ಶಿಕ್ಷಣ ಸಚಿವರ ಜಿಲ್ಲೆಯ ಸರ್ಕಾರಿ ಶಾಲೆಯ ಗೋಳು ಕೇಳಿ...
ಚಾಮರಾಜನಗರ, ಜುಲೈ 04: ಸರ್ಕಾರಿ ಶಾಲೆಗಳ ಕುರಿತಂತೆ ಮಾರುದ್ಧ ಭಾಷಣ ಮಾಡುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅವುಗಳ ಅಭಿವೃದ್ಧಿಯತ್ತ ಗಮನಹರಿಸದ ಕಾರಣದಿಂದಾಗಿ ಇವತ್ತು ಪಟ್ಟಣ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆ ಒಂದಷ್ಟು ಮೂಲಭೂತ ಸೌಲಭ್ಯವನ್ನು ಹೊಂದಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ಕಾಡಂಚಿನಲ್ಲಿರುವ ಶಾಲೆಗಳ ಸ್ಥಿತಿ ಅಯೋಮಯವಾಗಿರುವುದು ಕಂಡು ಬರುತ್ತಿದೆ.
ಇವತ್ತು ನಮ್ಮ ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೇಗಿದೆ ಎಂಬುದಕ್ಕೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನಲ್ಲಿರುವ ಜಕ್ಕಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ. ಈ ಶಾಲೆಯತ್ತ ಹಾಗೆ ಸುಮ್ಮನೆ ದೃಷ್ಠಿ ಬೀರಿದರೆ ಸಾಕು ಶಿಥಿಲಗೊಂಡ ಕಟ್ಟಡದಿಂದ ಆರಂಭವಾಗಿ ಅಲ್ಲಿನ ಎಲ್ಲ ಸಮಸ್ಯೆಗಳು ಕಣ್ಮುಂದೆ ಬಂದು ನಿಂತು ಬಿಡುತ್ತದೆ.
ದಾಖಲಾತಿ ಕಡಿಮೆ ಆದರೆ ಶಿಕ್ಷಕರಿಗೆ ಶಿಕ್ಷೆ: ಶಿಕ್ಷಣ ಇಲಾಖೆ ಎಚ್ಚರಿಕೆ
ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವ, ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಕಾರ್ಯಗಳು ನಡೆಯುತ್ತಿವೆ. ಇದೆಲ್ಲವೂ ಮೆಚ್ಚತಕ್ಕ ಕಾರ್ಯಗಳಾದರೂ ಶಾಲೆಗೆ ಬರುವ ವಿದ್ಯಾರ್ಥಿಗಳಿಗೂ ಕನಿಷ್ಠ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ಇವತ್ತು ಸರ್ಕಾರದ ನಿರ್ಲಕ್ಷ್ಯಕ್ಕೆ ಬಹಳಷ್ಟು ಸರ್ಕಾರಿ ಶಾಲೆಗಳು ಬಲಿಯಾಗಿವೆ.
ಶಿಕ್ಷಣ ಸಚಿವರ ಜಿಲ್ಲೆಯಲ್ಲಿ 'ಶಾಲೆಯ ಗೋಳು' ಕೇಳೋರಿಲ್ಲ!
ಸರ್ಕಾರ ಶಾಲೆಗೆ ಯಾಕೆ ಮಕ್ಕಳು ಬರೋಲ್ಲ?
ಶಾಲಾ ಕಟ್ಟಡವನ್ನು ಅಭಿವೃದ್ಧಿಗೊಳಿಸಿ, ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದ ಕಾರಣದಿಂದಾಗಿ ಪೋಷಕರು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದು, ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿರುವುದು ಕಂಡು ಬರುತ್ತಿದೆ.
ಶಾಲೆಯೊಳಗೆ ಕೂರುವುದಕ್ಕೂ ಧೈರ್ಯಬಾರದು!
ಜಕ್ಕಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ನಾಲ್ಕನೇ ತರಗತಿವರೆಗೆ ಇದ್ದು, ಇಲ್ಲಿ 16 ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲಾ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಮೇಲ್ಛಾವಣಿಯ ಸಿಮೆಂಟ್ ಕಿತ್ತು ಬೀಳುತ್ತಿದೆ. ಮಳೆ ಬಂದರೆ ಸೋರುತ್ತದೆ. ಇದರೊಳಗೆ ಮಕ್ಕಳನ್ನು ಕೂರಿಸಿ ಪಾಠ ಮಾಡಲು ಧೈರ್ಯ ಬಾರದೆ ಶಿಕ್ಷಕಿ ಕಟ್ಟಡದ ಹೊರಗೆ ಎಲ್ಲ ಮಕ್ಕಳನ್ನು ಜೊತೆಯಲ್ಲಿ ಕೂರಿಸಿ ಪಾಠ ಹೇಳಿಕೊಡುತ್ತಾರೆ. ಇನ್ನು ಈ ಶಾಲೆಯು ಏಕೋಪಾಧ್ಯಾಯ ಶಾಲೆಯಾಗಿರುವುದರಿಂದಾಗಿ ಒಂದರಿಂದ ನಾಲ್ಕನೆಯ ತರಗತಿವರೆಗಿನ ವಿದ್ಯಾರ್ಥಿಗಳನ್ನು ಒಟ್ಟಿಗೆ ಕೂರಿಸಿ ಪಾಠ ಮಾಡಲಾಗುತ್ತಿದೆ.
ಯಾವಾಗ ಕುಸಿದುಬೀಳುತ್ತದೋ ಎಂಬ ಭಯ
ಅಕ್ಷರ ದಾಸೋಹಕ್ಕಾಗಿ ನೂತನವಾಗಿ ನಿರ್ಮಿಸಿದ ಕೊಠಡಿ ಮಾತ್ರ ಸುಸ್ಥಿತಿಯಲ್ಲಿದ್ದು ಉಳಿದಂತೆ ಶಾಲಾ ಕಟ್ಟಡ ಇವತ್ತೋ ನಾಳೆಯೋ ಕುಸಿದು ಬೀಳುವಂತಿದೆ. ಒಂದೆಡೆ ಪಾಠಪ್ರವಚನ ಮತ್ತೊಂದೆಡೆ ಬಿಸಿಯೂಟದ ಜವಾಬ್ದಾರಿ ಹೀಗೆ ಎಲ್ಲವನ್ನು ಒಬ್ಬರೇ ಶಿಕ್ಷಕಿ ನಿಭಾಯಿಸಬೇಕಾಗಿದೆ. ಇನ್ನು ಶಾಲೆಯು ಕಾಡಂಚಿನಲ್ಲಿ ಇರುವುದರಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ವನ್ಯಪ್ರಾಣಿಗಳ ಭಯವೂ ಪೋಷಕರನ್ನು ಕಾಡುತ್ತಿದೆ. ಆರ್ಥಿಕವಾಗಿ ಸ್ಥಿತಿವಂತರು ತಮ್ಮ ಮಕ್ಕಳನ್ನು ದೂರದ ಶಾಲೆಗೆ ಕಳುಹಿಸಿದರೆ, ಬಡವರು ಮಾತ್ರ ಬೇರೆ ದಾರಿಯಿಲ್ಲದೆ ಈ ಶಾಲೆಗೆ ಕಳುಹಿಸುತ್ತಿದ್ದಾರೆ.
ಹೊರಗೆ ಕುಳಿತು ಪಾಠ ಕೇಳುತ್ತಿರುವ ಮಕ್ಕಳು
ಶಾಲಾ ಕಟ್ಟಡ ದುಸ್ಥಿತಿಯಲ್ಲಿದ್ದು, ದುರಸ್ತಿ ಮಾಡಿಕೊಡುವಂತೆ ಸ್ಥಳೀಯ ಗ್ರಾಮಸ್ಥರು ಗ್ರಾಪಂ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಸ್ಥಳಕ್ಕೆ ಬಿಇಒ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ದುರಸ್ತಿಗೊಳಿಸುವ ಭರವಸೆ ನೀಡಿ ಹೋದವರು ಮರಳಿ ಬರಲಿಲ್ಲ. ಇದರಿಂದಾಗಿ ಮಕ್ಕಳ ಪರದಾಟ ತಪ್ಪಿಲ್ಲ. ಬಿಸಿಲು, ಗಾಳಿ ಮಳೆಗೆ ಮಕ್ಕಳು ಹೊರಗೆ ಕುಳಿತು ಪಾಠ ಕೇಳುವುದು ನಿಂತಿಲ್ಲ.
ಜಿಲ್ಲೆಯವರೇ ಆದ ಶಿಕ್ಷಣ ಸಚಿವರು ಗಮನಹರಿಸುತ್ತಾರಾ?
ಚಾಮರಾಜನಗರ ಜಿಲ್ಲೆಯವರು, ಕೊಳ್ಳೇಗಾಲ ಕ್ಷೇತ್ರದಿಂದ ಗೆದ್ದು ಶಿಕ್ಷಣ ಸಚಿವರಾಗಿರುವ ಮಹೇಶ್ ಅವರು ಈ ಶಾಲೆಯತ್ತ ಗಮನಹರಿಸಿ ಶಾಲೆಯ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ಕಟ್ಟಿಕೊಡುವ ಮೂಲಕ ಕಾಡಂಚಿನ ಶಾಲೆಯ ಅಭಿವೃದ್ಧಿಗೆ ಮುಂದಾಗುತ್ತಾರಾ ಕಾದು ನೋಡಬೇಕಿದೆ.