ತಮಿಳು ಉತ್ಪನ್ನಗಳಿಗೆ ಬೆಂಕಿ : ಚಾಮರಾಜನಗರದಲ್ಲಿ ಕಟ್ಟೆಚ್ಚರ
ಚಾಮರಾಜನಗರ, ಸೆಪ್ಟೆಂಬರ್ 14 : ಚಾಮರಾಜನಗರ ಜಿಲ್ಲೆಯಲ್ಲಿ ಕರ್ನಾಟಕ ತಮಿಳುನಾಡಿನ ಗಡಿಯಲ್ಲಿರುವ ಚೆಕ್ಪೋಸ್ಟ್ನಲ್ಲಿ ಯಾವುದೇ ವಾಹನಗಳನ್ನು ಸಂಚಾರ ಮಾಡದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಚಾಮರಾಜನಗರ ಮಾರ್ಗವಾಗಿ ಕರ್ನಾಟಕ ತಮಿಳುನಾಡಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 209ರಲ್ಲಿರುವ ಪುಣಜನೂರು ಚೆಕ್ಪೋಸ್ಟ್ನಲ್ಲಿ ತಮಿಳುನಾಡಿನಿಂದ ಬರುವ ಕರ್ನಾಟಕಕ್ಕೆ ಸೇರಿದ ವಾಹನಗಳನ್ನು ಮಾತ್ರ ಬರುತ್ತಿದ್ದು, ತಮಿಳುನಾಡಿನ ನೊಂದಣಿ ಇರುವ ವಾಹನಗಳ ಸಂಚಾರಕ್ಕೆ ತಡೆ ಮಾಡಲಾಗುತ್ತಿದೆ.

ಕರ್ನಾಟಕದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ತಮಿಳುನಾಡಿನಿಂದ ಯಾವುದೇ ವಾಹನಗಳು ರಾಜ್ಯದೊಳಗೆ ಬರದಂತೆ ಕ್ರಮ ವಹಿಸಿದೆ. ಇದರಿಂದಾಗಿ ಉಭಯ ರಾಜ್ಯಗಳ ಗಡಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ತಮಿಳುನಾಡಿನ ಉತ್ಪನ್ನಗಳು ಭಸ್ಮ : ತಮಿಳುನಾಡಿಗೆ ಕಾವೇರಿ ನೀರನ್ನು ಬಿಟ್ಟಿರುವುದನ್ನು ಹಾಗೂ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಕನ್ನಡ ಸಂಘಟನೆಗಳ ಕಾರ್ಯಕರ್ತರು ತಮಿಳುನಾಡಿನ ಉತ್ಪನ್ನಗಳನ್ನು ರಸ್ತೆಯಲ್ಲಿ ಸುರಿದು ಸುಟ್ಟು ಮಂಗಳವಾರ ಪ್ರತಿಭಟನೆ ನಡೆಸಿದರು.

ಚಾಮರಾಜನಗರ ಭುವನೇಶ್ವರಿ ವೃತ್ತದಲ್ಲಿ ಸಮಾವೇಶಗೊಂಡ ಕನ್ನಡ ಚಳವಳಿಗಾರರು, ತಮಿಳುನಾಡಿನ ಉತ್ಪನ್ನಗಳಾದ ಕಮಾಂಡೋ ಸೋಪು, ರಾಮ್ ರಾಜ್ ಬಟ್ಟೆಗಳು, ತಮಿಳು ಸಿಡಿ ಸೇರಿದಂತೆ ಹಲವಾರು ಉತ್ಪನ್ನಗಳನ್ನು ಸುಟ್ಟು ಹಾಕಿದರು.
ಮತ್ತೊಂದೆಡೆ ಚಾಮರಾಜನಗರ ಜಿಲ್ಲೆಯ ಅಂತರರಾಜ್ಯ ಗಡಿ ಭಾಗ ಪುಣಜನೂರು ಚಕ್ ಪೋಸ್ಟ್ ಬಳಿ ಕನ್ನಡ ಚಳವಳಿಗಾರರು ಪ್ರತಿಭಟನೆ ನಡೆಸಿ ಉರುಳು ಸೇವೆ ಮಾಡಿದರು. ತಮಿಳುನಾಡಿಗೆ ಸೇರಿದ ವಾಹನಗಳನ್ನು ತಡೆಗಟ್ಟಿ ಆಕ್ರೋಶ ವ್ಯಕ್ತಪಡಿಸಿ, ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ, ತಮಿಳು ನಾಮಫಲಕವನ್ನು ಧ್ವಂಸ ಮಾಡಿದರು.












Click it and Unblock the Notifications