ಈ ಗೂಬೆಯ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 3 ಲಕ್ಷ ರೂ.!
ಚಾಮರಾಜನಗರ, ಮಾರ್ಚ್ 09: ತಮಿಳುನಾಡಿಗೆ ಗೂಬೆ ಸಾಗಿಸಿ ಹಣ ಮಾಡಿಕೊಳ್ಳಲು ಮುಂದಾಗಿದ್ದ ಇಬ್ಬರನ್ನು ಚಾಮರಾಜನಗರ ಜಿಲ್ಲಾ ಅಪರಾಧ ವಿಭಾಗದ ಪೊಲೀಸರು ಬಂಧಿಸಿ ಗೂಬೆಯನ್ನು ರಕ್ಷಿಸಿದ್ದಾರೆ.
ವಾಮಾಚಾರಕ್ಕಾಗಿ ಈ ಗೂಬೆಗಳನ್ನು ಬಳಸುವುದರಿಂದ ಇದಕ್ಕೆ ಬೇಡಿಕೆ ಹೆಚ್ಚು! ಹಲವು ವರ್ಷಗಳಿಂದ ಗೂಬೆ, ಆಮೆ, ಎರಡು ತಲೆಯ ಹಾವನ್ನು ಸಾಗಿಸುವ ದಂಧೆ ನಡೆಯುತ್ತಲೇ ಇದೆ ಕೆಲವು ವರ್ಷದ ಹಿಂದೆ ಕೊಡಗಿನಲ್ಲಿ ಈ ದಂಧೆ ಕಂಡು ಬಂದಿತ್ತಲ್ಲದೆ, ಬಿಳಿಗೂಬೆಯನ್ನು ಅಕ್ರಮವಾಗಿ ಇಟ್ಟು ಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದರು.
2 ಲಕ್ಷ ರುಪಾಯಿ ಮೌಲ್ಯದ ಒಂದು ಗೂಬೆ ಸಾಗಿಸುತ್ತಿದ್ದ ಮೂವರು ಅಂದರ್
ಇದೀಗ ಮಲೆಮಹದೇಶ್ವರ ವನ್ಯಧಾಮದಲ್ಲಿ ಗೂಬೆಯನ್ನು ಹಿಡಿದು ತಮಿಳುನಾಡಿನ ರಾಜಕಾರಣಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಹನೂರು ತಾಲೂಕಿನ ಮಿಣ್ಯಂ ಗ್ರಾಮದ ಶಂಬೇಗೌಡ ಹಾಗೂ ಕೆಂಪಣ್ಣ ಎಂಬಿಬ್ಬರು ಸಿಕ್ಕಿಬಿದ್ದಿದ್ದು. 3ಲಕ್ಷ ರೂ.ಗೆ ಗೂಬೆಯನ್ನು ಮಾರಾಟ ಮಾಡಲು ಯತ್ನಿಸಿದ್ದರು ಎಂಬುದು ಬೆಳಕಿಗೆ ಬಂದಿದೆ.
ಇವರಿಬ್ಬರು ಇದಕ್ಕೂ ಮೊದಲು ಈ ದಂಧೆಯಲ್ಲಿ ತೊಡಗಿದ್ದರಾ ಅಥವಾ ಇದೇ ಮೊದಲಾ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ. ಆದರೆ ರಾಮಾಪುರ ವನ್ಯಜೀವಿ ವಲಯದ ಮಂಚಾಪುರ ಗ್ರಾಮದ ಹಿಂಭಾಗದ ಗುಡ್ಡದಲ್ಲಿ ಗೂಬೆ ಹಿಡಿದಿದ್ದ ಇವರು ಅದನ್ನು ಜೋಪಾನವಾಗಿಟ್ಟುಕೊಂಡು ತಮಿಳುನಾಡಿಗೆ ಕೊಂಡೊಯ್ದು ಮಾರಾಟ ಮಾಡಲು ನಿರ್ಧರಿಸಿ ಕೊಂಡೊಯ್ಯುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಪರಾಧ ವಿಭಾಗದ ಸರ್ಕಲ್ ಇನ್ಸ್ಪೆಕ್ಟರ್ ರವೀಂದ್ರ, ಸಿಬ್ಬಂದಿ ಸ್ವಾಮಿ, ರವಿ, ಸಿದ್ದಮಲ್ಲಶೆಟ್ಟಿ ಅವರನ್ನೊಳಗೊಂಡ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ವಿಚಾರಣೆಗೊಳಪಡಿಸಿದಾಗ ಅದೃಷ್ಟದ ಗೂಬೆಯೆಂದು ನಂಬಿಸಿ ತಮಿಳುನಾಡಿನ ಮೂಲದವರಿಗೆ 3 ಲಕ್ಷ ರೂಪಾಯಿಗೆ ಮಾರಾಟ ಮಾಡಲು ತೆರಳುತ್ತಿದ್ದುದಾಗಿ ಅವರು ಹೇಳಿದ್ದಾರೆ. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಆಧುನಿಕ ಯುಗದಲ್ಲಿಯೂ ವನ್ಯಪ್ರಾಣಿಗಳನ್ನಿಟ್ಟುಕೊಂಡು ವಂಚಿಸುವವರು ಇದ್ದಾರಲ್ಲ ಎನ್ನುವುದೇ ಅಚ್ಚರಿಯ ವಿಷಯವಾಗಿದೆ.