ಚಾಮರಾಜನಗರ: ಕರ್ನಾಟಕ ಗಡಿ ಕಟ್ಟೆಕಡೆಯ ಊರಲ್ಲಿ ಹೋರಿ ಬೆದರಿಸುವ ಸಂಭ್ರಮ ಹೇಗಿತ್ತು?-ಇಲ್ಲಿದೆ ಮಾಹಿತಿ
ಚಾಮರಾಜನಗರ, ಜನವರಿ, 17: ಕರ್ನಾಟಕದ ಕಟ್ಟಕಡೆಯ ಗ್ರಾಮವಾದ ಹನೂರು ತಾಲೂಕಿನ ಗೋಪಿನಾಥಂನಲ್ಲಿ ಇಂದು (ಜನವರಿ 17) ಸಂಕ್ರಾತಿ ಹಬ್ಬದ ಪ್ರಯುಕ್ತ ಹೋರಿ ಬೆದರಿಸಿ ಗ್ರಾಮಸ್ಥರು ಸಂಭ್ರಮಿಸಿದರು.
ಸಂಕ್ರಾತಿ ದಿನದಂದು ಕಿಚ್ಚು ಹಾಯಿಸುವ ಸಂಪ್ರದಾಯದಂತೆ ಗೋಪಿನಾಥಂ ಗ್ರಾಮದಲ್ಲಿ ಹೋರಿ ಬೆದರಿಸಿದ್ದು, ಈ ವೇಳೆ ಯುವಕರು ಸೇರಿದಂತೆ ಹಿರಿಯರು ಕೂಡ ಇದರಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ. ಗ್ರಾಮದ ಮಾರಿಯಮ್ಮ ದೇಗುಲದ ಮುಂಭಾಗ ಜಮಾಯಿಸಿದ ಹೊಗೆನಕಲ್, ಆಲಂಬಾಡಿ, ಪುದೂರಿನ ಗ್ರಾಮಸ್ಥರು ಎತ್ತುಗಳಿಗೆ ಬೆದರು ಬೊಂಬೆ ತೋರಿಸಿ ರೊಚ್ಚಿಗೆಬ್ಬಿಸಿ ಕಾದಾಡಿದ್ದಾರೆ.

ಇಂದು 50 ಎತ್ತುಗಳನ್ನು ಬೆದರಿಸಿದ್ದು, ಎತ್ತುಗಳಿಗೆ ಎಳೆಯುವ ಶಕ್ತಿ ಹೆಚ್ಚಾಗಲಿ, ದುಷ್ಟ ಶಕ್ತಿಗಳು ಹತ್ತಿರ ಸುಳಿಯದಿರಲೆಂದು ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಹೋರಿಯ ಎಡ-ಬಲವನ್ನು ಹಗ್ಗದಿಂದ ಹಿಡಿಯುವ 10ಕ್ಕೂ ಹೆಚ್ಚು ಯುವಕರು, ಬೆದರು ಬೊಂಬೆಯನ್ನು ತೋರಿಸಿ ಅದನ್ನು ರೊಚ್ಚಿಗೆಬ್ಬಿಸುತ್ತಾರೆ.
10-12 ಮಂದಿಯ ಹಿಡಿತವನ್ನು ಲೆಕ್ಕಿಸದ ಎತ್ತುಗಳು ಬೆದರುಬೊಂಬೆಯನ್ನು ತಿವಿದು, ಬಿಸಾಕುತ್ತವೆ. ಇದು ಜಲ್ಲಿಕಟ್ಟಿನಷ್ಟು ಅಪಾಯಕಾರಿ ಅಲ್ಲ. ಆದರೂ ಜಾಗೃತರಾಗಿರುವುದು ಅವಶ್ಯಕ. ರೈತರ ಹಬ್ಬ ಸಂಕ್ರಾಂತಿಯನ್ನು ಒಂದೊಂದು ಪ್ರದೇಶದಲ್ಲಿ ಒಂದು ವಿಶೇಷತೆಯೊಂದಿಗೆ ಆಚರಿಸಲಾಗುತ್ತಿದೆ. ಹೋರಿ ಬೆದರಿಸೋದು ಸಂಕ್ರಾಂತಿ ಸಡಗರವನ್ನು ಈ ಗ್ರಾಮದಲ್ಲಿ ಇಮ್ಮಡಿಗೊಳಿಸಿದೆ.












Click it and Unblock the Notifications