ಚಾಮರಾಜನಗರದಲ್ಲಿ ಸೇತುವೆಗೆ ಬಸ್ ಡಿಕ್ಕಿ: ನಿರ್ವಾಹಕ ಸಾವು
ಚಾಮರಾಜನಗರ, ಜನವರಿ 30: ಬಸ್ ಚಾಲನೆ ಮಾಡುತ್ತಿದ್ದ ಚಾಲಕ ನಿದ್ದೆ ಮಂಪರಿಗೆ ಜಾರಿದ ಕಾರಣ ಬಸ್ ಸೇತುವೆಗೆ ಡಿಕ್ಕಿ ಹೊಡೆದು ನಿರ್ವಾಹಕ ಸಾವನ್ನಪ್ಪಿ, ಇಬ್ಬರು ಪ್ರಯಾಣಿಕರು ಗಂಭೀರ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಜ.29ರಂದು ಬೆಳಿಗ್ಗೆ ನಡೆದಿದೆ.
ಕೇರಳದ ಸಾರಿಗೆ ಸಂಸ್ಥೆಗೆ ಸೇರಿದ್ದ ಬಸ್ ಬೆಳಿಗ್ಗೆ 5ರ ಸಮಯದಲ್ಲಿ ಮೈಸೂರಿನಿಂದ ಕಲ್ಲಿಕೋಟೆಗೆ ಗುಂಡ್ಲುಪೇಟೆ ಮೂಲಕ ಸಾಗುತ್ತಿತ್ತು. ಭೀಮನಬೀಡು ಗ್ರಾಮದ ಬಳಿ ಸಾಗುತ್ತಿದ್ದಾಗ ಚಾಲಕ ನಿದ್ದೆಯ ಮಂಪರಿನಲ್ಲಿದ್ದುದರಿಂದ ನಿಯಂತ್ರಣ ತಪ್ಪಿ ಬದಿಯಲ್ಲಿದ್ದ ಸೇತುವೆಯ ಮೇಲೆ ಹತ್ತಿದೆ. ಇದರಿಂದ ಬಸ್ ನ ಚಕ್ರಗಳು ಕಳಚಿಬಿದ್ದಿದೆ. ಆದರೆ ಅದೃಷ್ಟವಶಾತ್ ಬಸ್ಸು ಸೇತುವೆಯ ತಡೆಗೋಡೆ ತಡೆದು ನಿಂತಿದ್ದು, ಪರಿಣಾಮ ಕಂದಕಕ್ಕೆ ಬಿದ್ದಿಲ್ಲ. ಈ ವೇಳೆ ಬಸ್ಸಿನ ಮುಂಭಾಗ ಕುಳಿತಿದ್ದ ಕಂಡಕ್ಟರ್ ಸಿಜು(35) ಎಂಬುವರ ತಲೆ ಹಾಗೂ ಎದೆಗೆ ಪೆಟ್ಟು ಬಿದ್ದಿದ್ದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.

ಅಲ್ಲದೆ, ಮುಂದಿನ ಸೀಟುಗಳಲ್ಲಿ ಕುಳಿತಿದ್ದ ಕುಶಾಲನಗರದ ಶ್ರೀನಿವಾಸ್ ಹಾಗೂ ಬೆಂಗಳೂರಿನ ವರ್ಗೀಸ್ ಎಂಬುವರಿಗೆ ತೀವ್ರ ಪೆಟ್ಟು ಬಿದ್ದಿದ್ದು ಅವರಿಗೆ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications