ಕಾವೇರಿ ವಿವಾದ: ಗಡಿ ಭಾಗದ ಜನರ ಭಯ, ಬದುಕು ಹಾಗೂ ಬವಣೆ
ಚಾಮರಾಜನಗರ, ಸೆಪ್ಟೆಂಬರ್ 16: ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗದ ಗುಂಡ್ಲುಪೇಟೆ ತಾಲೂಕಿನ ಕೆಕ್ಕನಳ್ಳ, ತಮಿಳುನಾಡಿನ ತೆಪ್ಪಗಾಡು ಪ್ರದೇಶದಲ್ಲಿ ನೆಲೆಸಿರುವ ಜನರ ಸ್ಥಿತಿ ಅತಂತ್ರವಾಗಿದೆ. ಎರಡೂ ರಾಜ್ಯಗಳ ಒಡನಾಟದಲ್ಲಿರುವ ಇಲ್ಲಿನ ಜನ ಕಾವೇರಿ ಕಿಚ್ಚಿನಲ್ಲಿ ಬೇಯುತ್ತಿದ್ದಾರೆ.
ಗಲಾಟೆ, ಬಂದ್, ಪ್ರತಿಭಟನೆ ಮೊದಲಾದ ಘಟನೆಗಳು ನಡೆಯುತ್ತಿರುವುದರಿಂದ ತೆಪ್ಪಗಾಡು ಮೂಲಕ ಸಾಗುವ ವಾಹನಗಳು ಸಂಚಾರ ನಿಲ್ಲಿಸಿವೆ. ಕೆಎಸ್ಆರ್ ಟಿಸಿ ಬಸ್ ಕೂಡ ತಮಿಳುನಾಡಿಗೆ ಹೋಗುತ್ತಿಲ್ಲ. ಅಲ್ಲಿಂದ ಇತ್ತ ಕಡೆಗೆ ಬಸ್ ಗಳು ಬರುತ್ತಿಲ್ಲ. ಗಡಿಭಾಗದ ತಪಾಸಣಾ ಕೇಂದ್ರದಲ್ಲಿಯೇ ಬಸ್ಸುಗಳನ್ನು ನಿಲ್ಲಿಸಿ ಪ್ರಯಾಣಿಕರು ಮಾತ್ರ ಗಡಿ ದಾಟಿ ಬಸ್ಸುಗಳ ಬದಲಾವಣೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.[ತಮಿಳು ಉತ್ಪನ್ನಗಳಿಗೆ ಬೆಂಕಿ : ಚಾಮರಾಜನಗರದಲ್ಲಿ ಕಟ್ಟೆಚ್ಚರ]
ಆದ್ದರಿಂದ ಗಡಿಭಾಗದ ಸೇತುವೆಯನ್ನು ದಾಟಿ, ರಾಜ್ಯದ ಒಳಗೆ ಪ್ರವೇಶ ಮಾಡುತ್ತಿದ್ದಾರೆ. ಗಡಿಯಲ್ಲಿ ಎರಡು ರಾಜ್ಯದ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದರೂ ಯಾವಾಗ ಏನಾಗುತ್ತದೆಯೋ ಎಂಬ ಭಯ ನಿರ್ಮಾಣವಾಗಿದೆ.[ತಮಿಳುನಾಡಿನಲ್ಲಿ ಲಾರಿಗೆ ಬೆಂಕಿ: ಪಾರಾಗಿ ಬಂದ ಚಾಲಕ]
ಸರ್ಕಾರಿ ಬಸ್ಸುಗಳಲ್ಲಿ ಬರುವ ಪ್ರಯಾಣಿಕರಿಗಾಗಿಯೇ ಎರಡು ರಾಜ್ಯದ ಗಡಿಭಾಗವಾದ ಕರ್ನಾಟಕದ ಕೆಕ್ಕನಳ್ಳ ಹಾಗೂ ತಮಿಳುನಾಡಿನ ತೆಪ್ಪಗಾಡು ತಪಾಸಣಾ ಕೇಂದ್ರದ ಸಮೀಪದಲ್ಲಿಯೇ ತಾತ್ಕಾಲಿಕ ಬಸ್ಸು ನಿಲ್ದಾಣ ಮಾಡಲಾಗಿದ್ದು, ಪೊಲೀಸರ ಸರ್ಪಗಾವಲಲ್ಲಿ ಪ್ರಯಾಣಿಕರು ಗಡಿ ದಾಟುವ ವ್ಯವಸ್ಥೆ ಕಲ್ಪಿಸಲಾಗಿದೆ.