ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೇ ನಮ್ಮ ಪರವಿಲ್ಲ: ಸಚಿವ ವೆಂಕಟೇಶ್ ಅಸಮಾಧಾನ
ಚಾಮರಾಜನಗರ, ನವೆಂಬರ್, 02: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಲಿದ್ದು, ಕಾಂಗ್ರೆಸ್ ನಾಯಕರು ಕೂಡ ಕೇಂದ್ರ ಸರ್ಕಾರದ ವಿರುದ್ಧ ಕೆಂಡಕಾರುತ್ತಿದ್ದಾರೆ. ಹಾಗೆಯೇ ಇಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕದ ಮೇಲೆ ದ್ವೇಷ ಇಟ್ಟುಕೊಂಡಿದೆ ಎಂದು ವಾಗ್ದಾಳಿ ನಡೆಸಿರು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕದ ಮೇಲೆ ದ್ವೇಷ ಇಟ್ಟುಕೊಂಡಿದೆ. ಯಾವಾಗಲೂ ತಮಿಳುನಾಡಿಗೆ ನೀರು ಬಿಡಿ ಎಂದು ಹೇಳುತ್ತಿದೆ. ಪ್ರಾಧಿಕಾರ ನಮ್ಮ ಅಫೀಲ್ ಕೇಳುತ್ತಲೇ ಇಲ್ಲ. ಪ್ರಾಧಿಕಾರ ನಮ್ಮ ಪರ ಇಲ್ಲ ಅಂತಾ ನನಗೆ ಅನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೊದಲಿಂದಲೂ ಸಹ ಪ್ರಾಧಿಕಾರ ನಮ್ಮ ಪರ ನಿಂತಿಲ್ಲ, ಇದನ್ನೆಲ್ಲ ನೋಡಿದರೆ ಕರ್ನಾಟಕದ ಮೇಲೆ ಪ್ರಾಧಿಕಾರ ದ್ವೇಷ ಸಾಧಿಸುತ್ತಿದೆ ಎನಿಸುತ್ತದೆ. ನಮಗೆ ನೀರಿಲ್ಲ, ಇನ್ನೂ ತಮಿಳುನಾಡಿಗೆ ಎಲ್ಲಿಂದ ನೀರು ಬಿಡುವುದು. ಸಿಎಂ ಕೂಡ ಅದನ್ನೇ ಹೇಳಿದ್ದಾರೆ. ನಮ್ಮ ರೈತರನ್ನು ಬಲಿ ಕೊಡಲ್ಲ ಅಂತ ಸಿಎಂ ಹೇಳಿದ್ದಾರೆ ಎಂದು ತಿಳಿಸಿದರು.
ಮಾದಪ್ಪನಿಗೆ ವಿಶೇಷ ಪೂಜೆ
ಇವತ್ತು ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದದ್ದು, ರಾಜ್ಯದ ಜನರಿಗೆ ಶುಭವಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ರಾಜ್ಯದಲ್ಲಿ ಬರಗಾಲ ಕಳೆದು, ಉತ್ತಮ ಮಳೆಯಾಗಬೇಕು. ಆ ಮೂಲಕ ಕಾವೇರಿ ಸಂಕಷ್ಟ ಸಹ ಬಗೆಹರಿಯಲಿ ಎಂದು ಮಾದಪ್ಪನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು. ಇದೇ ವೇಳೆ, ಮಲೆಮಹದೇಶ್ವರ ಬೆಟ್ಟದ ಪ್ರಾಧಿಕಾರದ ವತಿಯಿಂದ ಕಾಡೊಳಗಿನ ಗ್ರಾಮಗಳಿಗೆ ವಾಹನ ಸೌಕರ್ಯ ಕಲ್ಪಿಸುವ ಜನವನ ಸಾರಿಗೆಗೆ ಸಚಿವ ವೆಂಕಟೇಶ್ ಚಾಲನೆ ನೀಡಿದರು.
ಬೇವಿನ ಸೊಪ್ಪು, ಸಿಹಿ ಪ್ರದರ್ಶಿಸಿ ಪ್ರತಿಭಟನೆ
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಕನ್ನಡಪರ ಹೋರಾಟಗಾರರು ಚಾಮರಾನಗರದಲ್ಲಿ ಕಳೆದ 50 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ನಿನ್ನೆ ಬೇವಿನಸೊಪ್ಪು, ಸಿಹಿ ತಿಂಡಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರು.
ನಗರದ ಶ್ರೀಚಾಮರಾಜೇಶ್ಚರ ಉದ್ಯಾನವನದ ಮುಂಭಾಗದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಭುವನೇಶ್ವರಿ ವೃತ್ತದ ತನಕ ರ್ಯಾಲಿ ನಡೆಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಬೇವಿನಸೊಪ್ಪು, ಸಿಹಿ ಪ್ರದರ್ಶಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನೀರು ನಿರ್ವಹಣಾ ಮಂಡಳಿ ತಮಿಳುನಾಡಿಗೆ ಸಿಹಿ ಕೊಟ್ಟು, ಕರ್ನಾಟಕದ ಪಾಲಿಗೆ ಕಹಿ ಕೊಟ್ಟು ಅನ್ಯಾಯ ಮಾಡಿದೆ ಎಂದು ಹೋರಾಟಗಾರರು ಆಕ್ರೋಶ ಹೊರಹಾಕಿದರು. ಕನ್ನಡ ರಾಜ್ಯೋತ್ಸವ ಸುವರ್ಣ ಮಹೋತ್ಸವದ ಸಿಹಿ ಒಂದೆಡೆಯಾದರೆ, ತಮಿಳುನಾಡಿಗೆ ನೀರು ಹರಿಯುತ್ತಿರುವುದು ಕನ್ನಡಿಗರ ಪಾಲಿಗೆ ಕಹಿಯಾಗಿದೆ ಎಂದು ಕಿಡಿಕಾರಿದರು.












Click it and Unblock the Notifications