ಪಾಲಾರ್ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ: ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ಶಂಕೆ
ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿನ ಪಾಲರ್ ಚೆಕ್ ಪೋಸ್ಟ್ ಸಮೀಪದ ಅಡಿ ಪಾಲರ್ ಎಂಬಲ್ಲಿ ರಾಜ(45) ಎನ್ನುವಾತನ ಶವ ಅರೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಚಾಮರಾಜನಗರ, ಫೆಬ್ರವರಿ 18: ಪಾಲಾರ್ ನದಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು, ಫೆಬ್ರವರಿ 14ರ ರಾತ್ರಿ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಪರಾರಿಯಾಗಿದ್ದ ಬೇಟೆಗಾರನ ಶವ ಎನ್ನುವ ಶಂಕೆ ವ್ಯಕ್ತವಾಗಿದೆ.
ತಮಿಳುನಾಡಿನ ಗೋವಿಂದಪಾಡಿ ಗ್ರಾಮದ ರಾಜ(45) ಮೃತ ವ್ಯಕ್ತಿ. ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿನ ಪಾಲರ್ ಚೆಕ್ ಪೋಸ್ಟ್ ಸಮೀಪದ ಅಡಿ ಪಾಲರ್ ಎಂಬಲ್ಲಿ ಈತನ ಶವ ಅರೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತಮಿಳುನಾಡು ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ರಾಜನ ಶವ ಪತ್ತೆಯಾಗಿದ್ದು, ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆ ರವಾನಿಸಿದ್ದಾರೆ. ತಮಿಳುನಾಡಿನ ವೆಲ್ಲಿತಿರುಪ್ಪೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೇಟೆಗಾರರು ಸಾಮಾನ್ಯವಾಗಿ ನುರಿತ ಈಜುಪಟುಗಳಾಗಿದ್ದು ಪರಾರಿಯಾಗುವಾಗ ಕಾಲಿಗೆ ಗುಂಡು ಬಿದ್ದು ಇಲ್ಲವೇ ಕಾಲಿಗೆ ಬೇರೆ ರೀತಿಯಲ್ಲಿ ಗಾಯಗೊಂಡು ಈಜಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ನದಿಯಲ್ಲಿ ಸಿಕ್ಕ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಘಟನೆ ಸಂಬಂಧ ಕೆಲವರ ವಿಚಾರಣೆ ಮಾಡಲಾಗಿದೆ ಎಂದು ತಮಿಳುನಾಡಿನ ಪೊಲೀಸ್ ಮೂಲಗಳು ತಿಳಿಸಿವೆ.
ಗುಂಡಿನ ಚಕಮಕಿ ನಡೆದ ಬಳಿಕ ನದಿ ದಡದಲ್ಲಿ ಸಿಕ್ಕಿದ್ದ ಎರಡು ಜಿಂಕೆ ಶವಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿನಲ್ಲಿ ಸುಟ್ಟಿದ್ದಾರೆ. ಗುಂಡಿನ ಚಕಮಕಿ ಸಂಬಂಧ ಈಗಾಗಲೇ ಮಲೆಮಹದೇಶ್ವರ ಬೆಟ್ಟದಲ್ಲಿ ನಾಲ್ವರ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನೆಲೆ ಏನು..?
ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಕಳ್ಳಬೇಟೆಗಾರರ ನಡುವೆ ಗುಂಡಿನ ಚಕಮಕಿ ನಡೆದಿರುವ ಆತಂಕಕಾರಿ ಘಟನೆ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಡಿ ಪಾಲಾರ್ ಎಂಬಲ್ಲಿ ನಡೆದಿತ್ತು .ಜಿಂಕೆ ಬೇಟೆಯಾಡಿ ತೆರಳುತ್ತಿದ್ದ, ಅಂದಾಜು ನಾಲ್ವರು ಕಳ್ಳಬೇಟೆಗಾರರು ಹಾಗೂ ಮೂವರು ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಬೇಟೆಗಾರರು ನದಿಗೆ ಹಾರಿ ಅರಣ್ಯಾಧಿಕಾರಿಗಳ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದರು. ಬೇಟೆಗಾರರ ತಲೆ ಹಾಕಿದ್ದ ಬ್ಯಾಟರಿಗಳು ಹಾಗೂ ನದಿಯ ತಟದಲ್ಲಿ ಜಿಂಕೆಯ ಶವಗಳು ಪತ್ತೆಯಾಗಿದ್ದು ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ದೂರು ದಾಖಲಾಗಿತ್ತು.












Click it and Unblock the Notifications