಂತೆ ಮತ್ತು ಕಾರ್ಯವೈಖರಿಯ ಬಗ್ಗೆ ಸಲಹೆಗಳನ್ನು ನೀಡಿದ್ದರು. ಇದನ್ನು ಮೆಚ್ಚಿದ ಡಾ. ಅಬ್ದುಲ್ ಕಯುಮ್ ಅವರು ಮೆಚ್ಚುಗೆಯ ಪ್ರಮಾಣ ಪತ್ರವನ್ನು ನೀಡಿದ್ದರು.
ಬಂಡೀಪುರ ಅರಣ್ಯ ಸಂರಕ್ಷಣೆಗೆ ನಿವೃತ್ತ ಸೈನಿಕರ ನಿಯೋಜನೆ?
ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಿ
ಸ್ಥಳೀಯ ಪ್ರತಿಭೆಗಳ ಕಾರ್ಯವೈಖರಿಗೆ ಹೊರ ರಾಜ್ಯದ ಅರಣ್ಯಾಧಿಕಾರಿಗಳು ಮೆಚ್ಚಿ ಪ್ರಮಾಣ ಪತ್ರ ನೀಡುವುದಾದರೆ ಇಲ್ಲಿನ ಅರಣ್ಯ ಇಲಾಖೆ ಏಕೆ ಈ ಪ್ರತಿಭೆಗಳ ಸಲಹೆಗಳನ್ನು ಪಡೆಯಬಾರದು ಮತ್ತು ಬಳಸಿಕೊಳ್ಳಬಾರದು ಎಂಬುದು ಇಲ್ಲಿನವರ ಪ್ರಶ್ನೆಯಾಗಿದೆ. ಈಗಾಗಲೇ ಬಂಡೀಪುರ ವ್ಯಾಪ್ತಿಯ ಕಾಡಂಚಿನಲ್ಲಿ ಚಿರತೆ, ಹುಲಿಗಳ ಹಾವಳಿಯಿಂದ ಜನ ತತ್ತರಿಸಿದ್ದಾರೆ. ಅವುಗಳನ್ನು ಹಿಡಿಯಲು ಅರಣ್ಯ ಇಲಾಖೆ ಶ್ರಮ ಪಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಹೀಗಿರುವಾಗ ಪ್ರಯಾಗ್, ನಾಗಾರ್ಜುನ ಮತ್ತು ಇಮ್ರಾನ್ ಅವರ ಸಲಹೆಗಳನ್ನು ಪಡೆಯಬಹುದಲ್ಲವೇ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.