ಈಗ ಚಾಮರಾಜನಗರ ಜಿಲ್ಲೆ ಮೇಲಿದೆ ಬಿಜೆಪಿ ಕಣ್ಣು!
ಚಾಮರಾಜನಗರ, ಸೆಪ್ಟೆಂಬರ್ 11: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದು ಎರಡು ವರ್ಷಗಳು ಕಳೆದಿವೆ. ಚುನಾವಣೆಯಲ್ಲಿ ಮ್ಯಾಜಿಕ್ ಸಂಖ್ಯೆಯನ್ನು ಪಡೆಯಲು ಸಾಧ್ಯವಾಗದ ಕಾರಣ ಬಹಳಷ್ಟು ಸರ್ಕಸ್ ಮಾಡಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ.
ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶಗಳೇನೆಂದರೆ, ಈಗಾಗಲೇ ಚುನಾವಣೆ ಮುಗಿದಿದೆ, ಇನ್ನೇನಿದ್ದರೂ ಮೂರು ವರ್ಷ ಕಳೆಯಬೇಕು. ಅಲ್ಲಿ ತನಕ ಸುಮ್ಮನಿದ್ದರಾಯಿತು ಎಂದು ಬಹುತೇಕ ರಾಜಕೀಯ ಪಕ್ಷಗಳು ನಿದ್ದೆಗೆ ಜಾರಿವೆ. ಅವುಗಳು ಮತ್ತೆ ಎದ್ದು ಬರುವುದು ಚುನಾವಣೆಯ ಸಮಯ ಸಮೀಪಿಸಿದಾಗಲೇ ಎಂಬುದು ಇದುವರೆಗಿನ ಪಕ್ಷಗಳ ನಡವಳಿಕೆಯಿಂದ ಗೊತ್ತಾಗುತ್ತಿದೆ.
ಈ ಸರ್ಕಾರ ಮುಗಿಯೋವರೆಗೂ ಯಡಿಯೂರಪ್ಪ ಅವರೇ ಸಿಎಂ
ಆದರೆ ಈಗಾಗಲೇ ಹಳೇ ಮೈಸೂರು ವ್ಯಾಪ್ತಿಯಲ್ಲಿ ನಿಧಾನವಾಗಿ ಬಿಜೆಪಿ ಒಂದೊಂದೇ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಆ ಪ್ರದೇಶದಲ್ಲಿ ತನ್ನ ಚಟುವಟಿಕೆಯನ್ನು ಆರಂಭಿಸಿದೆ. ಮಂಡ್ಯದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ನಾರಾಯಣಗೌಡ ಅವರು ಕೆ.ಆರ್.ಪೇಟೆಯಿಂದ ಗೆಲುವು ಸಾಧಿಸಿದ ಬಳಿಕ ಅಲ್ಲಿ ಬಿಜೆಪಿ ಪಕ್ಷದ ಚಟುವಟಿಕೆ ಗರಿಗೆದರಿದೆ. ಎಸ್ಸಿ, ಎಸ್ಟಿ ಮೋರ್ಚಾ, ಮಹಿಳಾ ಮೋರ್ಚಾಗಳು ಅಲ್ಲಿ ಸಕ್ರಿಯವಾಗಿವೆ.
ಮೌನಕ್ಕೆ ಶರಣಾದ ಶಾಸಕ ಎನ್.ಮಹೇಶ್
ಇದೀಗ ಚಾಮರಾಜನಗರದ ಕಡೆಗೆ ಹೆಚ್ಚಿನ ಒತ್ತು ನೀಡಿರುವ ಬಿಜೆಪಿ ನಾಯಕರು ಅಲ್ಲಿ ಪಕ್ಷದ ಬೆಳವಣಿಗೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಲು ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ ಸದ್ಯ ಬಿಜೆಪಿ ಸಂಸದ ಮತ್ತು ಶಾಸಕರಿದ್ದು, ಬಿಎಸ್ ಪಿಯಿಂದ ಗೆದ್ದ ಎನ್.ಮಹೇಶ್ ಅವರು ಪಕ್ಷದ ಆಂತರಿಕ ಕಚ್ಚಾಟದಿಂದಾಗಿ ಮೌನಕ್ಕೆ ಶರಣಾಗಿದ್ದಾರೆ. ಬಹುಶಃ ಮತ್ತೆ ಇವರು ಬಿಎಸ್ ಪಿಯಿಂದ ಸ್ಪರ್ಧಿಸುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಏಕೆಂದರೆ ಇವರು ಪಕ್ಷದಿಂದಲೇ ದೂರವಾಗಿ ತಮ್ಮ ಪಾಡಿಗೆ ತಾವು ಎಂಬಂತೆ ಇದ್ದಾರೆ.
ಇಂದು ಬಿಎಸ್ ಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಗೆಲುವು ಪಡೆದಿದ್ದರೆ, ಅದರಲ್ಲಿ ಎನ್.ಮಹೇಶ್ ಅವರ ಅಗಾಧ ಶ್ರಮವಿದೆ. ಹತ್ತಾರು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದಾರೆ. ರಾಜ್ಯದಾದ್ಯಂತ ಸಂಘಟನೆ ಮಾಡಿದ್ದಾರೆ. ಆದರೆ ಎಲ್ಲಿಯೂ ಖಾತೆ ತೆರೆಯಲು ಸಾಧ್ಯವಾಗದೆ ಇದ್ದಾಗ ತಮ್ಮ ಕ್ಷೇತ್ರ ಕೊಳ್ಳೇಗಾಲದಿಂದಲೇ ಸ್ಪರ್ಧಿಸಿ ಮೊದಲ ಬಾರಿಗೆ ಗೆಲುವು ಕಂಡಿದ್ದಾರೆ. ಇವರು ಮುಂದಿನ ಚುನಾವಣೆ ವೇಳೆಗೆ ಯಾವ ರೀತಿಯ ನಿರ್ಧಾರ ಪ್ರಕಟಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.
ಸಂಘಟನೆ ಪ್ರಕ್ರಿಯೆ ನಿಲ್ಲಿಸದ ಬಿಜೆಪಿ
ಒಂದೆಡೆ ಕೊರೊನಾ ಮಹಾಮಾರಿ... ಮತ್ತೊಂದೆಡೆ ಪ್ರವಾಹ... ಅದರಾಚೆಗೆ ನೂರೆಂಟು ಸಮಸ್ಯೆಗಳಿಂದ ನರಳಾಡುತ್ತಿದ್ದರೂ ಅದೆಲ್ಲವನ್ನು ಆಚೆಗೆ ತಳ್ಳಿ ಪಕ್ಷದ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಬಿಜೆಪಿಯಲ್ಲಿ ಕಂಡು ಬರುತ್ತಿದೆ.
"ವರುಣಾ ಕ್ಷೇತ್ರಕ್ಕೆ ಐದು ಬಾರಿ ಭೇಟಿ ನೀಡಿದ್ದೇನೆ ಅಂದಮೇಲೆ ನೀವೇ ಅರ್ಥ ಮಾಡಿಕೊಳ್ಳಿ''
ಚಾಮರಾಜನಗರದಲ್ಲಿ ಮಾಜಿ ಶಾಸಕ ಹಾಗೂ ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿರುವ ಜಿ.ಎನ್.ನಂಜುಂಡಸ್ವಾಮಿ ಅವರು ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಮುಂದಾಗಿದ್ದು, ತಳಮಟ್ಟದಿಂದ ಬಿಜೆಪಿಯನ್ನು ಸಂಘಟನೆ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಳಮಟ್ಟದಲ್ಲಿ ಕಾರ್ಯರ್ಕತರಿಗೂ ಜವಾಬ್ದಾರಿಯನ್ನು ನೀಡಿದ್ದು, ಮೊದಲಿಗೆ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವಂತೆ ಸೂಚನೆ ನೀಡಿದ್ದಾರೆ.
ಗ್ರಾಮಾಂತರ ಪ್ರದೇಶವೇ ಟಾರ್ಗೆಟ್
ಇದೀಗ ಗ್ರಾಮಾಂತರ ಪ್ರದೇಶವನ್ನು ಟಾರ್ಗೆಟ್ ಮಾಡಲಾಗಿದ್ದು, ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗಷ್ಟೆ ಬಿಜೆಪಿ ಕೊಳ್ಳೇಗಾಲ ಗ್ರಾಮಾಂತರ ಮಂಡಲದ ಪ್ರಥಮ ಕಾರ್ಯಕಾರಣಿ ಸಭೆಯನ್ನು ನಡೆಸಿ ಪಕ್ಷದ ಸಂಘಟನೆ ಕುರಿತಂತೆ ಇತರೆ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಹಲವು ರೀತಿಯ ಸಲಹೆ ಸೂಚನೆಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಪಕ್ಷದ ವತಿಯಿಂದ ವಿವಿಧ ಹಂತದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಅವರೆಲ್ಲರಿಗೂ ಜನರ ಮನೆ ಮನೆಗೆ ತೆರಳಿ ಮತದಾರರ ಆಪೇಕ್ಷೆಯಂತೆ ಕೆಲಸ ಮಾಡಿ, ಗ್ರಾ.ಪಂ. ಮಟ್ಟದಲ್ಲಿ ಅವರ ಕುಂದು ಕೊರತೆಯನ್ನು ಬಗೆಹರಿಸುವ ಮೂಲಕ ಬೂತ್ ಮಟ್ಟದಲ್ಲಿ ಕೆಲಸ ಮಾಡಿ, ಪ್ರತಿ ಮತದಾರರನ್ನು ತಾವುಗಳು ಭೇಟಿ ಮಾಡಿ ಬಿಜೆಪಿ ಪರವಾದ ಒಲವು ವ್ಯಕ್ತವಾಗುವಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
Recommended Video
ಏಕೆ ಗೆಲ್ಲಿಸಬೇಕೆಂಬುದನ್ನು ಮನದಟ್ಟು ಮಾಡಿ
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಈ ಸಂದರ್ಭದಲ್ಲಿ ಪಕ್ಷ ಸಂಘಟನೆ ಮಾಡಲು ಹೆಚ್ಚಿನ ಸಹಕಾರ ದೊರೆಯುತ್ತದೆ. ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಜೊತೆಗೆ ಬಿಜೆಪಿಯನ್ನು ಏಕೆ ಗೆಲ್ಲಿಸಬೇಕು ಎಂಬ ವಿಚಾರಗಳ ಬಗ್ಗೆ ಅವರಿಗೆ ಮನದಟ್ಟು ಮಾಡಿಕೊಟ್ಟರೆ, ಗ್ರಾ.ಪಂ., ತಾ.ಪಂ. ಜಿ.ಪಂ. ಹಾಗೂ ವಿಧಾನ ಸಭೆ ಚುನಾವಣೆಗಳಲ್ಲಿ ನಮ್ಮ ಪಕ್ಷ ಗೆಲ್ಲಲು ಸಾಧ್ಯವಾಗುತ್ತದೆ ಎಂಬ ಟಿಪ್ಸ್ ನೀಡಿದ್ದಾರೆ ಎನ್ನಲಾಗಿದೆ.
ಈ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಪ್ರಸಾದ್, ಕಾರ್ಯಕಾರಣಿ ಸದಸ್ಯ ಡಾ.ಎ.ಆರ್.ಬಾಬು ಮೊದಲಾದವರೆಲ್ಲರೂ ಬಿಜೆಪಿ ಪಕ್ಷ ಸಂಘಟನೆಗೊಂಡು ಬಲಿಷ್ಠವಾಗಿದ್ದರೆ ನಾವೆಲ್ಲರೂ ಅಧಿಕಾರ ಪಡೆದುಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ತಳ ಹಂತದಿಂದಲೇ ಬಿಜೆಪಿ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಗೆಲುವಿಗೆ ಪಣ ತೊಡೋಣ ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಒಟ್ಟಾರೆ ಹೇಳುವುದಾದರೆ ಚಾಮರಾಜನಗರದತ್ತ ಈಗಾಗಲೇ ಬಿಜೆಪಿ ನಾಯಕರು ಕಣ್ಣಿಟ್ಟಿದ್ದು, ಪಕ್ಷವನ್ನು ಯಾವ ರೀತಿಯಲ್ಲಿ ಇಲ್ಲಿ ಸಂಘಟನೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.