ಸ್ವಚ್ಛತಾ ಆಂದೋಲನ ಗಾಳಿಗೆ ತೂರಿದ ಬರಗಿ ಗ್ರಾಪಂ
ಚಾಮರಾಜನಗರ, ಫೆಬ್ರವರಿ 04 : ದೇಶದಾದ್ಯಂತ ಸ್ವಚ್ಛತಾ ಆಂದೋಲನ ಸದ್ದಿಲ್ಲದೆ ಭರದಿಂದ ಸಾಗುತ್ತಿದ್ದರೆ, ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮ ಪಂಚಾಯತ್ ಗೆ ಮಾತ್ರ ತಮಗೇನು ಸ್ವಚ್ಛತೆಗೂ ಸಂಬಂಧವೇ ಇಲ್ಲ ಎಂಬಂತೆ ಮೌನಕ್ಕೆ ಶರಣಾಗಿದೆ.
ಇದರ ಪರಿಣಾಮವಾಗಿ ಎಲ್ಲೆಂದರಲ್ಲಿ ಕಸ, ಅಶುಚಿತ್ವ ತಾಂಡವಾಡುತ್ತಿದ್ದು, ಸಾಂಕ್ರಾಮಿಕ ರೋಗಗಳಿಗೆ ಭವ್ಯ ಸ್ವಾಗತ ಮಾಡುವಂತಿದೆ. ಬರಗಿ ಗ್ರಾಮಕ್ಕೆ ಕಾಲಿಟ್ಟವರಿಗೆ ಸ್ವಚ್ಛಗೊಳ್ಳದ ಚರಂಡಿ, ಎಲ್ಲೆಂದರಲ್ಲಿ ಹರಿಯುವ ಕೊಳಚೆ ನೀರು, ಎಲ್ಲೆಂದರಲ್ಲಿ ಹರಡಿ ಬಿದ್ದಿರುವ ಕಸಗಳು ಸ್ವಾಗತಿಸುತ್ತವೆ.
ಬರಗಿ ಗ್ರಾಮದಲ್ಲಿಯೇ ಗ್ರಾಮ ಪಂಚಾಯತ್ ಕಚೇರಿಯಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಾಥಮಿಕ ಹಾಗೂ ಪ್ರೌಢಶಾಲೆ, ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು, ಸುತ್ತಮುತ್ತಲಿನ ಗ್ರಾಮಗಳ ಜನರು ತಮ್ಮೆಲ್ಲ ವ್ಯವಹಾರಕ್ಕೆ ಇಲ್ಲಿಗೆ ಬರುತ್ತಾರೆ.
ಇಂಥ ವ್ಯವಹಾರಿಕ ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿತ್ತು. ಆದರೆ ಗ್ರಾಪಂ ಮಾತ್ರ ಕಣ್ಣಿದ್ದೂ ಕುರುಡಾದಂತೆ ಕೂತಿದೆ. ಜನ ಕೂಡ ಬೇಕಾಬಿಟ್ಟಿ ಕಸ ಎಸೆಯುತ್ತಿದ್ದು, ಸಕಾಲದಲ್ಲಿ ಗ್ರಾಪಂ ತೆರವುಗೊಳಿಸದ ಕಾರಣದಿಂದ ರಸ್ತೆ ಬದಿ ಸೇರಿದಂತೆ ಎಲ್ಲೆಂದರಲ್ಲಿ ಕಸದ ರಾಶಿಗಳು ಹರಡಿ ಬಿದ್ದಿರುತ್ತವೆ. ಗಬ್ಬುನಾಥ ಸಹಿಸಲು ಅಸಾಧ್ಯವಾಗುತ್ತಿದೆ.
ಗ್ರಾಮಸ್ಥರ ಅನುಕೂಲಕ್ಕಾಗಿ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಹಕಾರ ಸಂಘಗಳ ಕಚೇರಿ ಮುಂಭಾಗ ಕದ ತೊಟ್ಟಿಯಿಟ್ಟಿದ್ದರೂ ಜನರು ಅದರೊಳಕ್ಕೆ ಹಾಕದೆ ಎಲ್ಲೆಂದರಲ್ಲಿ ಬಿಸಾಡಿ ತಮ್ಮ ಬೇಜವಾಬ್ದಾರಿಯನ್ನು ಮೆರೆಯುತ್ತಿದ್ದಾರೆ. ಗ್ರಾಮ ಪಂಚಾಯತ್ ಹೇಗಿದೆಯೋ ಜನರೂ ಹಾಗೇ ಇದ್ದಾರೆ. ಯಥಾ ರಾಜಾ ತಥಾ ಪ್ರಜಾ!
ಗ್ರಾಮದಲ್ಲಿ ಸಮರ್ಪಕ ಚರಂಡಿ ನಿರ್ಮಾಣ ಮಾಡದೆ ಇರುವುದರಿಂದ ಕೊಳಚೆ ನೀರು ರಸ್ತೆಯಲ್ಲೇ ಹರಿದು ಹೊಂಡಗಳಲ್ಲಿ ನಿಲ್ಲುತ್ತಿದೆ. ಇದರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ಗ್ರಾಮದಲ್ಲಿ ಚಿಕೂನ್ ಗೂನ್ಯಾ ಮುಂತಾದ ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚಾಗುವ ಸಾಧ್ಯತೆಯಿದೆ.
ಇನ್ನಾದರೂ ಸಂಬಂಧಿಸಿದ ಗ್ರಾಮ ಪಂಚಾಯತ್ ಗ್ರಾಮದಲ್ಲಿ ಶುಚಿತ್ವ ಕಾಪಾಡಿ ಜನರ ಆರೋಗ್ಯದೊಂದಿಗೆ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಆದ್ಯತೆ ನೀಡಲಿ. ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಎಚ್ಎಸ್ ಮಹದೇವ ಪ್ರಸಾದ್ ಅವರು ಅಸುನೀಗಿದ್ದಾರೆ. ಮುಖ್ಯಮಂತ್ರಿಗಳೊಮ್ಮೆ ಇಲ್ಲಿಗೆ ಭೇಟಿ ನೀಡಲಿ.