ಕಾಡಂಚಿನ ಮಗುವಿನಹಳ್ಳಿಯಲ್ಲಿ ಸಮಸ್ಯೆಗಳದ್ದೇ ಕಾರುಬಾರು!
ಚಾಮರಾಜನಗರ, ಸೆಪ್ಟೆಂಬರ್ 4: ಬಂಡೀಪುರ ಅಭಯಾರಣ್ಯದ ಕಾಡಂಚಿನ ಗ್ರಾಮವಾದ ಮಗುವಿನಹಳ್ಳಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಇಲ್ಲಿನ ಜನ ಹಲವು ಸಮಸ್ಯೆಗಳಿಂದ ಬಳಲುತ್ತಾ ಜೀವನ ಸಾಗಿಸುತ್ತಿದ್ದಾರೆ.
ಬಹುತೇಕ ಮನೆ ಗುಡಿಸಲಿನಿಂದ ಕೂಡಿದ್ದು, ಕೆಲವು ಮನೆಗಳಿಗೆ ಸರ್ಕಾರದಿಂದ ಶೌಚಾಲಯ ನಿರ್ಮಿಸಲಾಗಿದ್ದರೂ ನೀರಿನ ಸಂಪರ್ಕ ನೀಡದ ಕಾರಣ ಬಯಲಿಗೆ ತೆರಳುವುದು ಅನಿವಾರ್ಯವಾಗಿದೆ. ವಿದ್ಯುತ್ ಇಲ್ಲದೆ ಸೀಮೆ ಎಣ್ಣೆ ದೀಪವನ್ನೇ ಬಳಸುವಂತಾಗಿದೆ. ಸ್ವಚ್ಛತೆ ಕೊರತೆಯಿಂದ ಸಾಂಕ್ರಾಮಿಕ ರೋಗದ ಭಯ ಗ್ರಾಮದಲ್ಲಿ ಕಾಡುತ್ತಿದೆ.
ಯಳಂದೂರಿನ ಅಗರ ಕೆರೆಯೀಗ ಸಮಸ್ಯೆಗಳ ಆಗರ!
ಹಂಗಳ ಗ್ರಾಮಪಂಚಾಯಿತಿ ವ್ಯಾಪ್ತಿಗೊಳಪಡುವ ಮಗುವಿನಹಳ್ಳಿ ಗ್ರಾಮವು ಕಾಡಂಚಿನಲ್ಲಿದ್ದು, ನಿರ್ಲಕ್ಷ್ಯಕ್ಕೊಳಗಾಗಿದೆ ಎಂಬುದು ಇಲ್ಲಿಗೆ ಭೇಟಿ ನೀಡಿದ ಪ್ರತಿಯೊಬ್ಬರ ಗಮನಕ್ಕೂ ಬಾರದಿರದು. ಇಲ್ಲಿ ಸುಮಾರು 1 ಸಾವಿರದಷ್ಟು ಜನಸಂಖ್ಯೆಯಿದ್ದು, ಬಹುತೇಕ ಕೂಲಿ ಕಾರ್ಮಿಕರು ಹಾಗೂ ಹಿಂದುಳಿದ ವರ್ಗದವರೇ ವಾಸಿಸುತ್ತಿದ್ದಾರೆ. ಬಡತನದಲ್ಲೇ ಕಾಲ ಕಳೆಯುವ ಇವರು ಗುಡಿಸಲು ಹಾಗೂ ದುಸ್ಥಿತಿಯಲ್ಲಿರುವ ಮನೆಯಲ್ಲೇ ವಾಸಿಸುತ್ತಿದ್ದಾರೆ. ಕುಡಿಯುವ ನೀರಿನ ತೊಂಬೆಗಳ ಬಳಿ ಸ್ವಚ್ಛಗೊಳಿಸದ ಕಾರಣ ತ್ಯಾಜ್ಯ ಸಂಗ್ರಹಗೊಂಡು ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.
ನಕ್ಸಲರು ನುಸುಳುವ ಶಂಕೆ: ಚಾಮರಾಜನಗರ ಗಡಿಯಲ್ಲಿ ಕಟ್ಟೆಚ್ಚರ
ಭಾರೀ ಮಳೆ ಬಂದಾಗಲೆಲ್ಲ ಇಲ್ಲಿನ ಜನ ಭಯಭೀತರಾಗಿ ಬಿಡುತ್ತಾರೆ. ಕಾರಣ ಅರಣ್ಯದಿಂದ ಹರಿದು ಬರುವ ನೀರೆಲ್ಲ ಈ ಗ್ರಾಮದಲ್ಲಿ ಸಂಗ್ರಹವಾಗಿ ಸಂಪರ್ಕವೇ ಸಿಗದಂತಾಗಿ ಬಿಡುತ್ತದೆ. ಈ ವೇಳೆ ಕೆಲವೊಮ್ಮೆ ವಿದ್ಯುತ್ ಕೈಕೊಟ್ಟರೆ ಮೂರ್ನಾಲ್ಕು ದಿನವಾದರೂ ಬರುವುದೇ ಇಲ್ಲ. ಗ್ರಾಮಕ್ಕೆ ನಿಯಮಿತವಾಗಿ ಬರುವ ಸರ್ಕಾರಿ ಬಸ್ನ್ನೇ ಎಲ್ಲರೂ ಅವಲಂಬಿಸಿದ್ದಾರೆ. ಅದು ಬಿಟ್ಟರೆ ಪರದಾಟ ತಪ್ಪಿದ್ದಲ್ಲ.
ಆಸ್ಪತ್ರೆಯೂ ಇಲ್ಲ!
ಗರ್ಭಿಣಿಯರು ಹಾಗೂ ತುರ್ತು ಚಿಕಿತ್ಸೆಯ ಅಗತ್ಯವಿರುವವರು ದುಬಾರಿ ಬೆಲೆತೆತ್ತು ಆಟೋ ಅಥವಾ ಕಾರಿನಲ್ಲಿ 6 ಕಿಮೀ ದೂರದ ಹಂಗಳದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ 20 ಕಿಮೀ ದೂರದ ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹೋಗಬೇಕಾಗುತ್ತದೆ.
ಇಂದಿಗೂ ಬಯಲು ಮಲವಿಸರ್ಜನೆ ನಿಂತಿಲ್ಲ!
ಅಂಗನವಾಡಿ ಕೇಂದ್ರದಲ್ಲಿ ಇನ್ನೂ ಶೌಚಾಲಯ ನಿರ್ಮಾಣ ಮಾಡದೆಯಿರುವುದರಿಂದ ಇಲ್ಲಿನ ಮಕ್ಕಳಿಗೆ ಬಹಿರ್ದೆಸೆಗೆ ಬಯಲು ಹಾಗೂ ಬೇಲಿಯ ಆಶ್ರಯ ಪಡೆಯಬೇಕಾಗಿರುವುದು ಮಾತ್ರ ದುರಂತವೇ ಸರಿ. ಗ್ರಾಮವು ಕಾಡಂಚಿನಲ್ಲಿರುವುದರಿಂದ ಕಾಡು ಪ್ರಾಣಿಗಳ ಭಯವೂ ಇವರನ್ನು ಕಾಡುತ್ತಿದೆ.
ಮೂಲಭೂತ ಸೌಕರ್ಯವೆಂಬ ಮರೀಚಿಕೆ!
ಈ ಹಿಂದೆ ನಡೆದ ಲೋಕಸಭಾ ಚುನಾವಣೆ ಸಂದರ್ಭ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಿ ಎಂದು ಆಗ್ರಹಿಸಿ ಚುನಾವಣೆಯನ್ನು ಬಹಿಷ್ಕರಿಸಲು ಗ್ರಾಮಸ್ಥರು ಮುಂದಾಗಿದ್ದರಾದರೂ ಮನವೊಲಿಸಿ ಸೌಲಭ್ಯ ಕಲ್ಪಿಸಿಕೊಡುವ ಭರವಸೆ ನೀಡಲಾಗಿತ್ತು. ಆದರೆ ಅದು ಬರೀ ಭರವಸೆಯಾಗಿಯೇ ಉಳಿದಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಸುಲಭ ಶೌಚಾಲಯಕ್ಕೆ ಪ್ರೋತ್ಸಾಹ
ಶೌಚಾಲಯ ಮತ್ತು ಮನೆ ನಿರ್ಮಾಣದ ಕುರಿತಂತೆ ಮಾಹಿತಿ ನೀಡಿದ ಹಂಗಳ ಗ್ರಾಪಂ ಪಿಡಿಓ ಕುಮಾರಸ್ವಾಮಿ ಅವರು ಗ್ರಾಮದ ಬುಡಕಟ್ಟು ಜನಾಂಗದ ಫಲಾನುಭವಿಗಳಿಗೆ 10 ಸಾವಿರ ರೂ. ವೆಚ್ಚದಲ್ಲಿ ಸುಲಭ ಶೌಚಾಲಯಗಳನ್ನು ನಿರ್ಮಿಸಿಕೊಡಲಾಗಿದ್ದು, ಉಳಿದವರು ಮುಂದೆ ಬಂದರೆ ಅವರಿಗೂ ಶೌಚಾಲಯ ನಿರ್ಮಿಸಲು ನೆರವು ನೀಡಲಾಗುವುದು. ವಸತಿ ಯೋಜನೆಯಲ್ಲಿ ಉಳಿದವರಿಗೆ ಮನೆಕಟ್ಟಿಕೊಳ್ಳಲು ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.