ಗುಂಡ್ಲುಪೇಟೆಯಲ್ಲಿ ಚೂರಿಯಿಂದ ಇರಿದು ಹತ್ಯೆಗೆ ಯತ್ನ
ಚಾಮರಾಜನಗರ, ಫೆಬ್ರವರಿ 14 : ವ್ಯಕ್ತಿಯೊಬ್ಬ ಶಿವರಾತ್ರಿ ಹಬ್ಬದ ದಿನದಂದೇ ಹಳೇ ದ್ವೇಷವನ್ನು ಮುಂದಿಟ್ಟುಕೊಂಡು ಜಗಳ ತೆಗೆದು ಚೂರಿಯಿಂದ ಹೊಟ್ಟೆ ಮತ್ತು ಎದೆಗೆ ಚುಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಗ್ರಾಮದ ಕಾಲೋನಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ಚೂರಿಯಿಂದ ಇರಿದಿದ್ದರಿಂದ ಕೆ.ಬಿ.ಸ್ವಾಮಿ ಗಂಭೀರಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೆ, ಹತ್ಯೆಗೆ ಯತ್ನಿಸಿದ ಮಹೇಶ್ ಪೊಲೀಸರ ಅತಿಥಿಯಾಗಿದ್ದಾನೆ. ಇವರಿಬ್ಬರು ಮದ್ದೂರು ಗ್ರಾಮದ ಕಾಲೋನಿ ನಿವಾಸಿಯಾಗಿದ್ದಾರೆ.
ಕ್ಷುಲ್ಲಕ ವಿಚಾರಕ್ಕೆ ಇವರ ನಡುವೆ ಜಗಳ ನಡೆದು ಒಬ್ಬರನೊಬ್ಬರು ದ್ವೇಷಿಗಳಾಗಿದ್ದರಲ್ಲದೆ, ಇವರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ನಡುವೆ ಇದು ಅತಿರೇಕಕ್ಕೆ ಹೋಗಿ ಸ್ವಾಮಿಯನ್ನು ಕೊಲೆಗೈಯ್ಯುವ ತೀರ್ಮಾನಕ್ಕೆ ಮಹೇಶ್ ಬಂದು ಬಿಟ್ಟಿದ್ದನು. ಅಲ್ಲದೆ ಶಿವರಾತ್ರಿಯಂದು ಅದಕ್ಕೆ ಸ್ಕೆಚ್ ಹಾಕಿದ ಆತ ತನ್ನೊಂದಿಗೆ ಚೂರಿ ತಂದಿದ್ದನು.

ಮಂಗಳವಾರ ಶಿವರಾತ್ರಿಯಾಗಿದ್ದು ಕೆಲವರು ಹಬ್ಬದ ಸಂಭ್ರಮದಲ್ಲಿದ್ದರೆ ಮಹೇಶ್ ಮಾತ್ರ ಸ್ವಾಮಿಯನ್ನು ಕೊಲೆ ಮಾಡಲು ಹೊಂಚು ಹಾಕುತ್ತಿದ್ದನು. ಅದರಂತೆ ಸಂಜೆ ಸ್ವಾಮಿ ಎದುರಾಗಿದ್ದು ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ತನ್ನ ಬಳಿಯಿದ್ದ ಚೂರಿಯಿಂದ ಸ್ವಾಮಿಯ ಹೊಟ್ಟೆ, ಎದೆ ಮತ್ತು ಕೈಗಳಿಗೆ ಚುಚ್ಚಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಗ್ರಾಮಸ್ಥರು ಜಗಳ ಬಿಡಿಸಿ ಗಾಯಾಳುವನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿ ಮಹೇಶನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಗುಂಡ್ಲುಪೇಟೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.











Click it and Unblock the Notifications