ರಾಜಕುಮಾರನ ಅಸಹಜ ಸಾವಿನ ತನಿಖೆ ಅಪೂರ್ಣ
ಏಪ್ರಿಲ್ 2 ರಂದು ಅಸುನೀಗಿದ ಬಂಡೀಪುರದ ಪ್ರಿನ್ಸ್ ಹುಲಿಯ ಸಾವಿನ ತನಿಖೆ ಇನ್ನೂ ಅಪೂರ್ಣವಾಗಿದ್ದು, ಹುಲಿಯ ಸಾವಿನ ಸುತ್ತ ಹಲವು ಸಂಶಯಗಳು ಹುಟ್ಟಿಕೊಂಡಿವೆ.
ಚಾಮರಾಜನಗರ, ಏಪ್ರಿಲ್ 14: ಗುಂಡ್ಲುಪೇಟೆ ಬಳಿಯ ಬಂಡೀಪುರ ಅಭಯಾರಣ್ಯದಲ್ಲಿ ರಾಜ ಗಾಂಭೀರ್ಯದಿಂದ ನಡೆಯುತ್ತ, ಪ್ರವಾಸಿಗರ, ಪ್ರಾಣಿಪ್ರಿಯರ ಆಕರ್ಷಣೆಯ ಕೇಂದ್ರವಾಗಿದ್ದ 14 ವರ್ಷದ ರಾಜಕುಮಾರ (ಪ್ರಿನ್ಸ್) ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳುವುದೂ ಕಷ್ಟ.
ಏಪ್ರಿಲ್ 2 ರಂದು ಹುಲಿ ಪ್ರಿನ್ಸ್ ನ ಕಳೆಬರ ಬಂಡೀಪುರ ರಾಷ್ಟ್ರೀಯ ಉದ್ಯಾನದ ಹುಲಿ ಯೋಜನೆಯ ಕುಂದಕೆರೆ ವಲಯಕ್ಕೆ ಸೇರಿದ ಲೊಕ್ಕೆರೆ ಬೀಟ್ ನಲ್ಲಿ ಪತ್ತೆಯಾಗುತ್ತಿದ್ದಂತೆಯೇ ಪ್ರಾಣಿಪ್ರಿಯರಿಗೆಲ್ಲ ಒಬ್ಬ ಆಪ್ತ ಸ್ನೇಹಿತನನ್ನು ಕಳೆದುಕೊಂಡಷ್ಟು ನೋವಾಗಿತ್ತು. ಸತ್ತ ಹುಲಿಯ ಮುಖಭಾಗ ಛಿದ್ರವಾದಂತಿತ್ತು. ಅದು ಸತ್ತು ಕೆಲದಿನಗಳಾಗಿದ್ದರಿಂದ ಹಂದಿಗಳು ಅಥವಾ ಇನ್ಯಾವುದೋ ಪ್ರಾಣಿ ಮುಖಭಾಗವನ್ನು ತಿಂದು ಹಾಕಿರಬಹುದೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದರು.[ಬಂಡೀಪುರದ ಪ್ರಿನ್ಸ್ ಹುಲಿ ಇನ್ನು ನೆನಪು ಮಾತ್ರ!]

ಅವತ್ತು ಆ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ದುರ್ವಾಸನೆ ಬೀರುತ್ತಿದ್ದ ಹುಲಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಸುಟ್ಟು ಹಾಕಲಾಗಿತ್ತು. ಪ್ರಿನ್ಸ್ ಸತ್ತು ಆಗಲೇ ಅರ್ಧ ತಿಂಗಳೇ ಕಳೆದು ಹೋಗಿದೆ. ಪ್ರಿನ್ಸ್ ಸತ್ತು ಹೋದ ಬಳಿಕ ಬಂಡಿಪುರ ಅರಣ್ಯದಲ್ಲಿ ಮೌನ ಮನೆ ಮಾಡಿದೆ. ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿದೆ.
ಹಾಗೆನೋಡಿದರೆ ಪ್ರಿನ್ಸ್ ಹುಲಿಯಿಂದಲೇ ಅಭಯಾರಣ್ಯಕ್ಕೆ ಕೋಟ್ಯಂತರ ರೂ. ಆದಾಯ ಬರುತ್ತಿತ್ತು. 14 ವರ್ಷದ ಈ ಹುಲಿ ಕಳೆದ 12 ವರ್ಷಗಳಿಂದ ಬಂಡೀಪುರ ಅರಣ್ಯದಲ್ಲಿ ದೊರೆಯಾಗಿ ಮೆರೆಯುತ್ತಿತ್ತು. ತನ್ನದೇ ಆದ ನಡಿಗೆ ಗತ್ತು ಗೈರತ್ತಿನಿಂದ ಗಮನಸೆಳೆಯುತ್ತಿದ್ದ ಈ ಹುಲಿಯ ಸಾವು ಇದೀಗ ಹಲವು ಸಂಶಯಗಳಿಗೆ ಕಾರಣವಾಗಿದೆ.[ಜಂಗಲ್ ಡೈರಿ: ಪ್ರಾಣಿ ಜಗತ್ತಿನ ಉಳಿವು-ಅಳಿವಿನ ನಿತ್ಯ ಹೋರಾಟ]

ಬಂಡೀಪುರ ಅರಣ್ಯದಲ್ಲಿ ಕಳ್ಳ ಬೇಟೆಗಾರರ ಜಾಲವಿದೆ ಎನ್ನಲಾಗುತ್ತಿದ್ದು, ಅರಣ್ಯಕ್ಕೆ ಬೆಂಕಿ ಹಾಕುತ್ತಿರುವ ದುಷ್ಕರ್ಮಿಗಳು, ಪ್ರಾಣಿಗಳನ್ನು ಬೇಟೆಯಾಡಿ ಅದರ ಚರ್ಮ ಮತ್ತು ಉಗುರುಗಳನ್ನು ಕಳ್ಳಸಾಗಣೆ ಮಾಡುವ ಕಳ್ಳರೇ ಇದನ್ನು ಹತ್ಯೆಗೈದಿರಬಹುದಾ ಎಂಬ ಸಂಶಯ ವ್ಯಕ್ತವಾಗಿದೆ.
ಇಂತಹ ಸಂಶಯ ಹುಟ್ಟಲು ಪ್ರಿನ್ ಹುಲಿಯ ಮುಖ ಛಿದ್ರವಾಗಿರುವುದೇ ಕಾರಣವಾಗಿದೆ. ಕೆಲವರು ಕಾಡುಹಂದಿಯನ್ನು ಬೇಟೆಯಾಡಲು ಮಾಂಸದೊಂದಿಗೆ ಸಿಡಿಮದ್ದು ಇಡುತ್ತಿದ್ದು ಅದನ್ನು ಕಚ್ಚಿದ ಸಂದರ್ಭ ಸ್ಪೋಟಿಸಿ ಸಾವನ್ನಪ್ಪುತ್ತವೆ. ಅದರಂತೆ ಪ್ರಿನ್ಸ್ ಹುಲಿಯೂ ಸತ್ತಿರಬಹುದು ಎಂಬ ಸಂಶಯ ಕಾಡುತ್ತಿದೆ. ಅದರ ಮುಖ ಛಿದ್ರವಾಗಲು ಇದು ಕೂಡ ಕಾರಣವಾಗಿರಬಹುದು ಎಂದು ಸಂಶಯಿಸಲಾಗಿದೆ. ಈ ಬಗ್ಗೆ ತನಿಖೆ ಇನ್ನೂ ಅಪೂರ್ಣವಾಗಿಯೇ ಉಳಿದಿತ್ತು, ಸತ್ಯ ಹೊರಬರಬೇಕೆಂದರೆ ಸೂಕ್ತ ತನಿಖೆ ನಡೆಯಬೇಕಿದೆ.












Click it and Unblock the Notifications