ಪ್ರಬಲ ನಾಯಕರ ವಿರುದ್ದ ಇಡಿ ಅಸ್ತ್ರ: ಧ್ರುವನಾರಾಯಣ ಆರೋಪ
ಚಾಮರಾಜನಗರ, ಮೇ 27: ಬಿಜೆಪಿಯು ದ್ವೇಷದ ರಾಜಕಾರಣ ಮಾಡುತ್ತಿದ್ದು ಪ್ರಬಲ ನಾಯಕರ ವಿರುದ್ಧ ಇಡಿ, ಐಟಿ ಎಂಬ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ದೋಷಾರೋಪ ಪಟ್ಟಿ ಸಲ್ಲಿರುವ ಬಗ್ಗೆ ಪ್ರತಿಕ್ರಿಯಿದ ಅವರು, ಬಿಜೆಪಿ ದೇಶಾದ್ಯಂತ ದ್ವೇಷದ ರಾಜಕಾರಣ ಮಾಡುತ್ತಿದೆ. ಐಡಿ, ಇಡಿ ಗಳನ್ನೆಲ್ಲ ದುರುಪಯೋಗ ಮಾಡಿಕೊಂಡು ಪ್ರಬಲ ವಿರೋಧ ಪಕ್ಷದ ನಾಯಕರನ್ನೆಲ್ಲ ಬಗ್ಗುಬಡಿಯಲು ಯತ್ನಸುತ್ತಿದ್ದಾರೆ. ಇಂತಹ ಭಂಡ ಸರ್ಕಾರವನ್ನು ಯಾರೂ ನೋಡಲು ಸಾಧ್ಯವಿಲ್ಲ ಎಂದು ಕಿರಿಕಾಡಿದರು.
ವಿಜಯಪುರ ಶಾಸಕ ಬಸವರಾಜ ಪಾಟೀಲ್ ಯತ್ನಾಳ್, 2500 ಕೋಟಿ ರೂ. ನೀಡಿದರೆ ಬಿಜೆಪಿಯಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು ಎಂದು ಆರೋಪಿಸಿದರು. ಅವರನ್ನು ವಿಚಾರಣೆ ಮಾಡುವ ಕೆಲಸವನ್ನು ತನಿಖಾ ಸಂಸ್ಥೆಗಳು ಮಾಡಲಿಲ್ಲ. ಆದರೆ ಪಿಎಸ್ಐ ಹಗರಣವನ್ನು ಬೆಳಕಿಗೆ ತಂದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ನೀಡಲಾಗುತ್ತೆ ಎಂದು ಕಿಡಿಕಾರಿದರು.

ಡಿಕೆಶಿ ಕಾನೂನು ಹೋರಾಟ ಮಾಡಲಿದ್ದು ದೋಷಮುಕ್ತರಾಗುತ್ತಾರೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಉದ್ಯೋಗ ಕಳೆದುಕೊಂಡಿದ್ದೇ ಹೆಚ್ಚು:
ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ನಿನ್ನೆಗೆ ಎಂಟು ವರ್ಷಗಳಾಗಿದೆ. ಆದರೆ ಅವರ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯಾಗಿದ್ದರೆ ಈವರೆಗೆ 16 ಕೋಟಿ ಜನರಿಗೆ ಕೆಲಸ ಸಿಗಬೇಕಿತ್ತು. ಆದರೆ ಶೇ.30 ರಷ್ಟು ಉದ್ಯೋಗವನ್ನೇ ಕಳೆದುಕೊಂಡರು ಎಂದು ಅವರು ಟೀಕಿಸಿದರು.
ಪ್ರಧಾನಿ ಮೋದಿಯವರು ಉದ್ಯೋಗ ಕೇಳಿದ ವಿದ್ಯಾವಂತ ಯುವಜನರಿಗೆ ಪಕೋಡ ಮತ್ತು ಚಹಾ ಮಾರಿ ಎಂದಿದ್ದರು. ಈಗ ಯುವಜನತೆ ಮೋದಿಯವರಿಗೆ ಕೇಳಬೇಕಾಗಿದೆ, ನಾವು ಮತವನ್ನು ಯಾರಿಗೆ ಹಾಕ ಬೇಕೆಂದು. ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ, ವಿಶ್ವವಿದ್ಯಾಲಯ ನೇಮಕಾತಿಯಲ್ಲಿ ಭ್ರಷ್ಟಾಚಾರ, ಗುತ್ತಿಗೆದಾರರಿಂದ ಕಮಿಷನ್ ಹಣಕ್ಕಾಗಿ ಬೇಡಿಕೆ ಹೀಗೆ ಬಿಜೆಪಿ ಭ್ರಷ್ಟಾಚಾರವನ್ನೇ ಹೊದ್ದು ಮಲಗಿದೆ. ಪ್ರಗತಿಪರ ರಾಜ್ಯವಾಗಿದ್ದ ಕರ್ನಾಟಕವನ್ನು ನಂ.1 ಭ್ರಷ್ಟ ರಾಜ್ಯ ಮಾಡಿದ್ದು ಬಿಜೆಪಿ ಎಂದು ಆರೋಪಿಸಿದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications