ಚಾಮರಾಜನಗರ: ಇಲ್ಲಿಲ್ಲ ಹೊಸ ಕಟ್ಟಡದಲ್ಲಿ ಅಂಗನವಾಡಿ ಆರಂಭಿಸುವ ಭಾಗ್ಯ!
ಚಾಮರಾಜನಗರ, ಅಕ್ಟೋಬರ್ 19: ಸರ್ಕಾರ ಸುಸಜ್ಜಿತ ಮತ್ತು ಮೂಲಭೂತ ಸೌಕರ್ಯಗಳನ್ನೊಳಗೊಂಡ ಪರಿಸರ ಸ್ನೇಹಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದು, ಈಗಾಗಲೇ ಬಹಳಷ್ಟು ಕಡೆಗಳಲ್ಲಿ ಹೊಸ ಕಟ್ಟಡಗಳಲ್ಲೇ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ.
ಚಾಮರಾಜನಗರ: ಬೀದಿಗೆ ಬಿದ್ದ ಕುಟುಂಬದ ಅಳಲು ಕೇಳೋರಿಲ್ಲ!
ಆದರೆ ಅದ್ಯಾಕೋ ಗೊತ್ತಿಲ್ಲ, ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ನೂತನವಾಗಿ ಅಂಗನವಾಡಿ ಕಟ್ಟಡವನ್ನು ಕಟ್ಟಿದ್ದರೂ ಅದನ್ನು ಅಂಗನವಾಡಿ ಕಾರ್ಯಕರ್ತೆಗೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡದ ಕಾರಣ ಸುತ್ತಮುತ್ತ ಗಿಡಗಂಟಿ ಬೆಳೆಯತೊಡಗಿದ್ದು, ಮಕ್ಕಳು ಶಿಥಿಲಾವಸ್ಥೆಯಲ್ಲಿರುವ ಹಳೆಯಕಟ್ಟಡದಲ್ಲೇ ದಿನಕಳೆಯುವಂತಾಗಿದೆ. ಇವತ್ತಿಗೂ ರಾಜ್ಯದ ಹಲವು ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳು ಶಿಥಿಲಾವಸ್ಥೆಯ, ಮೂಲಭೂತ ಸೌಕರ್ಯಗಳಿಲ್ಲದೆ ಕಟ್ಟಡಗಳಲ್ಲೇ ನಡೆಯುತ್ತಿವೆ. ಹೀಗಿರುವಾಗ ಮಲ್ಲಯ್ಯನಪುರದಲ್ಲಿ ಮಾತ್ರ ಸುಸಜ್ಜಿತ ಕಟ್ಟಡವಿದ್ದರೂ ಇನ್ನೂ ಕೂಡ ಕಾರ್ಯ ನಿರ್ವಹಣೆಗೆ ಅವಕಾಶ ಮಾಡಿಕೊಡದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಬಹಳಷ್ಟು ವರ್ಷಗಳಿಂದ ಇಲ್ಲಿನ ಶ್ರೀರಾಮಮಂದಿರದ ಹಳೆಯ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರವನ್ನು ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳು ಇಲ್ಲ. ಮಕ್ಕಳಿಗೆ ಆಹಾರ ತಯಾರಿಸುವ ಅಡುಗೆ ಮನೆಯೂ ಇಲ್ಲ ಸದ್ಯ ದೇವಸ್ಥಾನದ ಒಂದು ಪಾರ್ಶ್ವದಲ್ಲಿ ಅಡುಗೆ ಸಿದ್ಧತೆಗಳನ್ನು ಮಾಡಿಕೊಂಡು ಹೇಗೋ ಕಷ್ಟದಲ್ಲಿ ನಡೆಸಿಕೊಂಡು ಹೋಗಲಾಗುತ್ತದೆ. ಮಕ್ಕಳಿಗೆ ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣದಿಂದ ಬಯಲನ್ನೇ ಆಶ್ರಯಿಸಿದ್ದಾರೆ. ಇಷ್ಟೇ ಅಲ್ಲದೆ, ಅಡುಗೆ ಮಾಡಲು ಬೇಕಾದ ನೀರಿಗೂ ಇಲ್ಲಿ ಬರ ಇರುವ ಕಾರಣ ಬೇರೆಡೆಯಿಂದ ಹೊತ್ತು ತರಬೇಕಾಗಿದೆ. ಇದುವರೆಗೆ ಮಕ್ಕಳಿಗೆ ಅಡುಗೆ ಮಾಡಿ ಬಡಿಸುವುದೇ ಸಾಹಸದ ಕೆಲಸವಾಗಿತ್ತು. ಈಗ ಅದರ ಜೊತೆಗೆ ಮಾತೃಪೂರ್ಣ ಯೋಜನೆಯೂ ಜಾರಿಯಾದ್ದರಿಂದ ಶಿಥಿಲಾವಸ್ಥೆಯ ಮತ್ತು ಸೂಕ್ತ ಸೌಲಭ್ಯವಿಲ್ಲದ ಕಟ್ಟಡದಲ್ಲಿ ಅಡುಗೆ ಮಾಡಲು ಹರ ಸಾಹಸ ಪಡುವಂತಾಗಿದೆ.
ಗ್ರಾಮಕ್ಕೊಂದು ಸುಸಜ್ಜಿತ ಅಂಗನವಾಡಿ ಕಟ್ಟಡದ ಅವಶ್ಯಕತೆಯನ್ನು ಅರಿತು ಹೊರವಲಯದಲ್ಲಿ ಅಂಗನವಾಡಿ ಕೇಂದ್ರ ನಡೆಸಲು ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಕಟ್ಟಡದ ಕಾಮಗಾರಿ ಮುಗಿದು ಎರಡು ತಿಂಗಳು ಕಳೆದಿದೆ. ಆದರೆ ಈಗ ನಡೆಯುತ್ತಿರುವ ಅಂಗನವಾಡಿ ಕೇಂದ್ರವನ್ನು ಇನ್ನೂ ಕೂಡ ಹೊಸಕಟ್ಟಡಕ್ಕೆ ಸ್ಥಳಾಂತರಿಸಿಲ್ಲ. ಈ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಿದ್ದು, ಪರಿಣಾಮ ಹೊಸ ಕಟ್ಟಡದ ಸುತ್ತಲೂ ಹುಲ್ಲು ಗಿಡಗಂಟಿಗಳು ಬೆಳೆದು ನಿಂತಿವೆ.
ಇನ್ಮುಂದೆಯೂ ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ ಹೊಸಕಟ್ಟಡ ಪಾಳು ಬೀಳುವ ಸಾಧ್ಯತೆಯಿದ್ದು, ಸುತ್ತಲೂ ಕಾಡು ಗಿಡಗಂಟಿ ಕಟ್ಟಡವನ್ನು ಆವರಿಸುವುದರಲ್ಲಿ ಸಂಶಯವಿಲ್ಲ. ಇನ್ನಾದರೂ ಊರಿನ ಜನಪ್ರತಿನಿಧಿಗಳಾಗಲೀ, ಸಂಬಂಧಿಸಿದ ಅಧಿಕಾರಿಗಳಾಗಲೀ ಕಟ್ಟಡತ್ತ ಗಮನಹರಿಸಿ ಅಂಗನಾಡಿ ಕೇಂದ್ರ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕಾಗಿದೆ.