ಮುದ್ದೆ ಊಟಕ್ಕೆ ಮಾರುಹೋಗಿರುವ ಬ್ರಿಟಿಷ್ ಸಂಜಾತ
ಚಾಮರಾಜನಗರ, ನವೆಂಬರ್ 18 : ರಾಷ್ಟ್ರಪಿತ ಮಹಾತ್ಮಾ ಗಾಂಧಿಯಿಂದ ಪ್ರೇರಣೆಗೊಂಡು ಕಾಲ್ನಡಿಗೆಯಲ್ಲಿಯೇ ಇಡೀ ಭಾರತವನ್ನು ನೋಡಬೇಕೆಂಬ ಆಸೆಯಿಂದ ಪಯಣ ಆರಂಭಿಸಿರುವ ಬ್ರಿಟಿಷ್ ಸಂಜಾತರೊಬ್ಬರು ಈಗ ಚಾಮರಾಜನಗರಕ್ಕೆ ಆಗಮಿಸಿದ್ದಾರೆ.
ಅವರು ಬ್ರಿಟಿಷ್ ಪ್ರಜೆ ಒಲೆವರ್ ಜೇಮ್ಸ್ ಹಂಟರ್ ಸ್ಮಾರ್ಟ್, ವಯಸ್ಸು ಮೂವತ್ನಾಲ್ಕು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇಡೀ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತಲು ಆರಂಭಿಸಿದ್ದಾರೆ. ಏಪ್ರಿಲ್ 24ರಂದು ಕಾಶ್ಮೀರದಿಂದ ಪಯಣ ಆರಂಭಿಸಿದ್ದಾರೆ.

ಈಗಾಗಲೆ 5080 ಕಿ.ಮೀ. ಕ್ರಮಿಸಿರುವ ಒಲೆವರ್ ಅವರು ಸದಾ ಹಸನ್ಮುಖಿ. ಕರ್ನಾಟಕ ನೆಚ್ಚಿನ ಖಾದ್ಯವಾಗಿರುವ ರಾಗಿ ಮುದ್ದೆ ಒಲೆವರ್ ಅವರ ಅಚ್ಚುಮೆಚ್ಚಿನ ತಿನಿಸು. ಈ ತಿನಿಸಿನಲ್ಲಿ ಏನೋ ಸೊಗಡಿದೆ, ವಿಶಿಷ್ಟವಾದ ಸ್ವಾದವಿದೆ ಎಂದು ಹೇಳುತ್ತಾರೆ.
ಅವರನ್ನು ಚಾಮರಾಜನಗರದ ದೇವಾಲಯವೊಂದರ ಮುಂಭಾಗದಲ್ಲಿ ಸಮಾಜ ಸೇವಕ ಸುರೇಶ್ ಅವರು ಹಾರ ಹಾಕಿ, ಶಾಲು ಹೊದಿಸಿ ಸನ್ಮಾನಿಸಿ, ಮುಂದಿನ ಪಯಣಕ್ಕೆ ಶುಭಾಶಯ ಹೇಳಿದರು. ಪ್ರತಿದಿನ 35 ಕಿ.ಮೀ. ಪಯಣಿಸುತ್ತ ಹಾದಿಯಲ್ಲಿ ಸಿಗುವ ಎಲ್ಲ ಸುಂದರ ತಾಣಗಳನ್ನು ಸಂದರ್ಶಿಸುತ್ತ ಸಾಗುತ್ತಾರೆ.
ಕರ್ನಾಟಕದಲ್ಲಿ ಹಲವಾರು ಸುಂದರ ಪ್ರದೇಶಗಳನ್ನು ನೋಡಿರುವ ಅವರು, ಇಲ್ಲಿಯ ಸಂಸ್ಕೃತಿ, ಪರಿಸರಕ್ಕೂ ಮಾರುಹೋಗಿದ್ದಾರೆ. ಇಲ್ಲಿನ ತಿಂಡಿ ತಿನಿಸುಗಳನ್ನು ಮೆಚ್ಚಿಕೊಂಡಿರುವ ಅವರು, ಕರ್ನಾಟಕದುದ್ದಕ್ಕೂ ಇರುವ ದೇವಾಲಯಗಳ ಸೌಂದರ್ಯಕ್ಕೂ ಮರುಳಾಗಿದ್ದಾರೆ.
ಇಂಗ್ಲೆಂಡಿನಲ್ಲಿ ಅವರು ಬಿಎಸ್ಸಿ ಜಿಯಾಗ್ರಫಿ ಅಧ್ಯಯನ ಮಾಡಿದ್ದು, ಭಾರತದ ಜನಜೀವನ, ನೈಸರ್ಗಿಕ ಸೌಂದರ್ಯ, ವೈವಿಧ್ಯಮಯ ಸಂಸ್ಕೃತಿ, ರಾಜ್ಯರಾಜ್ಯಗಳಲ್ಲೂ ಇರುವ ಭಾಷೆಯ ವೈಶಿಷ್ಟ್ಯವನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಅವರ ಪಯಣ ಸುಖಕರವಾಗಿರಲಿ.












Click it and Unblock the Notifications