ದೇಸಿ ಕಲೆಯ ಮೇಲಿನ ಪ್ರೀತಿ: ಗುರುವಿಲ್ಲದೆ ದೊಣ್ಣೆ ವರಸೆ ಕಲಿತ ವಿದ್ಯಾರ್ಥಿಗಳು
ಚಾಮರಾಜನಗರ, ನವೆಂಬರ್ 14: ಶಾಲಾ ಪಠ್ಯದಲ್ಲಿರುವ ನೋಡಿ ಕಲಿ ಎಂಬ ಮಾತಿಗೆ ಚಾಮರಾಜನಗರದಲ್ಲಿರುವ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ. ಇವರ ಕಲಿಕಾ ಶ್ರದ್ಧೆಗೆ, ಕಲೆಯ ಮೇಲಿನ ಪ್ರೀತಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿರಿಯರನ್ನು ನೋಡಿ ದೇಸಿ ಕಲೆಯನ್ನು ರೂಢಿಸಿಕೊಂಡ ವಿದ್ಯಾರ್ಥಿಗಳು ದೊಣ್ಣೆ ವರಸೆ ಕಲೆಯಲ್ಲಿ ಪ್ರಾವಿಣ್ಯತೆ ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಆರರಿಂದ ಏಳು ವಿದ್ಯಾರ್ಥಿಗಳು ತಮ್ಮೂರಿನ ಹಿರಿಯರು ಪ್ರದರ್ಶನ ಮಾಡುತ್ತಿದ್ದ ದೊಣ್ಣೆ ವರಸೆಯನ್ನು ಕಂಡು ಆಕರ್ಷಿತರಾಗಿ, ಏಕಲವ್ಯರಂತೆ ನಿತ್ಯ ತಾವೇ ಸ್ವತಃ ಅಭ್ಯಸಿಸಿ ಕಲಿತಿದ್ದಾರೆ. ಇದೀಗ ವಿದ್ಯಾರ್ಥಿಗಳು, ಹಿರಿಯರನ್ನು ಮೀರಿಸುವಂತೆ ತಾವು ನೋಡಿ ಕಲಿತ ಕಲೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ.
ಸಿದ್ದಯ್ಯನಪುರ ಗ್ರಾಮದಲ್ಲಿ ಏಳರಿಂದ ಎಂಟು ಮಂದಿ ಹಿರಿಯರು ಈಗಲೂ ಹಬ್ಬ-ಹರಿದಿನಗಳಲ್ಲಿ ಪಾರಂಪರಿಕ ಕಲೆಯಾದ ದೊಣ್ಣೆ ವರಸೆಯನ್ನು ಪ್ರದರ್ಶನ ಮಾಡುತ್ತಾರೆ. ಅದರಂತೆ, ಕಳೆದ ದೀಪಾವಳಿ ಹಬ್ಬದಲ್ಲಿ ಹಿರಿಯರು ದೊಣ್ಣೆ ಹಿಡಿದು ಗರಗರನೇ ತಿರುಗಿಸುತ್ತಿದ್ದ ಚಾಕಚಕತ್ಯತೆಗೆ ಮನಸೋತ ವಿದ್ಯಾರ್ಥಿಗಳಾದ ಚಿರಂತ್, ಜಯಸುಂದರ್, ಪ್ರೀತಂ, ಜೀವನ್, ಅರ್ಜುನ್ ಎಂಬ ಬಾಲಕರು ತಾವು ದೊಣ್ಣೆ ವರಸೆ ಕಲಿತಿದ್ದಾರೆ.

ಇನ್ನು, ಬಾಲಕರು ಶಾಲೆಯಲ್ಲಿ ಪ್ರದರ್ಶನ ಮಾಡುತ್ತಿದ್ದ ದೊಣ್ಣೆ ವರಸೆ ಕಂಡು ಖುಷಿಪಟ್ಟ 8 ನೇತರಗತಿ ವಿದ್ಯಾರ್ಥಿನಿಯರಾದ ರೀತುಪ್ರಿಯಾ, ಅಕ್ಷತಾ ಎಂಬವರು ತಾವೇನೂ ಕಡಿಮೆ ಇಲ್ಲಾ ಎಂಬಂತೆ ಬಾಲಕರನ್ನು ನೋಡಿ ದೊಣ್ಣೆ ವರಸೆ ಕಲಿತಿದ್ದಾರೆ.
ಈ ವಿದ್ಯಾರ್ಥಿಗಳು ಯಾವ ಗುರುವು ಇಲ್ಲದೆ ಯಾರಿಂದಲೂ ಅಭ್ಯಾಸ ಪಡೆದುಕೊಳ್ಳದೇ ದೊಣ್ಣೆ ವರಸೆ ಕಲಿತಿದ್ದಾರೆ. ಹಿರಿಯರ ಕಲೆಯನ್ನು ಕಂಡು ಅವರನ್ನು ಅನುಕರಿಸಿ, ರೂಢಿಸಿಕೊಂಡು, ಅದರಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಿದ್ದಾರೆ. ಎರಡು ಕೈಯಲ್ಲಿ ದೊಣ್ಣೆ ತಿರುಗಿಸುವುದು, ದೊಣ್ಣೆ ಸಹಾಯದಿಂದ ನಡೆಯುವುದು, ಸಮರಾಭ್ಯಾಸದಂತೆ ಪಟ್ಟು ಹಾಕುವುದನ್ನು ವಿದ್ಯಾರ್ಥಿಗಳು ಸಿದ್ಧಿಸಿಕೊಂಡಿದ್ದಾರೆ. ಸಿದ್ದಯ್ಯನಪುರ ಗ್ರಾಮದ ವಿದ್ಯಾರ್ಥಿಗಳ ಕಲಿಕೆ ಮೇಲಿನ ಶ್ರದ್ಧೆ ಹಾಗೂ ಆಸಕ್ತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.












Click it and Unblock the Notifications